ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಭದ್ರ ನೆಲೆ ಹೊಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಕೇಳುವ ಅವಕಾಶ ಯಾರಿಗೂ ಇಲ್ಲ ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ತಿಳಿಳಿಸಿದರು.

ಕೆ.ಆರ್.ಪೇಟೆ (ಫೆ.23): ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಭದ್ರ ನೆಲೆ ಹೊಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಕೇಳುವ ಅವಕಾಶ ಯಾರಿಗೂ ಇಲ್ಲ ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ತಿಳಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾಗಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಮಂಡ್ಯ: ಹಣ ಡಬಲ್‌ ಮಾಡಿಕೊಡ್ತಿನಿ ಅಂತಾ ಮಹಿಳೆಗೆ ನಂಬಿಸಿ ₹ 70 ಲಕ್ಷ ದೋಚಿ ಖದೀಮ ಪರಾರಿ!

ಮಂಡ್ಯ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಹೊರತು ಪಡಿಸಿ ಇತರ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತಿರಬಹುದು. ಆದರೆ, ಜಿಲ್ಲೆಯ ಒಟ್ಟಾರೆ ಮತಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷಕ್ಕಿಂತಲೂ ಜೆಡಿಎಸ್ ಹೆಚ್ಚು ಮತಗಳನ್ನು ಪಡೆದಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಡುವೆ ಮೈತ್ರಿಯಾಗಿದೆ. ಮಂಡ್ಯ ಮತ್ತು ಹಾಸನ ಎರಡೂ ಜಿಲ್ಲೆಗಳೂ ಜೆಡಿಎಸ್ ಪ್ರಾಬಲ್ಯದಲ್ಲಿವೆ ಎನ್ನುವ ಅಂಶ ಬಿಜೆಪಿ ಹೈಕಮಾಂಡಿಗೂ ಅರಿವಿದೆ. ಆದ ಕಾರಣ ಈ ಎರಡೂ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಮೂರು ಮತ್ತು ನಾಲ್ಕನೇ ಕ್ಷೇತ್ರಗಳಿಗೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು. 

ಮೈತ್ರಿ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಡುವೆ ಯಾವುದೇ ಗೊಂದಲವಿಲ್ಲ. ಎಲ್ಲವೂ ಹೆಚ್ಚು ಕಡಿಮೆ ನಿರ್ಧರಿತವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಬೇಕೆನ್ನುವುದು ನಮ್ಮೆಲ್ಲರ ಇಚ್ಚೆ. ಇದಕ್ಕಾಗಿ ಹೆಚ್.ಡಿ.ಕೆ ಸ್ಪರ್ಧಿಸುವಂತೆ ಒಂದು ಸಾಲಿನ ನಿರ್ಣಯ ಮಂಡಿಸಿದ್ದೇವೆ ಎಂದರು.

ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಬಹಳಷ್ಟು ಜನ ಸಮರ್ಥರಿದ್ದಾರೆ. ಹೆಚ್.ಡಿ.ಕೆ ಕಣಕ್ಕಿಳಿಯದಿದ್ದರೆ ಪಕ್ಷ ತನ್ನ ಅಭ್ಯರ್ಥಿಯನ್ನು ತೀರ್ಮಾನಿಸಲಿದೆ. ಪಕ್ಷ ತೀರ್ಮಾನಿಸಿದ ಅಭ್ಯರ್ಥಿ ಪರ ನಾವೆಲ್ಲರೂ ಕೆಲಸ ಮಾಡಲಿದ್ದೇವೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು.

ಹಾಲಿ ಸಂಸದೆ ಸುಮಲತಾ ಸ್ಪರ್ಧೆ ಬಗ್ಗೆ ಉತ್ತರಿಸಿದ ಸಿ.ಎಸ್.ಪುಟ್ಟರಾಜು, ನಾನು ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ಆ ಹಕ್ಕು ನನಗಿಲ್ಲ. ಸುಮಲತಾ ಸ್ಪರ್ಧೆ ಅವರ ನಿರ್ಧಾರವಾಗಿದೆ. ಇದು ಬಿಜಿಪಿ ಪಕ್ಷಕ್ಕೆ ಬಿಟ್ಟ ವಿಚಾರ. ನಾವು ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಕಡೆ ನಮ್ಮ ಪಕ್ಷದ ವತಿಯಿಂದ ಯಾರೊಬ್ಬರೂ ಬಂಡಾಯ ಏಳದಂತೆ ಸರಿಪಡಿಸಿಕೊಳ್ಳಬೇಕಾದುದು ನಮ್ಮ ಧರ್ಮ. ಅದನ್ನು ನಾವು ಮಾಡುತ್ತೇವೆ. ಮೈತ್ರಿ ಧರ್ಮ ಪಾಲಿಸುವುದು ಬಿಜೆಪಿಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು.

Sumalatha V/S Chaluvaraya Swamy: ಯಾರು “ನಾಟಿ”.. ಯಾರು “ಹೈಬ್ರೀಡ್”..? ಏನಿದು ಹೊಸ ಕಥೆ..?

ಈ ವೇಳೆ ಶಾಸಕ ಹೆಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಮುಖಂಡರಾದ ಕೆ.ಎಸ್.ರಾಮೇಗೌಡ ಸೇರಿದಂತೆ ಮತ್ತಿತರರಿದ್ದರು.