ಶಿವಮೊಗ್ಗ ಸೇರಿದಂತೆ ಎಲ್ಲಾ ಬಂಡಾಯವೂ ಇನ್ನೂ ನಾಲ್ಕು ದಿನದಲ್ಲಿ ಬಗೆಹರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. 

ಮೈಸೂರು (ಮಾ.28): ಶಿವಮೊಗ್ಗ ಸೇರಿದಂತೆ ಎಲ್ಲಾ ಬಂಡಾಯವೂ ಇನ್ನೂ ನಾಲ್ಕು ದಿನದಲ್ಲಿ ಬಗೆಹರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಬುಧವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಅವರು ಸುದ್ದಿಗಾರರೊಡನೆ ಮಾತನಾಡಿ, ಇನ್ನೂ ನಾಲ್ಕು ದಿನಗಳಲ್ಲಿ ಮ್ಯಾಜಿಕ್ ನಡೆಯಲಿದೆ. ಯಡಿಯೂರಪ್ಪ ಅವರು ಎಲ್ಲಾ ಕಡೆ ಹೋಗಿ ಭಿನ್ನಮತ ಶಮನ ಮಾಡುತ್ತಾರೆ. ನಾಲ್ಕೇ ದಿನದಲ್ಲಿ ಆ ಮ್ಯಾಜಿಕ್ ಆಗುತ್ತೆ ನೋಡುತ್ತಿರಿ. ಪಕ್ಷದ ಎಲ್ಲಾ ನಿರ್ಧಾರಗಳನ್ನು ವಿಜಯೇಂದ್ರ ಯಡಿಯೂರಪ್ಪ ಮಾತ್ರವೇ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಯಗೊಂಡಿದೆ. ಸೋಲುವ ಭೀತಿಯಿಂದ ಸಚಿವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮೋದಿ ಅಲೆಗೆ ಹೆದರಿ ಯಾವ ಸಚಿವರೂ ಸ್ಪರ್ಧೆ ಮಾಡಲಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎನ್ನುವ ರೀತಿಯಾಗಿದೆ. ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡ ಏಕೈಕ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಎಂದರು.

ಲೋಕಸಭಾ ಟಿಕೆಟ್ ಭಿನ್ನಮತ ಶಮನಕ್ಕೆ ಬಿಎಸ್‌ವೈ ಸಾರಥ್ಯ: ಕೊಪ್ಪಳ, ಬಳ್ಳಾರಿ, ದಾವಣಗೆರೆಯಲ್ಲಿ ಯಶಸ್ವಿ?

ಮತ್ತೊಮ್ಮೆ ಮೋದಿಗೆ ಪ್ರಾರ್ಥನೆ: ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಲಾಗಿದೆ. ದೇಶದ ಜನಪ್ರಿಯತೆ ಪಡೆದಿರುವ ಪ್ರಧಾನಿ ಮೋದಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳ ಸಂಕಲ್ಪ ಮಾಡಿದ್ದಾರೆ. ಅದು ಯಶಸ್ವಿಯಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಾಡಿನಲ್ಲಿ ಬರಗಾಲ ಇದೆ. ನಾಡಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಬಿಜೆಪಿಯಿಂದ ಅದ್ದೂರಿ ಸ್ವಾಗತ: ಪಿರಿಯಾಪಟ್ಟಣಕ್ಕೆ ಬುಧವಾರ ಆಗಮಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಾಲೂಕು ಬಿಜೆಪಿಯಿಂದ ಕಂಪ್ಲಾಪುರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ಅವರು ಮಾತನಾಡಿ, ತಕ್ಷಣವೇ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಹಾಸನ, ಮಂಡ್ಯ, ಮೈಸೂರು ಮೂರು ಕ್ಷೇತ್ರಗಳನ್ನು ಸ್ಪಂದಿಸುವ ಬೆಟ್ಟದಪುರದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ಮತಯಾಚನೆ ಮಾಡಲಾಗುವುದೆಂದು ತಿಳಿಸಿದರು.

ದಾವಣಗೆರೆ ಬಂಡಾಯ ಬಗೆಹರಿಸಿದ ಬಿಎಸ್‌ವೈ: ರವೀಂದ್ರನಾಥ್‌ ನೇತೃತ್ವದಲ್ಲಿ ಚುನಾವಣೆಗೆ ಸರ್ವಸಮ್ಮತಿ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಅಭ್ಯರ್ಥಿ ಯದುವೀರ ಕೃಷ್ಣರಾಜ ಚಾಮರಾಜ ಒಡೆಯರ್, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ರಾಜೇಂದ್ರ, ಮಾಜಿ ಶಾಸಕ ಎಚ್.ಸಿ. ಬಸವರಾಜು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೌಲನಹಳ್ಳಿ ಸೋಮಶೇಖರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸ್ವಾಮಿ, ಮುಖಂಡರಾದ ವಿಕ್ರಂರಾಜ, ಲೋಕಪಾಲಯ್ಯ, ರಮೇಶ್, ಶಿವಶಂಕರ್, ಕುಮಾರಸ್ವಾಮಿ, ತಾಲೂಕಿನ ಎಲ್ಲ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.