ಬಿಜೆಪಿಯವರು ಅಗತ್ಯಕ್ಕೆ ತಕ್ಕಂತೆ ಜಾತೀಯತೆ, ಜಾತ್ಯತೀತತೆಯ ಬಗ್ಗೆ ಮಾತನಾಡುತ್ತಾರೆ. ಕೈ ಮುಗಿದು ಒಳಗೆ ಬಾ ಅಥವಾ ಧೈರ್ಯವಾಗಿ ಪ್ರಶ್ನಿಸಿ ಎನ್ನುವುದು ಎರಡೂ ಒಂದೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಸತಿ ಶಾಲೆಗಳ ದ್ವಾರದ ಬರಹ ಬದಲಾವಣೆ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ. 

ಹುಬ್ಬಳ್ಳಿ (ಫೆ.20): ಬಿಜೆಪಿಯವರು ಅಗತ್ಯಕ್ಕೆ ತಕ್ಕಂತೆ ಜಾತೀಯತೆ, ಜಾತ್ಯತೀತತೆಯ ಬಗ್ಗೆ ಮಾತನಾಡುತ್ತಾರೆ. ಕೈ ಮುಗಿದು ಒಳಗೆ ಬಾ ಅಥವಾ ಧೈರ್ಯವಾಗಿ ಪ್ರಶ್ನಿಸಿ ಎನ್ನುವುದು ಎರಡೂ ಒಂದೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಸತಿ ಶಾಲೆಗಳ ದ್ವಾರದ ಬರಹ ಬದಲಾವಣೆ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳು ಶಾಲೆಗೆ ಬರುವುದು ಜ್ಞಾನಾರ್ಜನೆಗಾಗಿ, ಜ್ಞಾನದಿಂದ ಆತ್ಮಬಲ ಹೆಚ್ಚುತ್ತದೆ. ಕೈಮುಗಿದು ಒಳಗೆ ಬಾ, ಧೈರ್ಯವಾಗಿ ಪ್ರಶ್ನಿಸಿ ಇವೆರಡೂ ಪದಗಳು ತದ್ವಿರುದ್ಧವಾಗಿರುವುದಲ್ಲ, ಜ್ಞಾನ ದೇಗುಲಕ್ಕೆ ಜ್ಞಾನ ತೆಗೆದುಕೊಳ್ಳಲು ಬನ್ನಿ, ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಧೈರ್ಯದಿಂದ ಜೀವನ ಸಾಗಿಸಿ ಎಂದು. ಈ ಬಗ್ಗೆ ಹೆಚ್ಚು ಹೇಳಿಕೆ ನೀಡಿದರೆ ಪರ-ವಿರೋಧ ಹೆಚ್ಚಾಗುತ್ತದೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರನ್ನೇ ಕೇಳಿ: ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಿಲ್ಲ ಎಂಬ ಸಚಿವ ಸಂತೋಷ ಲಾಡ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ, ಈ ಬಗ್ಗೆ ಸೂಕ್ತ ಉತ್ತರ ಬೇಕಾದಲ್ಲಿ ಸಂತೋಷ ಲಾಡ್ ಅವರನ್ನೇ ಕೇಳಿ. ನಾವು ರಾಮರಾಜ್ಯದ ಪರಿಕಲ್ಪನೆಯ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಮನುಷ್ಯ ನಿಧನವಾದ ಬಳಿಕ ರಾಮ ನಾಮ ಜಪಿಸುತ್ತೇವೆ. ಆ ಸದ್ಗತಿ ಸಿಗಲಿ ಎನ್ನುವುದೇ ರಾಮರಾಜ್ಯ ಪರಿಕಲ್ಪನೆ. ರಾಮರಾಜ್ಯದಲ್ಲಿ ಎಲ್ಲರೂ ಸಂತೋಷವಾಗಿರಬೇಕು. ಈ ಪರಿಕಲ್ಪನೆ ತಂದವರೇ ಕಾಂಗ್ರೆಸ್ಸಿನವರು ಎಂದರು.

ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶೀಘ್ರವೇ ಅಭ್ಯರ್ಥಿಯ ಹೆಸರು ಅಂತಿಮವಾಗಲಿದೆ. ನಮ್ಮ ಎದುರಾಳಿ ಪ್ರಹ್ಲಾದ ಜೋಶಿ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅವರು ಈ ಹಿಂದೆ ನಾಲ್ಕು ಬಾರಿ ಆಯ್ಕೆಯಾದವರು, ಕೇಂದ್ರದಲ್ಲಿ ಸಚಿವರಾದವರು. ಅವರನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯ ಆಯ್ಕೆ ಪ್ರಗತಿಯಲ್ಲಿದ್ದು, ಶೀಘ್ರ ಅಂತಿಮಗೊಳಿಸುತ್ತೇವೆ ಎಂದರು.

ಕಾಂಗ್ರೆಸ್‌ ಮುಖಂಡ ರಜತ್ ಉಳ್ಳಾಗಡ್ಡಿಮಠ ಶಕ್ತಿ ಪ್ರದರ್ಶನ ವಿಚಾರವಾಗಿ ಮಾತನಾಡಿ, ರಜತ್ ನನ್ನ ಅಳಿಯ ಎನ್ನುವ ಕಾರಣಕ್ಕೆ ಅರ್ಜಿ ಹಾಕಿಲ್ಲ, ಹೈಕಮಾಂಡ್‌ ಎಲ್ಲವನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಎಲ್ಲರ ಅಭಿಪ್ರಾಯ ಪಡೆದೆ ಲೋಕಸಭೆಗೆ ಅಭ್ಯರ್ಥಿ ಅಂತಿಮಗೊಳಿಸಲಾಗುತ್ತದೆ. ಇಡೀ ರಾಜ್ಯದಲ್ಲಿ ಯುವಕರಿಗೆ ಮತ್ತು ಹಿರಿಯರಿಗೆ ಇಬ್ಬರಿಗೂ ಅವಕಾಶ ಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

40 ವಕೀಲರ ಮೇಲೆ ಸುಳ್ಳು ಎಫ್‌ಐಆರ್: ಪಿಎಸ್ಐ ಸಸ್ಪೆಂಡ್ ಮಾಡುವಂತೆ ನ್ಯಾಯವಾದಿಗಳ ಪ್ರತಿಭಟನೆ!

ಬೆಳಗಾವಿ ಲೋಕಸಭೆಗೆ ತಮ್ಮ ಪುತ್ರನಿಗೆ ಟಿಕೆಟ್ ಕೇಳಿರುವ ವಿಚಾರವಾಗಿ ಮಾತನಾಡಿ, ನನ್ನ ಸಹೋದರ ಚೆನ್ನರಾಜ ಹಟ್ಟಿಹೊಳಿ ಸಹ ಟಿಕೆಟ್ ಕೇಳಿರಲಿಲ್ಲ, ಜಿಲ್ಲೆಯ ಮುಖಂಡರು, ಸೂಕ್ತ ಅಭ್ಯರ್ಥಿ ಅಂದಾಗ ಅಖಾಡಕ್ಕಿಳಿದರು, ಪ್ರತಿಕೂಲ ವಾತಾವರಣದಲ್ಲಿಯೂ ಗೆದ್ದು ಬಂದರು. ನನ್ನ ಮಗನೂ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಕೊಟ್ಟಿದ್ದಾನೆ. ಟಿಕೆಟ್ ಕೊಡಲೇಬೇಕು ಅಂತ ನಾನು ಎಲ್ಲಿಯೂ ಒತ್ತಾಯಿಸಿಲ್ಲ, ಹೈಕಮಾಂಡ್ ಮತ್ತು ಜಿಲ್ಲೆಯ ಮುಖಂಡರ ತೀರ್ಮಾನಕ್ಕೆ ನಾನು ಬದ್ಧ ಎಂದರು.