ಬಿಜೆಪಿಯಿಂದ ಅಮಾನತ್ತಾಗಿರೋ ಯತ್ನಾಳಗೆ ಸ್ವಾಭಿಮಾನ, ಮಾರ್ಯಾದೆ ಇದ್ದರೇ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ತೋರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸವಾಲ್ ಹಾಕಿದರು.

ವಿಜಯಪುರ (ಮಾ.31): ಬಿಜೆಪಿಯಿಂದ ಅಮಾನತ್ತಾಗಿರೋ ಯತ್ನಾಳಗೆ ಸ್ವಾಭಿಮಾನ, ಮಾರ್ಯಾದೆ ಇದ್ದರೇ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ತೋರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸವಾಲ್ ಹಾಕಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲ ಘೋಷಣೆ, ಚರಂತಿಮಠ ಪ್ರಚಾರ ಮಾಡೋದಾಗಿ ಹೇಳಿರೋ ಯತ್ನಾಳ ಕುರಿತು ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ‌ ನೇತೃತ್ವದಲ್ಲಿ ಚುನಾವಣೆ ಮಾಡುತ್ತಾರೆಂದರೇ ವಿಜಯೇಂದ್ರ ಉಳಿಸೋ ಕೆಲಸ ಮಾಡುತ್ತಾರೆಂದರೆ ಮಾಡಲಿ. ಯತ್ನಾಳ ಏನೇ ಮಾಡಿದರೂ ನಾವೇ ಗೆಲ್ಲುತ್ತೇವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯತ್ನಾಳ ಒಂದೆಡೆ ವಿಜಯೇಂದ್ರ ಯಡಿಯೂರಪ್ಪ ಎಂದು ಹೇಳುತ್ತಾರೆ. ಈಗ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಉಪಚುನಾವಣೆ ನಡೆಯುತ್ತಿದೆ. ದಾವಣಗೆರೆ ಬಾಗಲಕೋಟೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಿಶ್ಚಿತವಾಗಿ ಬದಲಾಗುತ್ತಾರೆ. ವಿಜಯೇಂದ್ರ ಬದಲಾವಣೆ ಆಗೋದು ಯತ್ನಾಳಗೆ ಬೇಕಾಗಿದೆಯೋ?, ಇಲ್ಲವೋ? ಅವರು ಅರ್ಥ ಮಾಡಿಕೊಳ್ಳಲಿ. ಯತ್ನಾಳ ಉದ್ದೇಶ ವಿಜಯೇಂದ್ರ ಉಳಿಸೊದಿದೆಯಾ?. ಮತ್ಯಾಕೆ ಮಾತು ಮಾತಿಗೆ ಯಡಿಯೂರಪ್ಪ, ಯಡಿಯುರಪ್ಪ ಮಗಾ ಎಂದು ಮಾತನಾಡಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಉಪಚುನಾವಣೆ ವಿಜಯೇಂದ್ರಗೆ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೇ ವಿಜಯೇಂದ್ರನನ್ನು ಬಿಜೆಪಿ ಅಧ್ಯಕ್ಷನನ್ನಾಗಿ ಮುಂದುವರಿಸುತ್ತಾರೆ. ಇಲ್ಲದಿದ್ದರೇ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುತ್ತಾರೆ. ಹಾಗಾಗಿ ಯತ್ನಾಳ ಅವರಿಗೆ ವಿಜಯೇಂದ್ರನನ್ನ ತೆಗೆಸಬೇಕಾ ಅಥವಾ ಅಧ್ಯಕ್ಷನನ್ನಾಗಿ ಮುಂದುವರಿಸಬೇಕಾ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ವಿಜಯೇಂದ್ರಗೆ ಕ್ರೆಡಿಟ್ ಹೋಗುತ್ತದೆ. ಯತ್ನಾಳ, ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾತನಾಡುತ್ತಾರೆ. ಈಗ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ವಿಜಯೇಂದ್ರನನ್ನು ಬಿಜೆಪಿ ಅಧ್ಯಕ್ಷರ ಸ್ಥಾನದಿಂದ ತೆಗೆಯೋಕೆ ಉಪಚುನಾವಣೆಗಳು ಯತ್ನಾಳಗೆ ಅವಕಾಶವಿದ್ದಂತೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೆ ವಿಜಯೇಂದ್ರನನ್ನು ತೆಗೆಯುತ್ತಾರೆ ಎಂದು ಭವಿಷ್ಯ ನುಡಿದರು.

ಯತ್ನಾಳ ವಿಜಯೇಂದ್ರ ಉಳಿಸೋ ಕೆಲಸ ಮಾಡುವುದಾರೆ ಪ್ರಚಾರ ಮಾಡಲಿ. ಉಪಚುನಾವಣೆಯಲ್ಲಿ ಪ್ರಚಾರ ಮಾಡಿ ವಾಪಸ್ ಬಿಜೆಪಿ ಹೋಗುವ ಪ್ಲಾನ್ ಯತ್ನಾಳಗಿದೆ. ಈ ಮೂಲಕ ವಾಪಸ್ ಬಿಜೆಪಿಗೆ ಹೋಗಲು ಯತ್ನಾಳ ಪ್ರಯತ್ನ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಹಾಗಾಗಿ ವಾಪಸ್ ತಗೊಳ್ಳಿ ಎಂದು ಬಿಜೆಪಿ ಮುಖಂಡರಿಗೆ ಯತ್ನಾಳ ಕೈ ಒಡ್ಡುತ್ತಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ಗೆ ಲಿಂಗಾಯತರಷ್ಟೇ ಅಲ್ಲ, ಇತರ ಸಮುದಾಯದ ಬೆಂಬಲವೂ ಇದೆ

ಎಚ್.ವೈ.ಮೇಟಿ ನಿಧನದ ಕಾರಣ ಉಪಚುನಾವಣೆ ಎದುರಾಗಿದ್ದು, ಮೇಟಿ ಪುತ್ರ ಉಮೇಶಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್‌ಗೆ ಲಿಂಗಾಯತರಷ್ಟೇ ಅಲ್ಲ ಇತರ ಸಮುದಾಯದ ಬೆಂಬಲವೂ ಇದೆ. ಮೇಟಿಯವರ ಕುಟುಂಬಕ್ಕೆ ಅನುಕಂಪವೂ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ಬಾಗಲಕೋಟೆ ನಗರ ಕ್ಷೇತ್ರದ ಉಪಚುನಾವಣೆ ವಿಚಾರಕ್ಕೆ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ನಿನ್ನೆ ಬಾಗಲಕೋಟೆಯಲ್ಲಿ ಲಿಂಗಾಯತ ಮುಖಂಡರ ಸಭೆ ನಡೆಸಲಾಗಿದೆ ಎಂಬ ವಿಚಾರದ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿ, ನಿನ್ನೆ ಲಿಂಗಾಯತರಷ್ಟೇ ಅಲ್ಲ ಅಲ್ಪಸಂಖ್ಯಾತ ಮುಖಂಡರ ಸಭೆಯನ್ನು ಮಾಡಿದ್ದೇವೆ. ಹಲವಾರು ಗ್ರಾಮಗಳಲ್ಲಿ ಮತಯಾಚನೆ ಮಾಡಲಾಗಿದೆ. ಜನರ ಬೆಂಬಲ ಕಾಂಗ್ರೆಸ್ ಪರವಾಗಿದೆ, ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದದರು.