ತಮ್ಮ ಬೆಂಬಲಿಗನ ಮೇಲೆ ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಖಂಡಿಸಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಮತ್ತು ಬೆಂಬಲಿಗರು ಜಿಲ್ಲಾ ಪೋಲಿಸ್‌ ವರಿಷ್ಠಾಧೀಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

ಚಿಕ್ಕಬಳ್ಳಾಪುರ (ಜು.29): ತಮ್ಮ ಬೆಂಬಲಿಗನ ಮೇಲೆ ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಖಂಡಿಸಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಮತ್ತು ಬೆಂಬಲಿಗರು ಜಿಲ್ಲಾ ಪೋಲಿಸ್‌ ವರಿಷ್ಠಾಧೀಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಡಾ.ಕೆ.ಸುಧಾಕರ್‌ ಬೆಂಬಲಿಗ ಹಾಗೂ ಹಿಂದುಳಿದ ಸಮಾಜದ ಮುಖಂಡ ಸಂತೋಷ್‌ ರಾಜು ಎಂಬುವರ ಮೇಲೆ ರೈಲು ನಿಲ್ದಾಣದ ರಸ್ತೆಯ ಅಂಗಡಿ ಬಳಿ ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲಿಗರು ಎನ್ನಲಾದ ಕೆಲವರು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

Add Asianetnews Kannada as a Preferred SourcegooglePreferred

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಈ ಘಟನೆಯನ್ನು ವಿರೋಧಿಸಿ ಮಾಜಿ ಸಚಿವ ಡಾ.ಸುಧಾಕರ್‌ ನೇತೃತ್ವದಲ್ಲಿ ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಸಂಜೆ ಚಿಕ್ಕಬಳ್ಳಾಪುರ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಈ ಹಿಂದೆ ಪೆರೇಸಂದ್ರಗ್ರಾಮದಲ್ಲಿ ನವೀನ್‌ ಎಂಬುವವರ ಮೇಲೆಯೂ ಇದೇ ರೀತಿ ದೌರ್ಜನ್ಯ ನಡೆಸಿದ್ದು ಈಗ ಸಂತೋಷ್‌ ರಾಜು ಮೇಲೆ ನಡಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಇಂತಹ ಘಟನೆಗಳು ಮರುಕಳಿಸುತ್ತಿರುವುದು ಚಿಕ್ಕಬಳ್ಳಾಪುರದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಚುನಾವಣೆ ಮುಗಿದು ಇನ್ನೂ ಮೂರು ತಿಂಗಳಾಗಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗ ಚಿಕ್ಕಬಳ್ಳಾಪುರಕ್ಕೂ ಹಬ್ಬಿದೆ ಎಂದರು.

ಅಧಿಕ ಭಾರದ ಕಲ್ಲು ಸಾಗಾಣಿಕೆ ವಿರುದ್ಧ ಕ್ರಮಕ್ಕೆ ಶಾಸಕ ಸುಬ್ಬಾರೆಡ್ಡಿ ಸೂಚನೆ

ಶಾಸಕರು ಬೆಂಗಳೂರಿನ ತಮ್ಮ ಖಾಸಗಿ ಸಂಸ್ಥೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದನ್ನು ಪ್ರಶ್ನಿಸಿ ನಗರಸಭಾ ಸದಸ್ಯರು ಮತ್ತು ಮಾಜಿ ಅಧ್ಯಕ್ಷರು ಪತ್ರಿಕಾ ಗೋಷ್ಠಿ ನಡೆಸಿ ಶಾಸಕರ ರಾಜೀನಾಮೆಗೆ ಒತ್ತಾಯಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಶಾಸಕರು ಇದಕ್ಕೆ ಪ್ರತಿಕ್ರಯಿಸಿ ಸಭೆ ನಡೆಸಿದ ಬಗ್ಗೆ ಮಾತನಾಡದೆ ಆರೋಪಿಸಿದ್ದ ನಗರಸಭಾ ಸದಸ್ಯರಿಗೆ ಮುಂದಿನ ಚುನಾವಣೆಯಲ್ಲಿ ಡೆಪಾಸಿಟ್‌ ದೊರೆಯುವುದಿಲ್ಲಾ ಎಂದು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಸದಸ್ಯರನ್ನು ಪ್ರಚೋಧಿಸಿದ್ದಾರೆ ಎಂದರು.

