ನಮ್ಮ ಸರ್ಕಾರ ಡಕೋಟಾ ಬಸ್ ಅಲ್ಲ, ಶರವೇಗದ ಜೆಟ್ ವಿಮಾನ: ಸಿದ್ದುಗೆ ತಿರುಗೇಟು
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ರಾಯಚೂರು, (ಫೆ.07): ನಮ್ಮ ರಾಜ್ಯ ಸರ್ಕಾರ ಡಕೋಟಾ ಬಸ್ ಅಲ್ಲ. ಶರವೇಗದಲ್ಲಿ ಸಾಗುವ ಜೆಟ್ ವಿಮಾನದಂತೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು. ಈ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 'ಡಕೋಟಾ ಬಸ್' ಹೇಳಿಕೆಗೆ ತಿರುಗೇಟು ನೀಡಿದರು.
ಸರ್ಕಾರ 'ಟೇಕ್ ಆಫ್' ಅಲ್ಲ ಸಂಪೂರ್ಣ 'ಆಫ್ ಆಗಿ ಕೆಟ್ಟು ನಿಂತಿರುವ ಡಕೋಟ ಬಸ್ ನಂತಾಗಿದೆ ಎಂದು ಬಿಎಎಸ್ವೈ ಸರ್ಕಾರ ವಿರುದ್ಧ ಕಿಡಿಕಾರಿದ್ದರು.
ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ಪ್ರೆಸ್ ಸರ್ಕಾರ: ಕಲಾಪದಲ್ಲಿ ಟೀಕಾಪ್ರಹಾರ
ಇನ್ನು ಈ ಬಗ್ಗೆ ಜಿಲ್ಲೆಯ ಮಸ್ಕಿ ಕ್ಷೇತ್ರದ ವಟಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವೇಗವಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪನವರೇ ನಮ್ಮ ಪೈಲಟ್. ಅವರ ಜತೆ ನಾವೆಲ್ಲ ಪ್ರಯಾಣಿಸುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ನಮ್ಮ ಆದ್ಯತೆ ಎಂದು ಹೇಳಿದರು.
ಮಸ್ಕಿ ಕ್ಷೇತ್ರದ ಉಪಚುನಾವಣೆ ಬಳಿಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಎರಡು ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ. ಈ ಬಗ್ಗೆ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ಭರವಸೆ ನೀಡಿದರು.
ಇನ್ನು ಮೀಸಲಾತಿಗೆ ಬಗ್ಗೆ ಪ್ರತಿಕ್ರಿಯಿಸಿದು ಅವರು, ಪಂಚಮಸಾಲಿ ಸಮಾಜವನ್ನು 2ಎಗೆ ಹಾಗೂ ಕುರುಬ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಕುರಿತು ಅಧ್ಯಯನ ನಡೆಸಲಾಗುವುದು. ಕುಲಶಾಸ್ತ್ರ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.