ಜಗದೀಶ ಶೆಟ್ಟರ್‌ ಎಂಟು ತಿಂಗಳಿಂದ ದೈಹಿಕವಾಗಿ ಮಾತ್ರ ಕಾಂಗ್ರೆಸ್‌ನಲ್ಲಿದ್ದರು. ಆದರೆ ಅವರ ಮನಸು ಬಿಜೆಪಿಯಲ್ಲೇ ಇತ್ತು. ಅವರು ಬಂದಿದ್ದು ಒಳ್ಳೆಯದಾಯಿತು. ಹೀಗಾಗಿ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹೇಳುತ್ತೇನೆ. ಲಕ್ಷ್ಮಣ ಸವದಿಯವರು ಬಿಜೆಪಿಗೆ ಬರುವ ಕುರಿತು ರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮನ್ನು ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ ಎಂದ ಮಾಜಿ ಸಂಸದ ರಮೇಶ ಕತ್ತಿ 

ಬೆಳಗಾವಿ(ಜ.31): ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮರಳಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಒಳ್ಳೆಯ ಬೆಳವಣಿಗೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಬಿಜೆಪಿಗೆ ಬರುವ ಕುರಿತು ಚರ್ಚೆ ನಡೆಯುತ್ತಿದ್ದು, ಸವದಿ ಪಕ್ಷಕ್ಕೆ ಬಂದರೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್‌ ಎಂಟು ತಿಂಗಳಿಂದ ದೈಹಿಕವಾಗಿ ಮಾತ್ರ ಕಾಂಗ್ರೆಸ್‌ನಲ್ಲಿದ್ದರು. ಆದರೆ ಅವರ ಮನಸು ಬಿಜೆಪಿಯಲ್ಲೇ ಇತ್ತು. ಅವರು ಬಂದಿದ್ದು ಒಳ್ಳೆಯದಾಯಿತು. ಹೀಗಾಗಿ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹೇಳುತ್ತೇನೆ. ಲಕ್ಷ್ಮಣ ಸವದಿಯವರು ಬಿಜೆಪಿಗೆ ಬರುವ ಕುರಿತು ರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮನ್ನು ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ ಎಂದು ಹೇಳಿದರು.

ಶಾಸಕ ಲಕ್ಷ್ಮಣ್ ಸವದಿ ಸಂವಿಧಾನ ಬದಲಾವಣೆ ಮಾತು! ಹೇಳಿದ್ದೇನು?

ಸ್ಥಾನಮಾನಕ್ಕಾಗಿ ಯಾರೂ ಪಕ್ಷಕ್ಕೆ ಬರುವುದಿಲ್ಲ. ಸವದಿ ಅವರು ಕಾಂಗ್ರೆಸ್‌ಗೆ ಹೋದಾಗ ಏನು ಸ್ಥಾನಮಾನ ಕೇಳಿ ಹೋಗಿದ್ದರು? ಅವರೇನು ಕೊಟ್ಟರು? ನಮ್ಮ ಪಕ್ಷಕ್ಕೆ ಬಂದರೆ ಏನು ಕೊಡಬೇಕೆಂದು ವರಿಷ್ಠರು ನಮ್ಮನ್ನು ಕರೆದು ನಿರ್ಣಯ ಮಾಡುತ್ತಾರೆ. ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನು ಬರಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಲಕ್ಷ್ಮಣ ಸವದಿ ಅವರನ್ನು ಕರೆತರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ನಾನು, ಈರಣ್ಣ ಕಡಾಡಿ, ಮಹಾಂತೇಶ ದೊಡ್ಡಗೌಡರ, ರಮೇಶ ಕತ್ತಿ ಸೇರಿ ಜಿಲ್ಲೆಯ ಎಲ್ಲ ನಾಯಕರ ಮೇಲಿದೆ. ಸವದಿ ಒಪ್ಪಿಗೆ ಕೊಡಬೇಕು. ಕೇಂದ್ರದ ಮುಖಂಡರ ಜತೆ ಚರ್ಚೆ ಆಗಬೇಕು. ಸವದಿಯವರು ಬಿಜೆಪಿಗೆ ಬರಬೇಕೆಂದೇ ನಮ್ಮ ಆಶಯ. ಬಂದರೆ ಪಕ್ಷ, ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತದೆ. ನಮ್ಮ ಪಕ್ಷದಿಂದ ಹೊರ ಹೋದವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ. ಸವದಿಯರಿಗೂ ಆಹ್ವಾನ ಕೊಟ್ಟಿದ್ದೇವೆ. ನಮ್ಮ ರಾಜ್ಯಾಧ್ಯಕ್ಷರು, ಎಲ್ಲರೂ ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.