ಮಹಾರಾಷ್ಟ್ರದಲ್ಲಿ ಎದ್ದಿರುವ ರಾಜಕೀಯ ಬಿರುಗಾಳಿ  ರಾಜೀನಾಮೆ ಪತ್ರ ಹಿಡಿದುಕೊಂಡೆ ತಿರುಗಾಡುತ್ತಿದ್ದೇನೆ ಸಂಕಷ್ಟದಲ್ಲಿ ಮಹಾ ಸರ್ಕಾರ, ಉದ್ಧವ್ ಭಾಷಣ

ಮುಂಬೈ(ಜೂ.22): ನನ್ನ ರಾಜೀನಾಮೆ ಪತ್ರ ಸಿದ್ಧವಿದೆ. ಶಾಸಕರು ಬಯಸಿದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಯಾವುದೇ ಕ್ಷಣದಲ್ಲೂ ರಾಜೀನಾಮೆ ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಈ ಮೂಲಕ ಉದ್ಧವ್ ರಾಜೀನಾಮೆ ಸುಳಿವು ನೀಡಿದ್ದಾರೆ.

ಪತನದ ಅಂಚಿಗೆ ತಲುಪಿರುವ ಮಹಾರಾಷ್ಟ್ರದ ಅಘಾಡಿ ಸರ್ಕಾರ ಇಂದು ಮಹತ್ವದ ಶಾಸಕಾಂಗ ಸಭೆ ನಡೆಸಿದೆ. ಇದರ ಬಲಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ಸರ್ಕಾರ ಉಳಿಸಲು ಕೊನೆಯ ಅಸ್ತ್ರ ಪ್ರಯೋಗಿಸಿದ್ದಾರೆ. ನಾನು ಸಿಎಂ ಹುದ್ದೆ ತ್ಯಜಿಸಲು ಸಿದ್ಧನಿದ್ದೇನೆ. ನಾನು ಅಧ್ಯಕ್ಷ ಹುದ್ದೆ ತ್ಯಜಿಸಲು ಸಿದ್ಧನಿದ್ದನಿದ್ದೇನೆ. ಬಂಡಾಯ ಶಾಸಕರ ಬೇಡಿಕೆ ಏನು? ನೇರವಾಗಿ ಹೇಳಿ ಎಂದು ಉದ್ಧವ್ ಆಗ್ರಹಿಸಿದ್ದಾರೆ. ರಾಜೀನಾಮೆ ಕುರಿತು ರಾಜ್ಯಪಾಲರಿಗೂ ತಿಳಿಸಿದ್ದೇನೆ. ಹೀಗಾಗಿ ಬಂಡಾಯ ಶಾಸಕರು ತಮ್ಮ ಬೇಡಿಕೆಯನ್ನು ಸ್ಪಷ್ಟವಾಗಿ ನನಗೆ ತಿಳಿಸಲಿ ಎಂದಿದ್ದಾರೆ.

ಸರ್ಕಾರದ ಜೊತೆ ಉದ್ಧವ್ ಠಾಕ್ರೆಯ ಪಕ್ಷವನ್ನೂ ವಶಪಡಿಸ್ಕೊಳ್ತಾರಾ ಏಕನಾಥ್ ಶಿಂಧೆ? ಹೀಗಿದೆ ನಿಯಮ

ನಾನು ಸಿಎಂ ಹುದ್ದೆ ತ್ಯಜಿಸಲು ಸಿದ್ಧನಿದ್ದೇನೆ. ಮತ್ತೊಬ್ಬ ಶಿವಸೇನೆ ನಾಯಕ ಸಿಎಂ ಆದರೆ ನನಗೆ ಸಂತೋಷ. ನಾನು ಏನು ತಪ್ಪು ಮಾಡಿದ್ದೇನೆ. ಮಾತುಕತೆಗೆ ಬನ್ನಿ ಎಂದು ಬಂಡಾಯ ಶಾಸಕರಿಗೆ ಉದ್ಧವ್ ಆಹ್ವಾನ ನೀಡಿದ್ದಾರೆ. 

