2.8 ಲಕ್ಷ ಮತಗಳ ಅಂತರದಿಂದ ಗೆದ್ದ ಡಿಂಪಲ್ ಯಾದವ್: ಸಮಾಜವಾದಿ ಪಕ್ಷದ ‘ಬಹು’ಗೆ ಗೆಲುವಿನ ಪರಾಕ್..!
2019 ರ ಲೋಕಸಭಾ ಚುನಾವಣೆಯಲ್ಲಿ, ಮುಲಾಯಂ ಸಿಂಗ್ ಯಾದವ್ ಅವರು ಮೈನ್ಪುರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೇಮ್ ಸಿಂಗ್ ಶಾಕ್ಯ ಅವರನ್ನು 94,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.
ಉತ್ತರ ಪ್ರದೇಶದ (Uttar Pradesh) ಮೈನ್ಪುರಿ (Mainpuri) ಲೋಕಸಭೆ (Lok Sabha) ಉಪ ಚುನಾವಣೆಯಲ್ಲಿ (Bypolls) ಸಮಾಜವಾದಿ ಪಕ್ಷದ (Samajwadi Party) ನಾಯಕಿ ಡಿಂಪಲ್ ಯಾದವ್ (Dimple Yadav) ಅವರು ಗುರುವಾರ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ (BJP) ರಘುರಾಜ್ ಸಿಂಗ್ ಶಾಕ್ಯ ಅವರನ್ನು 2,88,461 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ದಾಖಲೆ ಸೃಷ್ಟಿಸಿದ್ದಾರೆ. ಎಸ್ಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಈ ಸ್ಥಾನವನ್ನು ಎಸ್ಪಿ ಸ್ಥಾಪಕ ಮುಲಾಯಂ ಸಿಂಗ್ ಹೊಂದಿದ್ದರು ಮತ್ತು ಅಕ್ಟೋಬರ್ 10 ರಂದು ಅವರ ನಿಧನದ ನಂತರ ಈ ಲೋಕಸಭಾ ಕ್ಷೇತ್ರ ತೆರವಾಗಿತ್ತು.
ಪತಿ ಮತ್ತು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಡಿಂಪಲ್ ಯಾದವ್ ಚುನಾವಣಾಧಿಕಾರಿಯಿಂದ ಗೆಲುವಿನ ಪ್ರಮಾಣಪತ್ರ ಪಡೆದಿದ್ದು, ತಮ್ಮ ಸಂಸದೀಯ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ ಡಿಂಪಲ್ ಯಾದವ್. 2019 ರ ಲೋಕಸಭಾ ಚುನಾವಣೆಯಲ್ಲಿ, ಮುಲಾಯಂ ಸಿಂಗ್ ಯಾದವ್ ಅವರು ಮೈನ್ಪುರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೇಮ್ ಸಿಂಗ್ ಶಾಕ್ಯಾ ಅವರನ್ನು 94,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಸಮಾಜವಾದಿ ಪಕ್ಷ 2019ರ ಚುನಾವಣೆಯಲ್ಲಿ ಬಿಎಸ್ಪಿಯೊಂದಿಗೆ ಸ್ಪರ್ಧಿಸಿತ್ತು. ಅದರೂ, ಗೆಲುವಿನ ಅಂತರ 1 ಲಕ್ಷಕ್ಕಿಂತ ಕಡಿಮೆ ಇತ್ತು.
ಇದನ್ನು ಓದಿ: ಮೈನ್ಪುರಿ ಉಪಚುನಾವಣೆಯಲ್ಲಿ ಎಸ್ಪಿಯದ್ದೇ ಕಾರುಬಾರು: ‘ಸೊಸೆ’ ಡಿಂಪಲ್ ಯಾದವ್ ಎದುರು ಮಂಕಾದ ಕಮಲ..!
ಈ ಹಿನ್ನೆಲೆ ಸಮಾಜವಾದಿ ಪಕ್ಷದ ಸೊಸೆ ಡಿಂಪಲ್ ಯಾದವ್ ಅವರ ಗೆಲುವಿನ ಅಂತರ ಮಾವನಿಗಿಂತ ಹೆಚ್ಚು ಅಂತರವಿದೆ. ಇದು ಮೈನ್ಪುರಿ ಜನರಿಗೆ 'ನೇತಾಜಿ' (ಮುಲಾಯಂ) ಮೇಲೆ ನಂಬಿಕೆ ಮತ್ತು ಅವರು ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ತೋರಿಸುತ್ತದೆ ಎಂದು ಹೇಳಬಹುದು. ಜತೆಗೆ, ಕುಟುಂಬದ ಪರ ಅನುಕಂಪದ ಅಲೆಯೂ ವರ್ಕೌಟ್ ಆಗಿದೆ ಎನ್ನಬಹುದು.
ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯ ಅವರು ತಮ್ಮ ದೌಲ್ಪುರ ಬೂತ್ನಲ್ಲೇ 187 ಮತಗಳಿಂದ ಸೋತಿದ್ದಾರೆ. ಡಿಂಪಲ್ ಯಾದವ್ 6,18,120 (ಶೇ. 64.08) ಮತಗಳನ್ನು ಪಡೆದರೆ, ರಘುರಾಜ್ ಸಿಂಗ್ ಶಾಕ್ಯ 3,29,659 (ಶೇ. 34.18) ಮತಗಳನ್ನು ಪಡೆದರು.
ಈ ವರ್ಷದ ಜೂನ್ನಲ್ಲಿ ನಡೆದ ಅಜಂಗಢ ಮತ್ತು ರಾಮ್ಪುರ ಲೋಕಸಭಾ ಉಪಚುನಾವಣೆಯಲ್ಲಿ ಎಸ್ಪಿಯ ಸೋಲಿನಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥರು ಪಾಠ ಕಲಿತಿದ್ದಾರೆ. ಏಕೆಂದರೆ, ಅಖಿಲೇಶ್ ಯಾದವ್ ಅವರು ತಮ್ಮ ಪತ್ನಿಗೆ ಬೆಂಬಲ ಕ್ರೋಢೀಕರಿಸಲು ಮೈನ್ಪುರಿಯಲ್ಲಿಯೇ ಇದ್ದು, ಬರ್ಜರ ಪ್ರಚಾರ ನಡೆಸಿದ್ದಾರೆ. ರಾಂಪುರದಲ್ಲಿ ಅಜಂ ಖಾನ್ ಅವರೊಂದಿಗೆ ರ್ಯಾಲಿಯನ್ನು ಉದ್ದೇಶಿಸಿ ಪ್ರಚಾರದ ಅವಧಿಯಲ್ಲಿ ಅವರು ಒಮ್ಮೆ ಮಾತ್ರ ಮೈನ್ಪುರಿಯಿಂದ ಹೊರಹೋಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Gujarat, HP Election Results 2022 Live: HP ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜಯರಾಮ್ ಠಾಕೂರ್ಗೆ ಜಯ
2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿನ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿಯು, ಮೈನ್ಪುರಿ ಉಪಚುನಾವಣೆಯಲ್ಲಿ ಗೆಲ್ಲಲು ಕಣ್ಣಿಟ್ಟಿತ್ತು. ಈ ಹಿನ್ನೆಲೆ, ಕೇಸರಿ ಪಕ್ಷವು ಅಖಿಲೇಶ್ ಯಾದವ್ ಅವರೊಂದಿಗಿನ ಅಂತರವನ್ನು ಗಮನದಲ್ಲಿಟ್ಟುಕೊಂಡು ಶಿವಪಾಲ್ ಯಾದವ್ಗೆ ನಿಕಟವರ್ತಿ ಎಂದು ಪರಿಗಣಿಸಲಾದ ರಘುರಾಜ್ ಶಾಕ್ಯ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಶಿವಪಾಲ್ ಯಾದವ್ ಅವರು ಎಸ್ಪಿ ಮುಖ್ಯಸ್ಥರನ್ನು ಭೇಟಿಯಾಗಿದ್ದು ಮತ್ತು ಡಿಂಪಲ್ ಯಾದವ್ ಪರ ಪ್ರಚಾರ ನಡೆಸಿದ್ದು, ಆಡಳಿತ ಪಕ್ಷದ ಗೇಮ್ ಪ್ಲಾನ್ಗೆ ತಣ್ಣೀರು ಎರಚಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಚುನಾವಣಾ ಸಭೆಯಲ್ಲಿ ಶಿವಪಾಲ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರನ್ನು ಪೆಂಡಾಲ್ ಮತ್ತು ಫುಟ್ಬಾಲ್ಗೆ ಹೋಲಿಸಿದ್ದರು. ಆ ವೇಳೆ, ಶಿವಪಾಲ್ ಯಾದವ್ ಮತ್ತು ಅಖಿಲೇಶ್ ಯಾದವ್ ಈ ಆರೋಪಗಳಿಗೆ ತಿರುಗೇಟು ನೀಡಿದ್ದರು.
ಇದನ್ನೂ ಓದಿ: Rampur By Elections: ಅಜಂ ಖಾನ್ ಭದ್ರಕೋಟೆಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅರಳಿದ ಕಮಲ..!