ಬಿಜೆಪಿ ಪಕ್ಷದ ಮಡಿಕೆ ಒಡೆದುಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ಅದು ನಿಲ್ಲುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. 

ನಾಗಮಂಗಲ (ನ.12): ಬಿಜೆಪಿ ಪಕ್ಷದ ಮಡಿಕೆ ಒಡೆದುಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ಅದು ನಿಲ್ಲುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಿರುವ ಕುರಿತು ಪ್ರತಿಕ್ರಿಯಿಸಿ, ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ ದಿನವೇ ಬಿಜೆಪಿ ಮಡಿಕೆ ಒಡೆದುಹೋಗಿದೆ. ವಿಜಯೇಂದ್ರ ಅವರನ್ನು ಮಂತ್ರಿ ಮಾಡುವಂತೆ ಕೇಳಿದಾಗಲೂ ಮಾಡಲಿಲ್ಲ. ಈಗ ಪರಿಸ್ಥಿತಿಯ ಅರಿವಾಗಿ ಅದಕ್ಕೆ ತೇಪೆ ಹಾಕೋಕೆ ಹೋಗಿದ್ದಾರೆ. 

Add Asianetnews Kannada as a Preferred SourcegooglePreferred

ಏನೇ ಮಾಡಿದರೂ ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಇದ್ದ ಶಕ್ತಿ ಯಾವುದೇ ಕಾರಣಕ್ಕೂ ಈಗ ಬರುವುದಿಲ್ಲ ಎಂದು ಖಡಕ್ಕಾಗಿ ನುಡಿದರು. ಯಡಿಯೂರಪ್ಪ ಇದ್ದ ಸಮಯದಲ್ಲೇ ಬಿಜೆಪಿ115 ಸ್ಥಾನ ದಾಟಲಿಲ್ಲ. ಇವಾಗ ಆ ಶಕ್ತಿ ಬರೋದೆ ಇಲ್ಲ. ವಿಜಯೇಂದ್ರ ಒಳ್ಳೆಯವನು. ಅವನ ಬಗ್ಗೆ ನನಗೆ ಗೌರವವಿದೆ. ವಿಜಯೇಂದ್ರ ನನ್ನ ಸ್ನೇಹಿತ‌. ಯಡಿಯೂರಪ್ಪನವರ‌ ಬಗ್ಗೆಯೂ ಗೌರವವಿದೆ ಎಂದರು. ಬಿಜೆಪಿಯಿಂದ ವಂಶ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದ್ದೇ ಇದೆ. 

ಟೀಕಿಸುವವರಿಗೆ ಕೋಲಾರ ಜಿಲ್ಲಾಭಿವೃದ್ಧಿಯೇ ಉತ್ತರ: ಸಿಎಂ ಸಿದ್ದರಾಮಯ್ಯ

ಕುಮಾರಸ್ವಾಮಿ ವಂಶ ರಾಜಕಾರಣ ಮಾಡುತ್ತಿಲ್ಲವೇ. ಬಿಜೆಪಿ ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ರೀಚ್ ಆಗೋಕೆ ಆಗೋಲ್ಲ. ಕುಮಾರಸ್ವಾಮಿ ಅವರನ್ನು ಸೇರಿಸಿಕೊಳ್ಳೋಕೆ ಹೇಗೆ ಒದ್ದಾಡುತ್ತಿದ್ದಾರೆ. ಹಾಗೆಯೇ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ಕುಹಕವಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ಬಿಜೆಪಿ ವಿಶ್ವಾಸ ವಿಚಾರವಾಗಿ, ಈ ಸಲ ಬಿಜೆಪಿ ಸಂಸದರು ರಾಜ್ಯದಲ್ಲಿ 10 ಕ್ಕಿಂತಲು ಕಡಿಮೆ ಆಗುತ್ತಾರೆ ಎಂದು ಖಚಿತವಾಗಿ ನುಡಿದರು.

