ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ, ನಾಗರಿಕ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಕಾರ್ಯಗಳು ಪಕ್ಷದ ಸಂಕಲ್ಪ ಬಲದಿಂದ ಕಾರ್ಯಗತಗೊಂಡಿವೆ ಎಂದ ಅಶ್ವತ್ಥನಾರಾಯಣ

ಬೆಂಗಳೂರು(ನ.23): ಭಾರತೀಯ ಜನತಾ ಪಕ್ಷವು ವ್ಯವಸ್ಥೆಯ ಸಕಾರಾತ್ಮಕ ಬದಲಾವಣೆಗೆ ಪೂರಕವಾದ ಪಕ್ಷವಾಗಿದೆ. ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಹಿಂದೆ ಊಹಿಸಲು ಸಾಧ್ಯವಾಗದಷ್ಟುಕೆಲಸಗಳಾಗಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಲ್ಲೇಶ್ವರ ಮಂಡಲದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ, ನಾಗರಿಕ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಕಾರ್ಯಗಳು ಪಕ್ಷದ ಸಂಕಲ್ಪ ಬಲದಿಂದ ಕಾರ್ಯಗತಗೊಂಡಿವೆ ಎಂದರು.

ASSEMBLY ELECTION 2023 : ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಮತ್ತೆ ಅರಳುವುದೇ ಕಮಲ?

ಭಾರತವು ಜಾಗತಿಕ ಮಟ್ಟದಲ್ಲಿ ಸದೃಢವಾಗಿ ಮುನ್ನಡೆಯುತ್ತಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ತನ್ನ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾ ಇಡೀ ಜಗತ್ತಿನ ಗಮನವನ್ನು ತನ್ನಡೆಗೆ ಸೆಳೆದಿದೆ. ಸಮಾಜದಲ್ಲಿ ವ್ಯಕ್ತಿಗಳ ಪರಿಶ್ರಮವು ಪರಿಪೂರ್ಣವಾಗಿ ಈಡೇರಬೇಕಾದರೆ ಪೂರಕವಾದ ವ್ಯವಸ್ಥೆ ಇರುವುದು ಕೂಡ ಮುಖ್ಯವಾಗುತ್ತದೆ. ಇಂತಹ ವ್ಯವಸ್ಥೆಯನ್ನು ರೂಪಿಸುವುದೇ ಬಿಜೆಪಿಯ ಧ್ಯೇಯವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರ ಬದುಕಿನಲ್ಲೂ ಕಷ್ಟ, ಸುಖಗಳು ಬೇರೆ ಬೇರೆ ಸ್ವರೂಪದಲ್ಲಿ ಇರುತ್ತವೆ. ಇದು ಯಾರಿಗೂ ತಪ್ಪಿದ್ದಲ್ಲ. ಇದರ ನಡುವೆಯೇ ವ್ಯವಸ್ಥೆಯನ್ನು ಉತ್ತಮಗೊಳಿಸಲು ನಾವು ಇಚ್ಛಾಶಕ್ತಿಯೊಂದಿಗೆ ಮುಂದಾಗಬೇಕು ಎಂದರು. ಬಿಜೆಪಿ ಮಹಿಳಾ ಮಂಡಲದ ಅಧ್ಯಕ್ಷರಾದ ಕಾವೇರಿ ಕೇದಾರನಾಥ್‌, ಮುಖಂಡರಾದ ಗೀತಾಂಜಲಿ, ಆಶಾ ರಾವ್‌, ಉಷಾ, ರಜನಿ ಪೈ, ಸೆಲ್ವಿ ಮತ್ತಿತರರು ಉಪಸ್ಥಿತರಿದ್ದರು.