ನನ್ನ ಪ್ರಕಾರ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡೂವರೆ ವರ್ಷ ಪೂರೈಸುತ್ತಾರೆ. ಹೀಗಾಗಿ, ಸಿಎಂ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ ಎಂದು ಯತೀಂದ್ರ ಹೇಳಿದ್ದಾರೆ.

ಮೈಸೂರು (ಜು.11): ನನ್ನ ಪ್ರಕಾರ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡೂವರೆ ವರ್ಷ ಪೂರೈಸುತ್ತಾರೆ. ಹೀಗಾಗಿ, ಸಿಎಂ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ. ಕೇಳೋದ್ರಲ್ಲಿ ತಪ್ಪಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಶಾಸಕರು. ಸಿಎಂ ಬದಲಾವಣೆ ಹೈಕಮಾಂಡ್ ಮುಂದೆ ಇಲ್ಲ. ಎಐಸಿಸಿ ಕಾರ್ಯದರ್ಶಿ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಬಂದಾಗಿನಿಂದ ಈ ಪ್ರಶ್ನೆಗೆ ಉತ್ತರ ಕೊಡುತ್ತಿದ್ದೇನೆ, ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಕೇಂದ್ರ ಓಬಿಸಿ ಕಮಿಟಿಗೆ ಸಿದ್ದರಾಮಯ್ಯ ನೇಮಕ ಪ್ರಶ್ನೆಗೆ ಕೆಂಡಮಂಡಲರಾದ ಅವರು, ಯಾರ್ರಿ ಹೇಳಿದ್ದು? ಮುಖ್ಯಮಂತ್ರಿ ಆದವರನ್ನು ಓಬಿಸಿ ಕಮಿಟಿಗೆ ಕಳುಹಿಸಿದರೆ ಪ್ರಮೋಷನ್ನಾ? ಸಿಎಂ‌ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ. ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ. ಹೀಗಾಗಿ, ಅಲ್ಲಿ ಸದಸ್ಯರಾಗಿರುತ್ತಾರೆ. ಅದು ಪ್ರಮೋಷನಾ? ನೀವೇ ಕಾಮನ್ ಸೆನ್ಸ್ ಉಪಯೋಗಿಸಿ ಎಂದರು.

ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ. ನೀವುಗಳೇ ಅದನ್ನು ಊಹೆ ಮಾಡಿಕೊಂಡರೆ ಹೇಗೆ? ಚರ್ಚೆ ಮಾಡುವವರಿಗೂ ಕಾಮನ್ ಸೆನ್ಸ್ ಇರಬೇಕಲ್ವಾ? ಯಾವ ಆಧಾರದಲ್ಲಿ ಹೀಗೆ ಹೇಳುತ್ತಿದ್ದಾರೆ? ಬಿಜೆಪಿ ಹೇಳೋದನ್ನೆಲ್ಲ ನೀವು ನಂಬಿದರೆ ಆಗಲ್ಲ. ನಮ್ಮ‌ ಸರ್ಕಾರ ಬಂದಾಗಿಂದ ಸರ್ಕಾರ ಬದಲಾಗುತ್ತೆ, ಸಿಎಂ ಬದಲಾಗ್ತಾರೆ ಅಂತಿದ್ದಾರೆ ಎಂದು ಅವರು ಕಿಡಿಕಾರಿದರು.

ರಂಭಾಪುರಿ ಶ್ರೀಗಳ ಹೇಳಿಕೆಗೆ ತಿರುಗೇಟು: ಉಚಿತ ಭಾಗ್ಯಗಳಿಂದ ಜನ ಸೋಮಾರಿ ಆಗುತ್ತಿದ್ದಾರೆಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಯತೀಂದ್ರ ಅವರು, ಇದನ್ನು ಈಗಲ್ಲ, ಕಳೆದ ಬಾರಿ ಭಾಗ್ಯಗಳನ್ನು ಕೊಟ್ಟಾಗಲೂ ಹೀಗೇ ಹೇಳುತ್ತಿದ್ರು. ಯಾರಾದರು ಸೋಮಾರಿಗಳಾದ್ರಾ? ಆಗಲ್ಲ. ಬಡವರು ಹೊಟ್ಟೆ ತುಂಬ ಊಟ ತಿಂದು ಸೋಂಬೇರಿ ಆಗೋದಿಲ್ಲ. ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲ ಸಿಗುತ್ತಾ? ಜೀವನಕ್ಕಾಗಿ ಅವರು ದುಡಿಯುತ್ತಾರೆ ಎಂದು ತಿರುಗೇಟು ನೀಡಿದರು.

ಇದು ತಲತಲಾಂತರದಿಂದ ಬೇರೊಬ್ಬರ ಕೈಲಿ ದುಡಿಸಿಕೊಂಡು ಸುಖವಾಗಿ ಬಂದಿರೋರು ಹೇಳುವ ಮಾತುಗಳು. ಇದೇ ಪ್ರಶ್ನೆಯನ್ನು ಶ್ರೀಮಂತರ ಸಾಲ ಮನ್ನಾ ಮಾಡುವ ಕೆಂದ್ರ ಸರ್ಕಾರಕ್ಕೆ ಕೇಳಿ. ಆವಾಗ ಕೇಳದ ಇವರಿಗೆ ಬಡವರಿಗೆ ಕೊಟ್ಟಾಗ ಯಾಕೆ ಕಣ್ಣುರಿ. ಯಾರು ಏನೇ ಟೀಕೆ ಮಾಡಿದರೂ ನಾವು ಕೊಟ್ಟೇ ಕೊಡ್ತೀವಿ ಎಂದರು.