ಜೆಡಿಎಸ್-ಬಿಜೆಪಿ ಶಾಸರಿಗೆ ಭವಿಷ್ಯದ ಅಭದ್ರತೆ: ಪ್ರಸ್ತುತ ಜೆಡಿಎಸ್ ಮತ್ತು ಬಿಜೆಪಿ ಶಾಸಕರಿಗೆ ತಮ್ಮ ಮುಂದಿನ ಭವಿಷ್ಯ ಏನು ಎನ್ನುವ ಅಭದ್ರತೆ ಕಾಡುತ್ತಿದೆ. ಕೆಲ ಶಾಸಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಏನೇನು ಮಾಡಿದರು ಎನ್ನುವ ಬಗ್ಗೆ ನಮಗೆ ಇತಿಹಾಸವೇ ಗೊತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಗರದಲ್ಲಿ ಹಾಸನಾಂಬೆ ದರ್ಶನ ಪಡೆದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಮ್ಮ ಪಕ್ಷ ಸುಭದ್ರವಾಗಿದೆ. ಪಕ್ಷದಲ್ಲಿ ಯಾವುದೇ ಕಂಪ್ಲೆಂಟ್ ಇಲ್ಲ. 

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸುಭದ್ರವಾಗಿದೆ. ಯಾವುದೇ ತರಹದ ಸಮಸ್ಯೆ ಇಲ್ಲ ಎಂದು ಹೇಳಿದರು. ‘ಸಿಎಂ ಅನುಭವ ಇರುವಂತಹವರು. ನಮ್ಮ ಸಿಎಂಗೆ ಜನರ ಸಮಸ್ಯೆ ಮುಖ್ಯ. ಕುಮಾರಸ್ವಾಮಿಗೆ ಬರೀ ರಾಜಕಾರಣ ಮುಖ್ಯ. ನಾವು ಜನರ ಪರ ನಿಂತುಕೊಳ್ಳುವವರು. ಐದು ಸ್ಕೀಂ ಕೊಟ್ಟಿದ್ದೀವಿ. ಈಗ ಬರಗಾಲ, ಕಾವೇರಿ ಸಮಸ್ಯೆ ಎದುರಿಸುತ್ತಿದ್ದೇವೆ. ಕುಮಾರಸ್ವಾಮಿ ಅವರು ಏನೇನು ಮಾಡಿದ್ರು ಅಂತ ಇತಿಹಾಸ ಗೊತ್ತಿದೆ’ ಎಂದು ಕುಟುಕಿದರು.

ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ನಮ್ಮಲ್ಲಿ ತಿಂದು, ತೇಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ‘ಹೌದು ಅವರು ಯಾರ? ಯಾರನ್ನು ಉಪಯೋಗಿಸಿಕೊಂಡು ತಿಂದು ತೇಗಿದ್ದಾರಲ್ಲಾ ಅದಕ್ಕೆ ಉತ್ತರ ಹೇಳಲು ಮೊದಲು ಹೇಳಿ. ಅವರು ಎಲ್ಲರ ಸಹಕಾರ ತೆಗೆದುಕೊಂಡು ತಿಂದು ತೇಗಿದ್ದಾರೆ. ಅದೇ ತರಹ ಬೇರೆಯವರು ಅಂತ ಹೇಳಲಿ’ ಎಂದರು. ಜೆಡಿಎಸ್‌ನಲ್ಲಿ ಯಾರಾದರೂ ಪಕ್ಷ ಬಿಟ್ಟು ಹೋಗ್ತಾರೆ ಅಂತ ಅವರಿಗೆ ಭಯ ಇರಬೇಕು. ಹಾಸನಾಂಬೆ ದೇವತೆ ಹತ್ತಿರ ಕರೆದುಕೊಂಡು ಬಂದು ಕಮಿಟ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪಕ್ಷದ ಕೆಲಸ ಅವರು ಮಾಡ್ತಾರೆ, ತಪ್ಪೇನು ಇಲ್ಲವಲ್ಲ. ನಮಗೆ ೧೩೬ ಶಾಸಕರು ಇದ್ದಾರೆ. ಕೆಲವರಿಗೆ ಅವಕಾಶ ಸಿಕ್ಕಿದರೆ ಬರಬೇಕು ಎನ್ನುವ ಆಸೆಯಲ್ಲಿದ್ದಾರೆ. ಬಂದರೆ ನಾವೇನು ಬೇಡ ಅನ್ನಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬಲವಂತ ಮಾಡಿ ಕರೆದುಕೊಳ್ಳುವ ಪರಿಸ್ಥಿತಿ ಏನಿಲ್ಲ. ಜೆಡಿಎಸ್‌ ಅಭದ್ರತೆಯಿಂದಲೇ ಬಿಜೆಪಿ ಜೊತೆ ಹೊಂದಾಣಿಕೆಗೆ ಹೋಗಿದೆ ಎಂದು ಹೇಳಿದರು.