Asianet Suvarna News Asianet Suvarna News

Mekedatu Politics: ಕಾಂಗ್ರೆಸ್‌ ಪಾದಯಾತ್ರೆಯಿಂದ ಮೇಕೆದಾಟು ಇನ್ನಷ್ಟು ಕ್ಲಿಷ್ಟ: ಶೆಟ್ಟರ್‌

*   ಮೇಕೆದಾಟು ವಿಷಯದಲ್ಲಿ ತಮಿಳುನಾಡು ಕಾಂಗ್ರೆಸ್‌ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಲಿ
*   ವೋಟ್‌ ಬ್ಯಾಂಕ್‌ಗಾಗಿ ಪಾದಯಾತ್ರೆ ಆರೋಪ
*   ಕಾಂಗ್ರೆಸ್‌ಗೆ ಜನರೇ ಅವರಿಗೆ ತಕ್ಕ ಪಾಠ ಕಲಿಸ್ತಾರೆ 

Mekedatu Project Is More Complicated by the Congress Padayatra Says Jagadish Shettar grg
Author
Bengaluru, First Published Jan 10, 2022, 7:51 AM IST

ಹುಬ್ಬಳ್ಳಿ(ಜ.10):  ಮೇಕೆದಾಟು ಯೋಜನೆ(Mekedatu Project) ವಿವಾದವನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಿದೆ. ದ್ವಂದ್ವ ನಿಲುವಿನ ಕಾಂಗ್ರೆಸ್‌ ಪಾದಯಾತ್ರೆ(Congress Padayatra) ಮಾಡಲು ಬೀದಿಗಿಳಿದಿರುವುದರಿಂದ ಇನ್ನಷ್ಟು ಕ್ಲಿಷ್ಟಕರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar) ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೇಕೆದಾಟು ವಿಷಯದಲ್ಲಿ ತಮಿಳುನಾಡು(Tamil Nadu) ಕಾಂಗ್ರೆಸ್‌ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಲಿ. ಅಲ್ಲಿ ಯೋಜನೆ ವಿರೋಧಿಸುವ ಕಾಂಗ್ರೆಸ್‌, ಇಲ್ಲಿ ಅನುಷ್ಠಾನಕ್ಕೆ ಒತ್ತಾಯಿಸುತ್ತದೆ. ಮಹದಾಯಿ(Mahadayi) ವಿಚಾರದಲ್ಲೂ ಗೋವಾ(Goa) ಕಾಂಗ್ರೆಸ್‌ ಇದೇ ರೀತಿ ವರ್ತಿಸುತ್ತಿದೆ. ಅವರು ಯಾವಾಗಲೂ ದ್ವಂದ್ವ ನಿಲುವು ತಾಳುತ್ತಲೇ ರಾಜಕೀಯ(Politics) ನಡೆಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

Mekedatu Project: ಮೇಕೆದಾಟು ಅಣೆಕಟ್ಟೆಏಕೆ ಬೇಕು? ಕಾವೇರಿ ವಿವಾದಕ್ಕೆ ಪರಿಹಾರ ಈ ಡ್ಯಾಂ!

ಬಿಜೆಪಿಗೂ(BJP) ಮುನ್ನ ರಾಜ್ಯದಲ್ಲಿ(Karnataka) ಕಾಂಗ್ರೆಸ್‌ ಏಳು ವರ್ಷ ಅಧಿಕಾರದಲ್ಲಿತ್ತು. ಆಗ ಡಿಪಿಆರ್‌(DPR) ಕೂಡ ಅವರು ತಯಾರಿಸಿಲ್ಲ. ಈಗ ಪಾದಯಾತ್ರೆ ನೆಪದಲ್ಲಿ ವೋಟ್‌ಬ್ಯಾಂಕ್‌ಗಾಗಿ(Vote Bank) ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಈಚೆಗೆ ಬೆಳಗಾವಿಯಲ್ಲಿ(Belagavi Assembly Session) ನಡೆದ ಅಧಿವೇಶನದಲ್ಲಿ ಮೇಕೆದಾಟು ವಿಷಯದ ಬಗ್ಗೆ ಕಾಂಗ್ರೆಸಿಗರು ಗಂಭೀರ ಚರ್ಚೆಯನ್ನೇ ಮಾಡಿಲ್ಲ. ಒಂದೂ ಪ್ರಶ್ನೆ ಕೇಳಿಲ್ಲ. ಚರ್ಚೆ ಆದರೆ ಸರ್ಕಾರ ಸೂಕ್ತ ಉತ್ತರ ನೀಡುತ್ತದೆ ಎಂದು ಹಿಂಜರಿದರು. ಈಗ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಸಂಪೂರ್ಣ ರಾಜಕೀಯವಾಗಿದೆ. ಕೊರೋನಾ 3ನೇ ಅಲೆ ಸೋಂಕು ತೀವ್ರವಾಗಿ ಹರಡುತ್ತಿರುವ ವೇಳೆ ವಾರಾಂತ್ಯ ಕರ್ಫ್ಯೂ(Weekend Curfew) ಅವಧಿಯಲ್ಲೂ ಅವರು ನಿಯಮಾವಳಿ ಉಲ್ಲಂಘಿಸಿ ಭಂಡತನ ಪ್ರದರ್ಶಿಸುತ್ತಾರೆ. ರಾಜ್ಯದ ಜನತೆಯ ಆರೋಗ್ಯಕ್ಕಿಂತ ರಾಜಕಾರಣವೇ ಅವರಿಗೆ ಮುಖ್ಯವಾಗಿದೆ. ಇದೊಂದು ರಾಜಕೀಯ ಪ್ರಹಸನವಾಗಿದ್ದು, ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪಾದಯಾತ್ರೆ ವೇಳೆ ಕೋರೋನಾ ನಿಯಮ ಗಾಳಿಗೆ ತೂರಿದ ಕಾಂಗ್ರಸ್ಸಿಗರು