ಕೆಲವು ಶಾಸಕರು ಹೇಳದೆ ನಾಪತ್ತೆಯಾಗಿದ್ದಾರೆ. ಆದರೆ ನಮ್ಮಲ್ಲಿ ಬೆಂಬಲಿತ ಸೇರಿ 63 ಶಿವಸೇನ ನಾಯಕರು ಜೊತೆಗಿದ್ದಾರೆ. ಇನ್ನೂ ಹಲವು ಶಾಸಕರು ವಾಪಸ್ ಬರಲು ಸಿದ್ಧರಿದ್ದಾರೆ. ನಾವು ಎಲ್ಲಾ ಸವಾಲುಗಳನ್ನು ಎದುರಿಸಿ ನಿಂತಿದ್ದೇವೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ನಾವು 25 ವರ್ಷಗಳಿಂದ ಕಾಂಗ್ರೆಸ್ ಹಾಗೂ ಎಸ್‌ಸಿಪಿಯನ್ನು ವಿರೋಧಿಸಿಕೊಂಡು ಬರುತ್ತಿದ್ದೇವೆ. ಆದರೆ ಕಳೆದ ಚುನಾವಣೆ ಬಳಿಕ ಸೋನಿಯಾ ಗಾಂಧಿ ಹಾಗೂ ಶರದ್ ಪವಾರ್ ನನ್ನ ಮೇಲೆ ನಂಬಿಕೆ ಇಟ್ಟು ಮಹತ್ತರ ಜವಾಬ್ದಾರಿ ನೀಡಿದ್ದಾರೆ. ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದು ಉದ್ಧವ್ ಹೇಳಿದ್ದಾರೆ.

ಶಿವಸೇನೆ ಸುತ್ತ ಸದ್ದಿಲ್ಲದೆ ಬಲೆ ಹೆಣೆದ ಫಡ್ನವೀಸ್‌, ಉದ್ಧವ್‌ಗೆ ಸುಳಿವೂ ಸಿಕ್ಕಿರಲಿಲ್ಲ!

ಬಂಡಾಯ ಶಾಸಕರು, ಟ್ವಿಟರ್, ಫೇಸ್‌ಬುಕ್ ಹಾಗೂ ಇತರ ಮಾಧ್ಯಮಗಳ ಮೂಲಕ ಹೇಳಿದರೆ ಸಾಧ್ಯವಿಲ್ಲ. ನೇರವಾಗಿ ನನ್ನ ಬಳಿ ಬಂದು ಮಾತನಾಡಲಿ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರೆ ನಾನು ಸಿದ್ಧನಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಎನ್‌ಸಿಪಿ, ಕಾಂಗ್ರೆಸ್‌ ಜೊತೆಗಿನ ಮೈತ್ರಿ ವಿರೋಧಿಸಿ ಶಿವಸೇನೆಯ ಹಿರಿಯ ನಾಯಕ, ಸಚಿವ ಏಕನಾಥ್‌ ಶಿಂಧೆ ಹಾಗೂ ಇತರ ಪ್ರಮುಖ ನಾಯಕರು ಪಕ್ಷದ ವಿರುದ್ಧವೇ ಬಂಡೆದ್ದಿದಾರೆ. ಇದರಿಂದ ಮಹಾರಾಷ್ಟ್ರ ಸರ್ಕಾರ ಪತನದ ಅಂಚಿಗೆ ತಲುಪಿದೆ. 

ಎನ್‌ಸಿಪಿ, ಕಾಂಗ್ರೆಸ್‌ ಜೊತೆಗಿನ ಮೈತ್ರಿಯಿಂದಾಗಿ, ಶಿವಸೇನೆಯ ಹಿಂದುತ್ವ ಸಿದ್ಧಾಂತಕ್ಕೆ ಭಾರೀ ಧಕ್ಕೆಯಾಗಿದೆ ಎಂದು ಆರೋಪಿಸಿರುವ ಏಕನಾಥ ಶಿಂಧೆ ಸೋಮವಾರ ತಡರಾತ್ರಿ ದಿಢೀರನೆ ತಮ್ಮ 30ಕ್ಕೂ ಹೆಚ್ಚು ಬೆಂಬಲಿಗ ಶಾಸಕರೊಂದಿಗೆ ಸೂರತ್‌ಗೆ ತೆರಳಿದ್ದಾರೆ. ಈ ವಿಷಯ ಮಂಗಳವಾರ ಬೆಳಗ್ಗೆ ಹೊರಬೀಳುತ್ತಲೇ ಮಹಾ ಅಘಾಡಿ ಸರ್ಕಾರದಲ್ಲಿ ಸಂಚಲನ ಉಂಟಾಗಿದ್ದು, ಸರ್ಕಾರ ಉಳಿಸಿಕೊಳ್ಳುವ ಸರಣಿ ಯತ್ನಗಳು ನಡೆಸಿದೆ.ಈ ನಡುವೆ ಮಹಾರಾಷ್ಟ್ರದಲ್ಲಿನ ಬೆಳವಣಿಗೆ ಮೇಲೆ ಕಣ್ಣಿಡಲು ಮತ್ತು ಸರ್ಕಾರ ಉಳಿಸಿಕೊಳ್ಳುವ ಯತ್ನಕ್ಕೆ ನೆರವು ನೀಡಲು ಮಾಜಿ ಕೇಂದ್ರ ಸಚಿವ ಕಮಲ್‌ನಾಥ್‌ ಅವರನ್ನು ಕಾಂಗ್ರೆಸ್‌ ಉಸ್ತುವಾರಿಯಾಗಿ ನೇಮಿಸಿದೆ.