ಒಬ್ಬ ವ್ಯಕ್ತಿಯ ಜತೆಗೆ ಫೋಟೋ ತೆಗೆಸಿಕೊಂಡರೆ ಆತನೊಂದಿಗೆ ನೆಂಟಸ್ತಿಕೆಯಿದೆ ಎಂದು ಅರ್ಥವಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 

ಸುವರ್ಣ ವಿಧಾನಸೌಧ (ಡಿ.08): ಒಬ್ಬ ವ್ಯಕ್ತಿಯ ಜತೆಗೆ ಫೋಟೋ ತೆಗೆಸಿಕೊಂಡರೆ ಆತನೊಂದಿಗೆ ನೆಂಟಸ್ತಿಕೆಯಿದೆ ಎಂದು ಅರ್ಥವಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಹುಬ್ಬಳ್ಳಿ ಸಮಾವೇಶವೊಂದರಲ್ಲಿ ಐಸಿಸ್‌ ಜತೆ ನಂಟಿರುವವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ರಾಜಕಾರಣಿ ಪಕ್ಕದಲ್ಲಿ ನಿಂತು ಯಾರಾದರೂ ಫೋಟೋ ತೆಗೆಸಿಕೊಂಡರೆ ಮಾತ್ರ ಆರೋಪ ಬರುತ್ತದೆ. ದೇಶದಲ್ಲಿ ಕಾನೂನು ಕಠಿಣವಾಗಿದೆ. ಯಾರಾದರೂ ತಪ್ಪು ಮಾಡಿದವರಿದ್ದರೆ ಅವರ ವಿರುದ್ಧ ಕ್ರಮವಾಗಲಿದೆ. ಅದನ್ನು ಹೊರತುಪಡಿಸಿ ವೇದಿಕೆ ಹಂಚಿಕೊಂಡಿದ್ದು, ಫೋಟೋ ತೆಗೆಸಿಕೊಂಡಿದ್ದರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಸಂಬಂಧ ಕಲ್ಪಿಸುವುದು ತಪ್ಪು ಎಂದರು.

Add Asianetnews Kannada as a Preferred SourcegooglePreferred

2,320 ದೈಹಿಕ ಶಿಕ್ಷಕರ ನೇಮಕಾತಿಗೆ ಕ್ರಮ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 2320 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಬಿಜೆಪಿಯ ಎಸ್‌.ವಿ. ಸಂಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ರಾಜ್ಯದ 41,913 ಪ್ರಾಥಮಿಕ ಶಾಲೆಗಳಲ್ಲಿ 6,772 ದೈಹಿಕ ಶಿಕ್ಷಕ ಹುದ್ದೆ ಮಂಜೂರಾಗಿದ್ದು, 4,127 ಹುದ್ದೆಗಳು ಭರ್ತಿಯಾಗಿವೆ. ಅದೇ ರೀತಿ 4,844 ಪ್ರೌಢಶಾಲೆಗಳಲ್ಲಿ 5,210 ದೈಹಿಕ ಶಿಕ್ಷಕರ ಹುದ್ದೆ ಮಂಜೂರಾಗಿದ್ದು, 3,589 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ವಾತಂತ್ರ್ಯ ಬಂದು 76 ವರ್ಷ ಕಳೆದರು ಇನ್ನೂ ಗುಡಿಸಲುಗಳಲ್ಲೇ ಬುಡಕಟ್ಟು ಸೋಲಿಗರ ವಾಸ!

ಹೀಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಲಿಯಿಂದ ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 2,120 ದೈಹಿಕ ಶಿಕ್ಷಕರ ಹುದ್ದೆಗಳು ಹಾಗೂ ಪ್ರೌಢಶಾಲೆಗೆ 200 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುತ್ತಿದ್ದು, ಅನುಮತಿ ದೊರೆತ ಕೂಡಲೆ ಖಾಲಿ ಹುದ್ದೆ ನೇಮಕಾತಿ ಆರಂಭಿಸಲಾಗುವುದು ಎಂದರು.

ಬಿಲ್ಲವ, ಆರ್ಯ, ಈಡಿಗರಲ್ಲಿ ಒಗ್ಗಟ್ಟು ಅಗತ್ಯ: ಬಿಲ್ಲವ, ಆರ್ಯ, ಈಡಿಗ ಸಮಾಜದಲ್ಲಿ ಸಂಘಟನೆಯ ಕೊರತೆಯಿಂದಾಗಿ ಹಿನ್ನಡೆಯಾಗಿದ್ದು ಆರ್ಯ, ಈಡಿಗ ಸೇರಿದಂತೆ 26 ಪಂಗಡಗಳು ಒಗ್ಗಟ್ಟನ್ನು ಪ್ರದರ್ಶಿಸಿದಲ್ಲಿ ಸಮಾಜ ಬಲಯುತವಾಗಲು ಸಾಧ್ಯವೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಮೂಲ್ಕಿಯ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿ.10ರಂದು ಬೆಂಗಳೂರಿನಲ್ಲಿ ಆರ್ಯ, ಈಡಿಗ ಸಂಘದ ಅಮೃತ ಮಹೋತ್ಸವ ಪ್ರಯುಕ್ತ ಸಮಾಜದ ಬೃಹತ್‌ ಸಮಾವೇಶ ನಡೆಯಲಿದ್ದು ಒಗ್ಗಟನ್ನು ಪ್ರದರ್ಶಿಸಿದಲ್ಲಿ ನಾರಾಯಣ ಗುರು ಅಭಿವೃದ್ದಿ ನಿಗಮ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಪಡೆಯಲು ಸಾಧ್ಯ. 

ಪ್ರಾಣಿಗಳು ಹೆಚ್ಚಿದಾಗ ಬೇಟೆಗೆ ಅವಕಾಶ ನೀಡಿ: ಶಾಸಕ ಆರಗ ಜ್ಞಾನೇಂದ್ರ

ಮಹಾನ್‌ ದಾರ್ಶನಿಕರಾದ ನಾರಾಯಣ ಗುರುಗಳು, ಅಂಬೇಡ್ಕರ್‌, ಗಾಂಧಿ, ವಿವೇಕಾನಂದರು ಸೇರಿದಂತೆ ಎಲ್ಲರಿಗೂ ಮಾರ್ಗದರ್ಶಕರಾಗಿದ್ದು ನಾರಾಯಣ ಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು. ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಸಂಘಟನೆ ಹಾಗೂ ಒಗ್ಗಟ್ಟಿನ ಮೂಲಕ ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜ ಮತ್ತೆ ಎದ್ದು ನಿಲ್ಲಲು ಸಾಧ್ಯವಿದೆ ಎಂದು ಹೇಳಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಡಾ. ರಾಜ್‌ ಶೇಖರ್‌ ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು.