ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು, ಉತ್ತಮ ಆಡಳಿತ ನಡೆಯುತ್ತಿದೆ. ಹೈಕಮಾಂಡ್ ಹೇಳಿದಂತೆ ಪಾಲಿಸುತ್ತೇವೆ ಅಂತ ಇಬ್ಬರೂ ಹೇಳಿದ್ದಾರೆ. ಇದರಲ್ಲಿ ಅನುಮಾನ ಊಹೆ ಮಾಡುವಂತಹದ್ದು ಏನು ಇಲ್ಲ ಎಂದು ಮಡಿಕೇರಿಯಲ್ಲಿ ಸಚಿವ ಬೋಸರಾಜ್ ಹೇಳಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.11): ರಾಜ್ಯದಲ್ಲಿ ಹೇಳಿರುವುದನ್ನೇ ಸಿಎಂ ಸಿದ್ದರಾಮಯ್ಯನವರು ದೆಹಲಿಯಲ್ಲಿಯೂ ಹೇಳಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾಗುವುದಕ್ಕೆ ಸಿಎಂ, ಡಿಸಿಎಂ ಇಬ್ಬರು ದೆಹಲಿಗೆ ಹೋಗಿದ್ದರು. ಅಲ್ಲಿ ಮಾಧ್ಯಮದವರು ಕೇಳಿರುವುದರಿಂದ ಮುಂದೆಯೂ ನಾನೇ ಸಿಎಂ ಎಂದಿದ್ದಾರೆ ಎಂದು ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಷಯಕ್ಕೆ ಸಚಿವ ಎನ್.ಎಸ್.ಬೋಸರಾಜ್ ಹೇಳಿದ್ದಾರೆ. ಕುರ್ಚಿ ಖಾಲಿ ಇಲ್ಲ ಅಂತ ಸಿಎಂ ಅಂದಿದ್ದಾರೆ. ಡಿಸಿಎಂ ಕೂಡ ಕುರ್ಚಿ ಖಾಲಿ ಇಲ್ಲ ಎಂದಿದ್ದಾರೆ.

ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು, ಉತ್ತಮ ಆಡಳಿತ ನಡೆಯುತ್ತಿದೆ. ಹೈಕಮಾಂಡ್ ಹೇಳಿದಂತೆ ಪಾಲಿಸುತ್ತೇವೆ ಅಂತ ಇಬ್ಬರೂ ಹೇಳಿದ್ದಾರೆ. ಇದರಲ್ಲಿ ಅನುಮಾನ ಊಹೆ ಮಾಡುವಂತಹದ್ದು ಏನು ಇಲ್ಲ ಎಂದು ಮಡಿಕೇರಿಯಲ್ಲಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದ್ದಾರೆ. ಆದರೆ ಬಿಜೆಪಿಯವರಿಗೆ ಕೆಲಸವಿಲ್ಲ, ರಾಜ್ಯದ ಅಭಿವೃದ್ಧಿ ಕುಂದುಕೊರತೆಗಳ ಬಗ್ಗೆ ಅವರು ಮಾತನಾಡಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಸಿಎಂ, ಡಿಸಿಎಂ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಸ್ವಲ್ಪವೂ ನಾಚಿಕೆ ಇಲ್ಲ.

ವಿರೋಧ ಪಕ್ಷದ ಸ್ಥಾನದಲ್ಲಿರುವ ಆರ್ ಅಶೋಕ್, ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗೆ ನಾಚಿಕೆ ಮರ್ಯಾದೆ ಇಲ್ಲ. ಹಿಂದಿನಿಂದಲೂ ಮೈಸೂರಿಗೆ ಹೋಗುವಷ್ಟರಲ್ಲಿ ಸಿಎಂ ರಾಜೀನಾಮೆ ನೀಡ್ತಾರೆ ಅಂದ್ರು. ನಂತರ ಮೈಸೂರು ಪಬ್ಲಿಕ್ ಮೀಟಿಂಗ್ ಆದಕೂಡಲೇ ರಾಜೀನಾಮೆ ಕೊಡ್ತಾರೆ ಅಂದ್ರು. ಬೆಳಗಾವಿ ಅಧಿವೇಶನದಲ್ಲಿ ಮಾಡ್ತಾರೆ ರಾಜೀನಾಮೆ ಮಾಡ್ತಾರೆ ಅಂದ್ರು. ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೀಗೆ ಮಾತನಾಡುವುದಕ್ಕೆ ಅವರಿಗೆ ನಾಚಿಕೆ ಇಲ್ಲ. ಅವರ ಪಾರ್ಟಿ ಪರಿಸ್ಥಿತಿ ಏನಾಗಿದೆ ಅಂತ ಅವರಿಗೆ ಗೊತ್ತಿದೆಯಾ.

ಮೋದಿ ನೇತೃತ್ವದಲ್ಲಿ ಸರ್ಕಾರ ನಡೆಸುತ್ತಿರುವ ಅವರಿಗೆ ಎರಡು ವರ್ಷದಿಂದ ಅವರ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಿಕೊಳ್ಳಲಾಗಿಲ್ಲ. ರಾಜ್ಯದಲ್ಲಿ ಅಧ್ಯಕ್ಷರ ಸ್ಥಿತಿ ಏನಾಗುತ್ತೆ ಗೊತ್ತಿಲ್ಲ. ವಿಜಯೇಂದ್ರ ಆಗಲೇ ದೆಹಲಿಗೆ ಓಡಿಹೋಗಿದ್ದಾರೆ. ಅವರಿಗೆ ಗೊತ್ತಿಲ್ಲದಂತೆ ಕೆಲವರು ಕದ್ದು ದೆಹಲಿಗೆ ಹೋಗಿದ್ದಾರೆ. ಅವರ ಪಕ್ಷದ ಪರಿಸ್ಥಿತಿಯೇ ಸರಿಯಿಲ್ಲ. ಈ ದೇಶದಲ್ಲಿ ನಾಚಿಕೆ ಮಾನ ಮರ್ಯಾದೆ ಇಲ್ಲದವರು ಇದ್ದರೆ ಅದು ಬಿಜೆಪಿಯವರು ಮಾತ್ರ ಎಂದು ಮಡಿಕೇರಿಯಲ್ಲಿ ಬಿಜೆಪಿ ವಿರುದ್ಧ ಸಚಿವ ಭೋಸರಾಜ್ ಹರಿಹಾಯ್ದಿದ್ದಾರೆ.