ಚುನಾವಣೆಗೆ ಸ್ಪರ್ಧಿಸಲು ಸವಾಲು ಶಾಸಕರೆ ನೀವು ರಾಜಿನಾಮೆ ನೀಡಿ ಬನ್ನಿ ನಾನು ಮತ್ತು ನೀವು ಇಬ್ಬರು ಪಕ್ಷೇತರರಾಗಿ ಚುನಾವಣೆ ಎದಿರಿಸೋಣ. ಯಾರು ಗೆಲ್ಲುತ್ತಾರೆ ನೋಡೋಣಾ ಎಂದು ಡಾ.ಸುಧಾಕರ್‌ ಶಾಸಕ ಪ್ರದೀಪ್‌ ಈಶ್ವರ್‌ಗೆ ಸವಾಲು ಹಾಕಿದರು. ನಾನು ಚುನಾವಣೆ ನಂತರ ಹೇಳಿದ್ದೆ , ಸರ್ಕಾರದ ವಿರುದ್ದ ಆರು ತಿಂಗಳು ಯಾವುದೇ ಆರೋಪಗಳನು ಮಾಡುವುದಿಲ್ಲ. ಅಭಿವೃದ್ಧಿಗೆ ಬೆಂಬಲ ನೀಡುತ್ತೇನೆ ಎಂದಿದ್ದೆ. ಆದರೆ ಈಗ ಮಾತನಾಡುವಂತೆ ಮಾಡಿದ್ದಾರೆ. ಜನ ಪ್ರತಿನಿಧಿಗಳಿಗೆ ಮೊದಲು ಗೌರವ ನೀಡುವುದನ್ನು ಕಲಿಯಿರಿ. ನನ್ನ ಬೆಂಬಲಿಗರ ಮೇಲೆ ದೌರ್ಜನ್ಯ ನಡೆಸಿದರೆ ನಾನು ಸುಮ್ಮನಿರಲ್ಲ. ನಾನು ಸೋತಿರಬಹುದು ಸತ್ತಿಲ್ಲಾ. ಬೆಂಬಲಿಗರ ಪರವಾಗಿ ನಾನಿದ್ದೇನೆ ಎಂದು ಶಾಸಕರಿಗೆ ಎಚ್ಚರಿಸಿದರು.

ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್‌

ಎಸ್ಪಿಗೆ ಮನವಿ ಸಲ್ಲಿಕೆ: ಬಳಿಕ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ರಿಗೆ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ದ ಕಾನೂರಿತ್ಯಾ ಕ್ರಮ ಕೈಗೊಳ್ಳ ಬೇಕು, 24 ಗಂಟೆಗಳಲ್ಲಿ ಹಲ್ಲೆಕೋರರ ವಿರುದ್ಧ ಎಫ್‌ಐಆರ್‌ ನಮೂದಿಸದಿದ್ದಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ದೂರು ಸ್ವೀಕರಿಸಿದ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷರಾದ ಪಿ.ಎನ್‌.ಕೇಶವರೆಡ್ಡಿ, ಪುರದಗಡ್ಡೆ ಮುನೇಗೌಡ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌, ನಗರಸಭೆ ಮಾಜಿ ಅಧ್ಯಕ್ಷ ಆನಂದಬಾಬುರೆಡ್ಡಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ,ನಗರಸಭೆ ಸದಸ್ಯರಾದ ಸುಭ್ರಮಣ್ಯಾಚಾರಿ, ಮಂಜುನಾಥಾಚಾರಿ, ಕೇಶವ, ಮುನಿರಾಜು, ಮತ್ತಿತರರು ಇದ್ದರು.