Asianet Suvarna News Asianet Suvarna News

ಆನಂದ್‌ ಸಿಂಗ್‌ ಖಾತೆ ಮತ್ತೆ ಬದಲಾವಣೆ: ಅಸಮಾಧಾನದ ಹೊಗೆ?

ಕೈಗಾರಿಕಾ ಖಾತೆ ಮೇಲೆ ಸಿಂಗ್‌ ಕಣ್ಣು| ಸಿಎಂ ಕಚೇ​ರಿ​ಯಿಂದ ಸಚಿವ ಸಿಂಗ್‌ಗೆ ಬುಲಾ​ವ್‌| ಸುರಪುರ ಶಾಸಕ ಭೇಟಿ| ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾಗಿದ್ದ ಆನಂದ್‌ ಸಿಂಗ್‌ ಅವರ ಖಾತೆಯನ್ನೇ 9 ದಿನಗಳ ಅಂತರದಲ್ಲಿ ಎರಡು ಬಾರಿ ಬದಲಾವಣೆ| 

Minister Anand Singh Unhappy for Major Reshuffle grg
Author
Bengaluru, First Published Jan 26, 2021, 8:24 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜ.26): ಸಚಿವ ಆನಂದ್‌ ಸಿಂಗ್‌ ಅವರ ಖಾತೆ ಮತ್ತೊಮ್ಮೆ ಬದಲಾವಣೆ ಆಗಿದ್ದು, ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.

ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾಗಿದ್ದ ಆನಂದ್‌ ಸಿಂಗ್‌ ಅವರ ಖಾತೆಯನ್ನೇ 9 ದಿನಗಳ ಅಂತರದಲ್ಲಿ ಎರಡು ಬಾರಿ ಬದಲಾವಣೆ ಮಾಡಲಾಗಿದೆ. ಅರಣ್ಯ ಖಾತೆಯಿಂದ ಪ್ರವಾಸೋದ್ಯಮ ಖಾತೆ ನೀಡಲಾಗಿತ್ತು. ಈಗ ಮೂಲಭೂತ ಸೌಕರ್ಯದ ಖಾತೆ ನೀಡಲಾಗಿದೆ. ಮಹತ್ವವಲ್ಲದ ಖಾತೆಗೆ ಸೀಮಿತಗೊಳಿಸಿದ್ದರಿಂದ ಸಚಿವ ಆನಂದ್‌ ಸಿಂಗ್‌ ಅವರ ಬೆಂಬಲಿಗರಿಗೆ ಸಹಜವಾಗಿ ಬೇಸರತರಿಸಿದೆ.

ಈ ಮಧ್ಯೆ ಖಾತೆ ಬದಲಾವಣೆಯಿಂದ ಸಚಿವರು ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಸಚಿವ ಸ್ಥಾನಕ್ಕೆ ಆನಂದ್‌ ಸಿಂಗ್‌ ಅವರು ಮಂಗಳವಾರ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಸಚಿವ ಆನಂದ್‌ ಸಿಂಗ್‌ ಅವರೇ ಸ್ವತಃ ಅಸಮಾಧಾನ ಇಲ್ಲ. ರಾಜೀನಾಮೆ ನೀಡುವ ಮಾತೇ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಸಮಾಧಾನ ಇಲ್ಲ ಎಂಬುದು ಸ್ಪಷ್ಟವಾದರೂ ಒಳ ಬೇಗುದಿ ಇದೆ ಎಂಬ ಮಾತು ಇನ್ನೂ ಚಾಲ್ತಿಯಲ್ಲಿದೆ.

ಸಿಎಂ ಬುಲಾವ್‌:

ಖಾತೆ ಬದಲಾವಣೆ ವಿಚಾರದ ಬಳಿಕ ಮಾಧ್ಯಮದಲ್ಲಿ ಸಚಿವ ಆನಂದ್‌ ಸಿಂಗ್‌ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿಯಿಂದ ಆನಂದ್‌ ಸಿಂಗ್‌ ಅವರಿಗೆ ಕರೆ ಬಂದಿದ್ದು, ಗಣರಾಜ್ಯೋತ್ಸವದ ಬಳಿಕ ಅವರು ಬೆಂಗಳೂರಿಗೆ ತೆರಳಿ ಚರ್ಚೆ ನಡೆಸಲಿದ್ದಾರೆ.

ಪದೇ ಪದೇ ಖಾತೆ ಬದಲಾವಣೆ;  ಇಬ್ಬರು ಪ್ರಮುಖ ಸಚಿವರ ರಾಜೀನಾಮೆ?

ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್‌. ಅಶೋಕ ಅವರು ಸಹ ಆನಂದ ಸಿಂಗ್‌ ಅವರ ಜೊತೆ ಮಾತನಾಡಿದ್ದು ಅಸಮಾಧಾನ ಶಮನಕ್ಕೆ ಯತ್ನಿಸಿದ್ದಾರೆ.
ಆನಂದ ಸಿಂಗ್‌ ಜೊತೆ ತಾವು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡುವುದಾಗಿ ಹೇಳಿದ್ದಾರೆ. ಆನಂದ ಸಿಂಗ್‌ ಅಸಮಾಧಾನಗೊಂಡಿಲ್ಲ. ಹಾಗೇನಾದರೂ ಆದಲ್ಲಿ ಅವರ ಜೊತೆ ಮಾತನಾಡಿ ಸಮಾಧಾನಪಡಿಸಲಾಗುವುದು ಎಂದಿದ್ದಾರೆ.

ಕೈಗಾರಿಕೆ ಖಾತೆ ಮೇಲೆ ಕಣ್ಣು:

ಸಚಿವ ಆನಂದ್‌ ಸಿಂಗ್‌ ಅವರು ಜಗದೀಶ್‌ ಶೆಟ್ಟರ್‌ ಅವರ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಅರಣ್ಯ ಖಾತೆಯಲ್ಲೂ ಉತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಪ್ರವಾಸೋದ್ಯಮ ಖಾತೆಯಿಂದ ವಾರದಲ್ಲೇ ಬದಲಾವಣೆ ಮಾಡಲಾಗಿದೆ. ಹೋಟೆಲ್‌ ಉದ್ಯಮಿಯೊಬ್ಬರು ವಿಶ್‌ ಮಾಡಲು ಬಂದಾಗ ಟೂರಿಸಂ ಪೋಸ್ಟ್‌ ಸೇ ನಿಕಾಲ್‌ ದಿಯಾ. ಅಬೀ ಕೈಗಾರಿಕಾ ದೇತೆ ಎಂದು ಸಚಿವ ಆನಂದ್‌ ಸಿಂಗ್‌ ಅವರು ಹೇಳಿದರು.
ನೀವು ಕೈಗಾರಿಕೆ ಹಾಕಿ, ಮುಂದೆ ಕೈಗಾರಿಕೆ ಖಾತೆ ಕೊಡಬಹುದು ಎಂದು ಸಚಿವರು ಹೇಳಿದ್ದು, ಕೈಗಾರಿಕೆ ಖಾತೆಯ ಮೇಲೆ ಸಚಿವರು ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಈಗ ಸಚಿವ ಆನಂದ್‌ ಸಿಂಗ್‌ ಅವರು ಅಸಮಾಧಾನಗೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಶಾಸಕ ರಾಜುಗೌಡ ಆಗಮಿಸಿ ಚರ್ಚೆ ನಡೆಸಿದ್ದು, ಆನಂದ್‌ ಸಿಂಗ್‌ ಅವರಿಂದ ಪ್ರವಾಸೋದ್ಯಮ ಖಾತೆಯಿಂದ ಮೂಲಭೂತ ಸೌಕರ್ಯ ಹಾಗೂ ಹಜ್‌ ಮತ್ತು ವಕ್ಫ್ ಖಾತೆ ನೀಡಲಾಗಿದೆ. ಈ ಖಾತೆ ಬದಲಾವಣೆಗೆ ಆನಂದ್‌ ಸಿಂಗ್‌ ಪಟ್ಟು ಹಿಡಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಯಾವಾಗ? ಏನು ನಡೆ​ಯಿ​ತು

11 ಗಂಟೆಗೆ ಸಚಿವ ಆನಂದ್‌ ಸಿಂಗ್‌ ಅಸಮಾಧಾನ ಎಂಬ ವಿಷಯ ಮಾಧ್ಯಮಗಳಲ್ಲಿ ಬಿತ್ತರ
12 ಗಂಟೆಗೆ ಹಳೇ ಆಸ್ಪತ್ರೆ ಕಾಮಗಾರಿ ವೀಕ್ಷಿಸಿದ ಆನಂದ್‌ ಸಿಂಗ್‌.
12:30 ಸುರಪುರ ಶಾಸಕ ರಾಜುಗೌಡ ಆಗಮನ.
12:40ಕ್ಕೆ ಶಾಸಕ ರಾಜುಗೌಡ ಮಾಧ್ಯಮಗೋಷ್ಠಿ
1 ಗಂಟೆಗೆ ಸಚಿವ ಆನಂದ್‌ ಸಿಂಗ್‌ ಅವರಿಂದ ಸುದ್ದಿಗೋಷ್ಠಿ
 

Follow Us:
Download App:
  • android
  • ios