ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದಂದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅಭಿಮಾನಿಗಳು 'ಮುಂದಿನ ಸಿಎಂ' ಎಂದು ಬ್ಯಾನರ್ ಹಾಕಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಇದು ಕಾರ್ಯಕರ್ತರ ಅಭಿಮಾನ, ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಜಾಣ್ಮೆಯಿಂದ ಉತ್ತರಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಚರ್ಚೆಯ ಕುರಿತ ವಿಷಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ಎರಡೂವರೆ ವರ್ಷಗಳ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಖುರ್ಚಿ ಬಿಟ್ಟುಕೊಡುತ್ತೇವೆ ಎಂದಿದ್ದ ಸಿದ್ದರಾಮಯ್ಯನವರು ಈಗ ಉಲ್ಟಾ ಹೊಡೆದಿರುವುದು, ಹಾಗೂ ಆನಂತರ ಕೆಲವು ತಿಂಗಳುಗಳಿಂದ ರಾಜಕೀಯದಲ್ಲಿ ಆಗುತ್ತಿರುವ ಕೋಲಾಹಲಗಳು ತಿಳಿದ್ದದ್ದೇ. ಏನಿಲ್ಲ, ಏನಿಲ್ಲ ನಮ್ಮ ನಡುವೆ ಏನಿಲ್ಲ, ಎಲ್ಲವೂ ಚೆನ್ನಾಗಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಮುಂದೆ ಹೇಳುತ್ತಾ ಬಂದಿದ್ದಾರೆ. ಆದರೆ ಅವರ ಅಭಿಮಾನಿಗಳು ಡಿಕೆಶಿ ಅವರು ಯಾವಾಗ ಸಿಎಂ ಆಗ್ತಾರೆ ಎಂದು ಕಾದು ಕುಳಿತಿದ್ದಾರೆ. ಆದರೆ ಈ ವಿಷ್ಯ ಬಂದಾಗೆಲಲ್ಲಾ ಕಾಂಗ್ರೆಸ್ಸಿಗರದ್ದು ಒಂದೇ ಉತ್ತರ, ಅದು ಹೈಕಮಾಂಡ್ ಎನ್ನುವುದು!

ಮುಂದಿನ ಸಿಎಂ ಡಿಕೆಶಿ
ಅದರ ನಡುವೆಯೇ ಇದೀಗ ಕುತೂಹಲದ ಘಟನೆಯೊಂದು ನಡೆದಿದೆ. ನಿನ್ನೆ ಅರ್ಥಾತ್ ಮೇ 15ರಂದು ಶಿವಕುಮಾರ್ ಅವರ ಹುಟ್ಟುಹಬ್ಬ. ಈ ದಿನದಂದು ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿರುವ ನಡುವೆಯೇ, ಒಂದು ದಿಢೀರ್ ಬೆಳವಣಿಗೆಯೂ ನಡೆದಿದೆ. ಅದೇನೆಂದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ (Mrinal Hebbalkar) ಅವರ ಅಭಿಮಾನಿಗಳು ಬೆಳಗಾವಿಯಲ್ಲಿ ಹಾಕಿದ್ದ ಬ್ಯಾನರ್ ಭಾರಿ ಸದ್ದು ಮಾಡುತ್ತಿದೆ. ಮೃಣಾಲ್ ಅವರೂ ಇರುವ ಈ ಬ್ಯಾನರ್ನಲ್ಲಿ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆಸಲಾಗಿದೆ.
ನಾನು ತಡೆಯೋಕೆ ಆಗತ್ತಾ?
ಈ ಬಗ್ಗೆ ಪತ್ರಕರ್ತರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೇಳಿದ ಪ್ರಶ್ನೆಗೆ, ಕಾರ್ಯಕರ್ತರ ಅಭಿಮಾನ ತಡೆಯೋಕೆ ಸಾಧ್ಯವಿಲ್ಲ. ಅವರಿಗೆ ನಾವು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯಾನಾ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಏನೇ ಇದ್ದರೂ ಅವರೇ ನೋಡಿಕೊಳ್ಳುತ್ತಾರೆ. ಆದರೆ ಬ್ಯಾನರ್ ವಿಷ್ಯದಲ್ಲಿ ನಾನು ಏನೂ ಮಾಡಲು ಆಗುವುದಿಲ್ಲ. ಅದು ಅಭಿಮಾನಿಗಳು ಮಾಡಿದ್ದು, ಅದನ್ನು ತಡೆಯುವುದು ನಮ್ಮಿಂದ ಆಗುವುದಿಲ್ಲ ಎಂದು ಜಾಣ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಯಕರ್ತರು ಅಭಿಮಾನದಿಂದ ಬ್ಯಾನರ್ ಹಾಕುತ್ತಾರೆ. ಏನೇ ಇದ್ದರೂ ಕೂಡ ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ್ದಂತೆ ಕೇಳುತ್ತೇನೆ. ಸಚಿವ ಸಂಪುಟ ಇರಲಿ, ಸಚಿವ ಸಂಪುಟದ ಪುನರ್ ರಚನೆ ಇರಲಿ ಎಲ್ಲವೂ ಹೈಕಮಾಂಡ್ಗೆ ಬಿಡಲಾಗಿದೆ ಎಂದರು.


