ರಾಜ್ಯ ಸರ್ಕಾರ ಕನಿಷ್ಠ 12ರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‌ಗೆ ₹2400ರಂತೆ ಖರೀದಿಸಲಾಗುವುದು ಎಂದು ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಮುಳಗುಂದ (ಡಿ.04): ಈ ಮೊದಲು ಬೆಂಬಲ ಬೆಲೆಯಡಿ ಪ್ರತಿ ರೈತರಿಂದ 5 ಕ್ವಿಂಟಲ್‌ ಮೆಕ್ಕೆಜೋಳ ಖರೀದಿ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಆದೇಶವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಕನಿಷ್ಠ 12ರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‌ಗೆ ₹2400ರಂತೆ ಖರೀದಿಸಲಾಗುವುದು ಎಂದು ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ಸಮೀಪದ ಕಣವಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ ರಾಜ್ಯದಲ್ಲಿ ಅಂದಾಜು 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬಿತ್ತನೆ ಮಾಡಿ ಬೆಳೆಯಲಾಗಿದೆ. ಖರೀದಿ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು ಎಂಬುದು ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತು.

Add Asianetnews Kannada as a Preferred SourcegooglePreferred

ರೈತರಿಗೆ ಸರ್ಕಾರ ಹೇಗಾದರೂ ಮಾಡಿ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಪ್ರತಿ ರೈತರಿಂದ ಕನಿಷ್ಠ 12 ಕ್ವಿಂಟಲ್ ಗರಿಷ್ಠ 20 ಕ್ವಿಂಟಲ್ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಮಾಡಲಾಗುವುದು ಎಂದರು. ತಾಲೂಕಿನ ಮಲಸಮುದ್ರ ಗ್ರಾಮದಲ್ಲಿ ಧಾರವಾಡ ಹಾಲು ಒಕ್ಕೂಟದ ಹಾಲು ಸಂಗ್ರಹಣ ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ನೋಂದಣಿ ಪ್ರಕ್ರಿಯೆ ಮಂಗಳವಾರ ಪ್ರಾರಂಭಿಸಲಾಗಿದೆ ಎಂದರು. ಕಣವಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾ ಮೈದಾನ ಹಾಗೂ ಹೈಮಾಸ್ಕ್ ವಿದ್ಯುತ್‌ ದೀಪ ಉದ್ಘಾಟಿಸಲಾಯಿತು. ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಅಂದಾಜು ₹16 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಗ್ರಾಪಂ ಉಪಕಾರ್ಯಾಲಯವನ್ನು ಸಚಿವರು ಉದ್ಘಾಟಿಸಿದರು.

ಮೂರು ಕೊಠಡಿಗಳ ಉದ್ಘಾಟನೆ

ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ₹41 ಲಕ್ಷ ವೆಚ್ಚದಲ್ಲಿ ಮೂರು ಕೊಠಡಿಗಳನ್ನು ಉದ್ಘಾಟಿಸಲಾಯಿತು. ಅಂದಾಜು ₹18 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನ ಹಾಗೂ ಅಂದಾಜು ₹33 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಹಳ್ಳಿ ಗ್ರಾಮೀಣ ಸಂತೆ ಕಟ್ಟಡ, ರಂಗ ಮಂದಿರ ಹಾಗೂ ನಾಟಕ ಮನೆಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ವಿಧಾನಪರಿಷತ್‌ ಸದಸ್ಯರಾದ ಎಸ್.ವಿ. ಸಂಕನೂರ ಅವರ ಅನುದಾನದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟಿಸಲಾಯಿತು.

ಈ ವೇಳೆ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಗ್ರಾಪಂ ಅಧ್ಯಕ್ಷೆ ಹಾಲವ್ವ ಕುರಿ, ಉಪಾಧ್ಯಕ್ಷೆ ರೇಣವ್ವ ತಳವಾರ, ತಾಪಂ ಮಾಜಿ ಅಧ್ಯಕ್ಷ ಶರಣ ಬಸನಗೌಡ ಪಾಟೀಲ, ಬಾಬುಸಾಬ ಕಿಲ್ಲೆದಾರ, ಬಸವರಾಜ ಬಂದಕ್ಕನವರ, ಪರಪ್ಪ ಕೋಳಿವಾಡ, ಯಲ್ಲಪ್ಪ ಕೋರಿ, ಪ್ರಕಾಶ ಕುರ್ತಕೋಟಿ, ಗಂಗಣ್ಣ ಗಡಾದ, ಕೃಷ್ಣ ನಾಗಲೋಟಿ, ಎಸ್.ವೈ. ಕೋರಿ, ಶರೀಫ ದೊಡ್ಮನಿ, ಅಕ್ಕಮಹಾದೇವಿ ಬಳಿಗಾರ, ಪಾರವ್ವ ಕುರ್ತುಕೋಟಿ, ಮಂಜುನಾಥ ಕೋರಿ, ಶಂಕ್ರಪ್ಪ ಕೋಳಿವಾಡ, ಪ್ರಭು ಹುಡೇದ, ಬಿ.ಟಿ. ಸೋಮರಡ್ಡಿ, ಶಿವಾನಂದ ಮಾದಣ್ಣವರ, ನಿಂಗಪ್ಪ ಛಲವಾದಿ ಮತ್ತಿತರರು ಇದ್ದರು.