ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತ ನಾಯಕರು ಎಂದು ಕರೆಸಿಕೊಳ್ಳುವಂತಹ ಅರ್ಹತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ.

ರಾಯಚೂರು (ನ.01): ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತ ನಾಯಕರು ಎಂದು ಕರೆಸಿಕೊಳ್ಳುವಂತಹ ಅರ್ಹತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಸಮಯದಲ್ಲಿ ಮಾತ್ರ ಸಿದ್ದರಾಮಯ್ಯ ಅವರಿಗೆ ಅಹಿಂದ ನೆನಪಿಗೆ ಬರುತ್ತದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಸಮಾಜದ ಏಳಿಗೆಗೆ ಯಾವುದೇ ಕೊಡುಗೆ ನೀಡಿಲ್ಲ. ಕೆಳ ವರ್ಗಗಳಿಗೆ ನ್ಯಾಯ ಕೊಡಿಸುವಲ್ಲಿ ಸಿದ್ದರಾಮಯ್ಯ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

Add Asianetnews Kannada as a Preferred SourcegooglePreferred

ಎಸ್ಸಿ-ಎಸ್ಟಿ ಸಮುದಾಯಗಳ ದಶಕಗಳ ಕನಸನ್ನು ಸಾಕಾರಗೊಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಜವಾದ ಅಹಿಂದ ನಾಯಕ, ಅವರಷ್ಟೇ ಅಹಿಂದ ಮುಖಂಡ ಎಂದು ಕರೆಸಿಕೊಳ್ಳಲು ಅರ್ಹತೆ ಹೊಂದಿದ್ದಾರೆ ಎಂದರು. ಪ್ರಧಾನ ಕಾರ್ಯದರ್ಶಿ ಅರವಿಂದ ಜಾಧವ್‌ ಮೀಸಲಾತಿ ವರದಿ ಸಲ್ಲಿಸಿದ್ದರೂ ಅಂದು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಮೀಸಲಾತಿಗಾಗಿ ಸಮಿತಿಯನ್ನು ಯಾಕೆ ರಚನೆ ಮಾಡಲಿಲ್ಲ? ಸಿದ್ದರಾಮಯ್ಯಗೆ ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಅರ್ಹತೆಯೇ ಇಲ್ಲ ಎಂದರು.

ಡಿಕೆಶಿ- ಸಿದ್ದು ಒಗ್ಗೂಡಿಸುವ ಬೂಸ್ಟರ್‌ ಡೋಸ್‌ ಫೇಲ್‌ ಆಗಿದೆ: ಸಚಿವ ಶ್ರೀರಾಮುಲು

ಹಿಂದುಳಿದವರು ಚುನಾವಣೆ ಬಂದಾಗ ಮಾತ್ರ ನೆನಪಾಗ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಎಲೆಕ್ಷನ್‌ ಬಂದಾಗ ಮಾತ್ರ ಹಿಂದುಳಿದ ವರ್ಗಗಳು ನೆನಪಾಗುತ್ತವೆ ಎಂದು ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಸಮಾವೇಶ ಹಿನ್ನೆಲೆಯಲ್ಲಿ, ಪೂರ್ವಭಾವಿ ಸಭೆಗೆಂದು ಸೋಮವಾರ ಇಲ್ಲಿನ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಶ್ರೀರಾಮುಲು, ಅಹಿಂದ ನಾಯಕ ಎನ್ನುವ ಅರ್ಹತೆ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ಸ್ವಯಂಘೋಷಿತ ಅಹಿಂದ ನಾಯಕ, ಸ್ವಾರ್ಥಕ್ಕಾಗಿ ಅಹಿಂದ ಮುಖವಾಡ ಹಾಕೊಂಡಿದ್ದಾರೆ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಬಿ. ಶ್ರೀರಾಮುಲು, ಹಿಂದುಳಿದ ಸಮುದಾಯಗಳಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. 2016 ರಲ್ಲಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರು ಆಯೋಗ ರಚನೆ ಮಾಡಬಹುದು ಎಂದು ಹೇಳಿದ್ದರೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಯೋಗ ರಚನೆ ಮಾಡಲಿಲ್ಲ. ಮೀಸಲಾತಿ ಕೊಡಿಸಲೂ ಸಿದ್ದರಾಮಯ್ಯನ ಕೈಯಲ್ಲಿ ಆಗಲಿಲ್ಲ ಎಂದು ಕಿಡಿ ಕಾರಿದರು.

ಚುನಾವಣೆಯಲ್ಲಿ ನಿನ್ನ ಅಂಹಕಾರ ಇಳಿಸುತ್ತಾರೆ: ಸಿದ್ದು ವಿರುದ್ಧ ಏಕವಚನದಲ್ಲೇ ಶ್ರೀರಾಮುಲು ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಚಿವರಿದ್ದಾರೆ, ಸಿಎಂ ಬೊಮ್ಮಾಯಿ ನುಡಿದಂತೆ ನಡೆದಿದ್ದಾರೆ. ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಯಾವಾಗಲೋ ಮೀಸಲಾತಿ ಕೊಡಬಹುದಿತ್ತು. 2016ರಲ್ಲಿ ಸಿದ್ದರಾಮಯ್ಯ ಓಬಿಸಿಗಳಿಗೆ ಮೋಸ ಮಾಡಿದರು. ಸಿದ್ದರಾಮಯ್ಯ ಅದನ್ನ ಎದೆಮುಟ್ಟಿಕೊಂಡು ಹೇಳಲಿ. ಇದನ್ನ ಆತ್ಮ ಸಾಕ್ಷಿಯಾಗಿ ಹೇಳಬೇಕು ಎಂದು ಗುಡುಗಿದರು. ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಬಿಂಬಿಸೋದು ಬಿಡಬೇಕು. ನಮ್ಮದು ಡಬಲ್‌ ಎಂಜಿನ್‌ ಸರ್ಕಾರ. ರಾಷ್ಟ್ರಪತಿ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದವರು. ಸಿದ್ದರಾಮಯ್ಯಗೆ ನಮ್ಮ ಸಮುದಾಯದ ಬಗ್ಗೆ ಭಯ ಶುರುವಾಗಿದೆ ಎಂದರು.