‘ರಾಜ್ಯ ಸರ್ಕಾರವು ಅಕ್ಕಿ ಸಿಗದಿದ್ದರೆ ಬಡವರಿಗೆ ಹೆಚ್ಚುವರಿ ಅಕ್ಕಿ ಬದಲು ಹಣ ನೀಡಲಿ ಎಂದು ಬಿಜೆಪಿಯವರೇ ಒತ್ತಾಯ ಮಾಡಿದ್ದರು. ಇದೀಗ ಹಣ ನೀಡುವುದನ್ನೂ ವಿರೋಧಿಸುತ್ತಿದ್ದಾರೆ. ಅಕ್ಕಿ, ಹಣ ಎರಡೂ ನೀಡದೆ ಬಡವರು ಹಸಿವಿನಿಂದ ಒದ್ದಾಡಬೇಕು ಎಂಬುದು ಬಿಜೆಪಿಯವರ ಹುನ್ನಾರ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ್‌ ಕಿಡಿಕಾರಿದ್ದಾರೆ. 

ಬೆಂಗಳೂರು (ಜೂ.29): ‘ರಾಜ್ಯ ಸರ್ಕಾರವು ಅಕ್ಕಿ ಸಿಗದಿದ್ದರೆ ಬಡವರಿಗೆ ಹೆಚ್ಚುವರಿ ಅಕ್ಕಿ ಬದಲು ಹಣ ನೀಡಲಿ ಎಂದು ಬಿಜೆಪಿಯವರೇ ಒತ್ತಾಯ ಮಾಡಿದ್ದರು. ಇದೀಗ ಹಣ ನೀಡುವುದನ್ನೂ ವಿರೋಧಿಸುತ್ತಿದ್ದಾರೆ. ಅಕ್ಕಿ, ಹಣ ಎರಡೂ ನೀಡದೆ ಬಡವರು ಹಸಿವಿನಿಂದ ಒದ್ದಾಡಬೇಕು ಎಂಬುದು ಬಿಜೆಪಿಯವರ ಹುನ್ನಾರ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ್‌ ಕಿಡಿಕಾರಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕೇಂದ್ರವನ್ನು ಅಕ್ಕಿ ಕೇಳಿದಾಗ ಕೊಡಿಸಲಾಗದೆ ಅಕ್ಕಿ ಬದಲು ಹಣ ನೀಡಿ ಎಂದು ರಾಜ್ಯದ ಬಿಜೆಪಿ ನಾಯಕರೇ ಹೇಳಿದ್ದರು. 

ಇದೀಗ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಬಡವರೇ ಖರೀದಿ ಮಾಡಲು ಅನುವಾಗಲಿ ಎಂಬ ಉದ್ದೇಶದಿಂದ ಹಣ ನೀಡುತ್ತಿದ್ದೇವೆ. ತಾತ್ಕಾಲಿಕ ಪರ್ಯಾಯವಾಗಿ ಹಣ ನೀಡಿದ್ದು, ಬಿಜೆಪಿಯವರ ಪ್ರಕಾರ ಬಡವರಿಗೆ ಅಕ್ಕಿಯೂ ಕೊಡಬಾರದು, ಹಣವೂ ನೀಡಬಾರದು. ಬಡವರ ಹಸಿವಿನಿಂದ ನರಳಬೇಕು ಎಂಬುದು ಅವರ ಬಯಕೆ. ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು. ಅಕ್ಕಿ ಇದ್ದರೂ ನೀಡದೆ ಖಾಸಗಿಯವರಿಗೆ ನೀಡಿದ ಕೇಂದ್ರದ ನಡೆಯನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಎಲ್ಲದಕ್ಕೂ ರಾಜ್ಯದ ಜನರೇ ಮುಂದಿನ ಕಾಲದಲ್ಲಿ ಉತ್ತರ ನೀಡಲಿದ್ದಾರೆ ಎಂದರು.

ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ

ಆಹಾರ ನಿಗಮ ಸ್ಥಾಪನೆ ಬಗ್ಗೆ ಚರ್ಚೆ: ರಾಜ್ಯ ಸರ್ಕಾರವು ಮುಂದೆ ಮುಕ್ತ ಮಾರುಕಟ್ಟೆಯಲ್ಲಿ ಪಾರದರ್ಶಕ ಟೆಂಡರ್‌ ಮೂಲಕ ಅಕ್ಕಿ ಖರೀದಿಸಲಿದೆ. ಇದಕ್ಕೆ ಪ್ರತ್ಯೇಕ ಆಹಾರ ನಿಗಮ ಸ್ಥಾಪಿಸಬೇಕೆ ಅಥವಾ ಬೇರೆ ಯಾವ ರೂಪದಲ್ಲಿ ಸಂಗ್ರಹಿಸಬೇಕು ಎಂಬ ಬಗ್ಗೆ ಮುಂದೆ ಚರ್ಚಿಸಲಾಗುವುದು ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

ಕರ್ನಾಟಕದ ಜನ ಪಾಠ ಕಲಿಸಿದರೂ ಬುದ್ಧಿ ಬಂದಿಲ್ಲವಾ?: ಕರ್ನಾಟಕ ಜನ ಪಾಠ ಕಲಿಸಿದರೂ ಬುದ್ಧಿ ಬಂದಿಲ್ಲವಾ? ಯಾವ ಮಟ್ಟದಲ್ಲಿ ರಾಜಕಾರಣ ಮಾಡುತ್ತಿದ್ದೀರಿ? ಜನಪರ ಕಾರ್ಯಕ್ರಮಗಳ ಕುತ್ತಿಗೆ ಹಿಸುಕುವ ಕೆಲಸ ಮಾಡಿದರೇ ನೆಟ್ಟಗಾಗಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೇ ತಾರೀಖು ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಎಫ್‌ಸಿಐಗೆ ಪತ್ರ ಬರೆದು ಕೇಳಿದಾಗ ಅವರು ನಿಮಗೆ ಎಷ್ಟುಅವಶ್ಯ ಇದೆ ಅಷ್ಟುಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. 

ಎಫ್‌ಸಿಐ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಮುಖ್ಯಮಂತ್ರಿಗಳ ಜೊತೆಗೂ ಮಾತನಾಡಿದ್ದರು. ಇನ್ನೇನು ಪ್ರಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲಿ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. 13ನೇ ತಾರೀಖು ಎಫ್‌ಸಿಐ ಪತ್ರ ಬರೆದು ಈಶಾನ್ಯ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಅಂತಾ ತಿಳಿಸಿದೆ. ಎಫ್‌ಸಿಐ ಬಳಿ 15 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನಿದೆ, ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದ್ದಾರೆ. ನಮಗೆ ಬೇಕಾಗಿದ್ದು 2 ಲಕ್ಷ 8 ಸಾವಿರ ಟನ್‌ ಅಕ್ಕಿ ಮಾತ್ರ. ಆದ್ರೆ ರಾಜ್ಯಗಳಿಗೆ ಕೊಡಬೇಡಿ. ಖಾಸಗಿಯವರಿಗೆ ಮಾರಾಟ ಮಾಡಿ ಅಂತಿದ್ದಾರೆ ಎಂದರೆ ಇವರು ಎಷ್ಟುಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಆರ್‌.ನರೇಂದ್ರ

ಆರ್‌. ಅಶೋಕ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆರ್‌. ಆಶೋಕ್‌ ಅವರನ್ನು ಕೇಳಿ ಗ್ಯಾರಂಟಿ ಕಾರ್ಡ್‌ಗೆ ಸೈನ್‌ ಮಾಡಬೇಕಿತ್ತಾ? ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಮಾರಾಟ ಮಾಡೋದಕ್ಕೆ ಇರೋದು, ಅದನ್ನು ಅರ್ಥ ಮಾಡಿಕೊಳ್ಳಿ, ನಮಗೆ ಕೊಡಬೇಡಿ, ಖಾಸಗಿಯವರಿಗೆ ಕೊಡಿ ಅಂದರೆ ಹೇಗೆ? ಎಂದು ಪ್ರಶ್ನಿಸಿದರು. ಸಂವಿಧಾನದ ಸದಾಶಯಗಳನ್ನು ಮೊಟಕುಗೊಳಿಸಲು ಪ್ರಯತ್ನ ಮಾಡಿದ್ದೀರಿ, ನಾವು ಫ್ರೀ ಕೇಳಿಲ್ಲ. ಹಣ ಕೊಟ್ಟು ಪಡೀತೀವಿ. ರಾಜ್ಯದ ಸಂಪತ್ತಿನಿಂದ ಹಣ ಖರ್ಚು ಮಾಡುತ್ತೇವೆ. ನಮಗೆ ಸಾಂವಿಧಾನಿಕ ಹಕ್ಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.