ಕಾಂಗ್ರೆಸ್‌ನ(Congress) ಮೇಕೆದಾಟು ಜಲಯೋಜನೆ(Mekedatu Project) ಪಾದಯಾತ್ರೆ ವೇಳೆ ಕೊರೋನಾ ಮಾರ್ಗಸೂಚಿಗಳನ್ನು ‘ನೀರಿಗೆ ಎಸೆದ’ ಪ್ರಸಂಗ ನಡೆಯಿತು. ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು, ವಾರಾಂತ್ಯದ ಕರ್ಫ್ಯೂ(Weekend Curfew) ಬೆಲೆ ಕೊಡಲಿಲ್ಲ. ಅಲ್ಲದೆ, ಮಾಸ್ಕ್‌ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಪಾಡದೇ ನಿಯಮ ಉಲ್ಲಂಘಿಸಿದರು. ಆದರೂ ತಕ್ಷಣ ಕ್ರಮ ಕೈಗೊಳ್ಳುವ ಪೊಲೀಸ್‌ ವ್ಯವಸ್ಥೆ ಹಾಗೂ ಜಿಲ್ಲಾಡಳಿತ ಸಂಗಮದಲ್ಲಿ ಮೂಕ ಪ್ರೇಕ್ಷಕರಾಗಿ ನಿಂತಿತ್ತು.

ಪಾದಯಾತ್ರೆ(Padayatra) ಉದ್ಘಾಟನಾ ಸಮಾರಂಭಕ್ಕೆ ಸಂಗಮದ ಹಿನ್ನೀರಿನ ಮೇಲೆ ನಿರ್ಮಿಸಿದ್ದ ಬೃಹತ್‌ ವೇದಿಕೆಯಲ್ಲಿ 300ಕ್ಕೂ ಹೆಚ್ಚು ಗಣ್ಯರು ಸಾಮಾಜಿಕ ಅಂತರ(Social Distance), ಮಾಸ್ಕ್‌(Mask) ಇಲ್ಲದೆ ಭಾಗವಹಿಸಿದ್ದರು. ಜತೆಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಇಕ್ಕಟ್ಟಾದ ಸ್ಥಳದಲ್ಲಿ ಸೇರಿದ್ದರಿಂದ ತೀವ್ರ ಜನಜಂಗುಳಿ ಉಂಟಾಗಿತ್ತು.

Mekedatu Politics: ಕಾಂಗ್ರೆಸ್‌ ಪಾದಯಾತ್ರೆ ತಡೆಗೆ ಸರ್ಕಾರದ ಮಾಸ್ಟರ್‌ ಪ್ಲಾನ್‌..?

ವಿಡಿಯೋ ದೃಶ್ಯ ಆಧರಿಸಿ ಕೇಸ್‌?

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಕರ್ಫ್ಯೂ ನಡುವೆಯೂ ಸಾವಿರಾರು ಮಂದಿ ನಡೆಯುತ್ತಿದ್ದರೂ ಪೊಲೀಸರ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಬದಲಿಗೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಮೂಲಗಳ ಪ್ರಕಾರ ವಿಡಿಯೋ ದೃಶ್ಯ ಆಧರಿಸಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡ್ತೇವೆ: ಕಾಂಗ್ರೆಸ್

ರಾಜಧಾನಿ ಬೆಂಗಳೂರು ಸೇರಿ ಕಾವೇರಿ ಜಲಾನಯನ ಪ್ರದೇಶದ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮೇಕೆದಾಟು (Mekedatu) ಯೋಜನೆಗೆ ಚಾಲನೆ ನೀಡಲು ಒತ್ತಡ ಹೇರುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ. 

'ಇದರಲ್ಲಿ ನಾವು ಯಾವುದೇ ರೂಲ್ಸ್ ಬ್ರೇಕ್ ಮಾಡುತ್ತಿಲ್ಲ. ಕೋವಿಡ್ ನಿಯಮ ಪಾಲಿಸಿಯೇ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಶಾಸಕ ರಂಗನಾಥ್ ಹೇಳಿದ್ದರು.  ಕೊರೋನಾ ಹಾವಳಿ ವಿಪರೀತ ಆಗುತ್ತಿರುವ ಕಾರಣಕ್ಕೂ ಪಾದಯಾತ್ರೆ ಕೈಬಿಡುವಂತೆ ಪ್ರತಿಪಕ್ಷ ಕಾಂಗ್ರೆಸ್‌ಗೆ ರಾಜ್ಯ ಸರ್ಕಾರ ನೇರ ಆಗ್ರಹ ಮಾಡಿದೆ. ಅಲ್ಲದೆ, ವಾರಾಂತ್ಯ ಕರ್ಫ್ಯೂದಂತಹ ಕ್ರಮಗಳ ಮೂಲಕ ತಡೆಯೊಡ್ಡುವ ಪ್ರಯತ್ನವನ್ನೂ ನಡೆಸಿದೆ. ಆದರೆ, ಇದ್ಯಾವುದಕ್ಕೂ ಜಗ್ಗದೆ ಕೋವಿಡ್‌ ನಿಯಮಾವಳಿ ಪಾಲಿಸಿಯೇ ಪಾದಯಾತ್ರೆ ನಡೆಸುವ ವಾಗ್ದಾನದೊಂದಿಗೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆಗೆ ಮುಂದಾಗಿದ್ದರು. ಆದರೆ, ಅದು ಪಾದಯಾತ್ರೆ ವೇಳೆ ಪಾಲನೆಯಾಗಿಲ್ಲ. 
 

Follow Us:
Download App:
  • android
  • ios