'ಮೋದಿ ದಾಡಿ ಬಿಟ್ಟರೆ ಟ್ಯಾಗೋರ್ ಆಗೋಲ್ಲ'
ದೇಶದಲ್ಲಿ ಕೊರೋನಾ 2ನೇ ಅಲೆಯಿಂದ ಜನ ಸಾಯುತ್ತಿದ್ದಾರೆ| ಇಂತಹ ಸಮಯದಲ್ಲಿ ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಚಾರದಲ್ಲಿ ಓಡಾಡುತ್ತಿರುವ ಮೋದಿ| ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ತತ್ವ-ಸಿದ್ಧಾಂತ, ಮಾಡಿದಂತಹ ಕೆಲಸ-ಕಾರ್ಯಗಳನ್ನು ಹೇಳುವುದನ್ನು ಬಿಟ್ಟು ಮಮತಾ ಬ್ಯಾನರ್ಜಿ ಅವರನ್ನು ಮೋದಿ ವ್ಯಂಗವಾಡುತ್ತಿದ್ದಾರೆ: ಖರ್ಗೆ|
ಮಸ್ಕಿ(ಏ.12): ಪ್ರಧಾನಿ ನರೇಂದ್ರ ಮೋದಿ ದಾಡಿ ಬಿಟ್ಟರೆ ರವೀಂದ್ರನಾಥ ಟ್ಯಾಗೋರ್ ಆಗೋಲ್ಲ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮೋದಿ ನಕಲು ನಡೆಸಿದ್ದಾರೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಭಾನುವಾರ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಭಾನುವಾರ ಮಾತನಾಡಿ, ದೇಶದಲ್ಲಿ ಕೊರೋನಾ ಎರಡನೇ ಅಲೆಯಿಂದ ಜನ ಸಾಯುತ್ತಿದ್ದಾರೆ ಇಂತಹ ಸಮಯದಲ್ಲಿ ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಚಾರದಲ್ಲಿ ಓಡಾಡುತ್ತಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ತತ್ವ-ಸಿದ್ಧಾಂತ, ಮಾಡಿದಂತಹ ಕೆಲಸ-ಕಾರ್ಯಗಳನ್ನು ಹೇಳುವುದನ್ನು ಬಿಟ್ಟು ಮಮತಾ ಬ್ಯಾನರ್ಜಿ ಅವರನ್ನು ವ್ಯಂಗವಾಡುತ್ತಿದ್ದಾರೆ. ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಪ್ರಚಾರದಲ್ಲಿ ಜೋಕರ್ ತರ ಆಡುತ್ತಿದ್ದಾರೆ ನನ್ನ ಐದು ದಶಕದ ರಾಜಕೀಯ ಜೀವನದಲ್ಲಿ ಇಂತಹ ಪ್ರಧಾನಿಯನ್ನು ನಾನು ಕಂಡಿಲ್ಲ ಎಂದು ಹರಿಹಾಯ್ದರು.
ಸುಳ್ಳು ಹೇಳೋದ್ರಲ್ಲಿ ಬಿಜೆಪಿಗರು ನಿಸ್ಸೀಮರು: ಸಿದ್ದರಾಮಯ್ಯ
ಇದು ಬಹಳ ಮಹತ್ವದ ಚುನಾವಣೆಯಾಗಿ, ಉಪಚುನಾವಣೆ ಎಂದು ಹಗುರವಾಗಿ ಪರಿಗಣಿಸಬೇಡಿ, ಮಸ್ಕಿ ಉಪಚುನಾವಣೆ ದಿಕ್ಸೂಚಿಯಾಗಲಿದೆ. ರಾಜ್ಯ ಮತ್ತು ರಾಷ್ಟ್ರದ ದೃಷ್ಠಿಯಿಂದ ಬಹಳ ಮುಖ್ಯವಾದ ಚುನಾವಣೆಯಾಗಿದೆ ಎಂದರು.
ಸಿದ್ದರಾಮಯ್ಯ ಕಾಲದಲ್ಲಿ ಹಾಕಿದ್ದ ರಸ್ತೆಗಳಿಗೆ ಮಣ್ಣು ಹಾಕಿ ರಿಪೇರಿ ಮಾಡಲು ಬಿಜೆಪಿ ಸರ್ಕಾರದಲ್ಲಿ ದುಡ್ಡಿಲ್ಲ, ಪ್ರತಿಯೊಂದಕ್ಕು ದಡ್ಡಿಲ್ಲ ಎನ್ನುತ್ತಾರೆ ಹಾಗಾದರೆ ತೆರಿಗೆ ಹಣ ಎಲ್ಲಿಯೋಯಿತು. ಯಡಿಯೂರಪ್ಪ ಮತ್ತು ಅವರ ಮಗ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಪಕ್ಷದವರೇ ಆರೋಪ ಮಾಡುತ್ತಿದ್ದಾರೆ. ಮಂತ್ರಿಗಳ ಖಾತೆಯಲ್ಲಿ ಕೈಯಾಡಿಸುತ್ತಿದ್ದಾರೆ ಎಂದು ಸಚಿವರೇ ಹೇಳಿದ್ದಾರೆ. ಈಶ್ವರಪ್ಪ ಸುಳ್ಳು ಹೇಳಿದ್ದರೆ ಸಚಿವ ಸಂಪುಟದಿಂದ ಕೈಬಿಡಬೇಕಿತ್ತು, ಎಲ್ಲರೂ ಭ್ರಷ್ಟಾಚಾರಾಗಿದ್ದಕ್ಕೆ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕಳೆದ ಚುನಾವಣೆಯಲ್ಲಿ ದುರ್ದೈವದಿಂದ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ಮಾಡಿದ್ದೆ, ಅವರು ಹಣದ ಹಿಂದೆ ಓಡಿಹೋಗುವ ಪ್ರತಾಪವಾಗಿದ್ದಾರೆ. ಬಿಜೆಪಿಗರು ಉಪಚುನಾವಣೆಯಲ್ಲಿ ಮೋದಿಗೆ ವೋಟು ಕೊಡಿ ಎನ್ನು ಕೇಳುತ್ತಾರೆ ಅವರೇನು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಈ ಭಾಗಕ್ಕೆ 371 (ಜೆ) ಜಾರಿ ಮಾಡುವುದರ ಮೂಲಕ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹಾಗೂ ಅಭಿವೃದ್ಧಿಯಲ್ಲಿ ವಿಶೇಷ ಅನುದಾನ ಒದಗಿಸಿಕೊಟ್ಟಿದೆ. ಅದರ ಲಾಭವನ್ನು ಇಂದು ಲಕ್ಷಾಂತರ ಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.