ಜಾರಕಿಹೊಳಿ ವಿರುದ್ಧ ರೆಬಲ್, ಕಾಂಗ್ರೆಸ್ ಸೇರಲು 3 ಶರತ್ತು ಇಟ್ಟ ಲಕ್ಷ್ಮಣ ಸವದಿ!
ಬೆಳಗಾವಿ ಭಾಗದ ಸಾಹುಕಾರ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ ಸವದಿ ರೆಬಲ್ ಆಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಕಾಂಗ್ರೆಸ್ ಸೇರಲು ಮೂರು ಶರತ್ತು ಇಟ್ಟಿದ್ದಾರೆನ್ನಲಾಗಿದೆ.
ಬೆಂಗಳೂರು (ಏ.14): ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಅಸಮಾಧಾನ ಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಇಂದು ಸಂಜೆ 4.30 ಗಂಟೆಗೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಅವರಿಗೆ ಕಾಂಗ್ರೆಸ್ ಅಥಣಿ ಟಿಕೆಟ್ ಫಿಕ್ಸ್ ಆಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಕುಮಟಳ್ಳಿ ವಿರುದ್ಧವೇ ತೊಡೆ ತಟ್ಟಲಿದ್ದಾರೆ. ಇದೆಲ್ಲದ ನಡುವೆ ಬೆಳಗಾವಿ ಭಾಗದ ಸಾಹುಕಾರ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ ಸವದಿ ರೆಬಲ್ ಆಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ಮುಂದೆ ಸವದಿ ಷರತ್ತು ಮೂರು ಷರತ್ತು ಹಾಕಿದ್ದಾರೆ ಎನ್ನಲಾಗಿದೆ.
ಆ ಮೂರು ಷರತ್ತು ಹೀಗಿದೆ.
1) ಗೌರವಯುತವಾಗಿ ನಡೆಸಿಕೊಳ್ಳಬೇಕು.
2) ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಹಾಗೂ ವಿರೋಧಗಳು ಬಾರದಂತೆ ನೋಡಿಕೊಳ್ಳಬೇಕು.
3) ನೀರಾವರಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಕೆಲಸ ಆಗಬೇಕು.
ಆ ಮೂಲಕ ರಮೇಶ್ ಜಾರಕಿಹೊಳಿ ಸಚಿವರಾಗಿದ್ದ ಇಲಾಖೆ ಮೇಲೆ ಸವದಿ ಕಣ್ಣು ನೆಟ್ಟಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀರಾವರಿ ಇಲಾಖೆ ಮೇಲೆ ಹಿಡಿತ ಸಾಧಿಸುವ ಸುಳಿವು ಅಂತು ಸುಳ್ಳಲ್ಲ.
ರಾಜೀನಾಮೆ ನೀಡಿದ ಸವದಿ:
ಸಂಜೆ 4.30ಕ್ಕೆ ಕಾಂಗ್ರೆಸ್ ಪಕ್ಷ ಸೇರಲಿರುವ ಲಕ್ಷ್ಮಣ ಸವದಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಮತ್ತು ಬಿಜೆಪಿಯಲ್ಲಿನ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ರವಾನಿಸಿದ್ದಾರೆ.
ಸವದಿ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತ ಪಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಸವದಿ ರಾಜೀನಾಮೆ ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಜೆಪಿ ನಾಯಕರು:
ಬಿಜೆಪಿ ನಾಯಕರು ಸವದಿ ರಾಜೀನಾಮೆ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಕಾಣುತ್ತಿದೆ. ರಾಜ್ಯ ಬಿಜೆಪಿ ನಾಯಕರು ಸವದಿ ವಿಚಾರ ಮುಗಿದ ಅಧ್ಯಾಯ ಎನ್ನುತ್ತಿದ್ದಾರೆ. ಅವರಿಗೆ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಹೇಳಿದರು ಒಪ್ಪುತ್ತಿಲ್ಲ. ಮಹೇಶ್ ಕುಮಟಳ್ಳಿ ಸರ್ಕಾರ ರಚನೆಗೆ ಸಹಾಯ ಮಾಡಿದ್ರು. ಅವರನ್ನು ಮಂತ್ರಿಯಾಗಿ ಮಾಡ್ತೇವೆ ಎಂದು ಕರೆ ತಂದ್ವಿ. ಮಂತ್ರಿ ಮಾಡಲಿಲ್ಲ. ಆದರೂ ಅವರು ಸುಮ್ಮನೆ ಇದ್ರು. ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ವಿ. Mlc ಆಯ್ಕೆ ವೇಳೆ ಪಟ್ಟು ಹಿಡಿದು ಪಡೆದ್ರು. ಲಕ್ಷ್ಮಣ ಸವದಿ ಬದಲು ಹುಬ್ಬಳ್ಳಿಯ ಲಿಂಗರಾಜ್ ಪಾಟೀಲ್ ಗೆ ಫೈನಲ್ ಆಗಿದ್ದನ್ನು ತಪ್ಪಿಸಿ ಸವದಿಗೆ ನೀಡಲಾಯಿತು. ಈಗ ಬಂಡಾಯ ಎದ್ದು ಹೋದ್ರೆ ಏನು ಮಾಡೋದಕ್ಕೆ ಆಗೋದಿಲ್ಲ. ಮಾತಾಡಿದ್ದೆಲ್ಲಾ ಆಗಿದೆ. ಮೂರು ದಿನಗಳ ಹಿಂದೆಯೇ ಮಾತುಕತೆ ಎಲ್ಲಾ ಮುಗಿದಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ಇಂದು ಸಂಜೆ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆ, ಅಥಣಿಯಿಂದ ಟಿಕೆಟ್, ಕುಮಟಳ್ಳಿ ವಿರುದ್ಧ ಸ್ಪರ್ಧೆ!
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.