Asianet Suvarna News Asianet Suvarna News

ಬಿಜೆಪಿ ಸಂಸದರು, ಶಾಸಕರು ರಾಜೀನಾಮೆ ನೀಡಲಿ: ಐವಾನ್‌ ಡಿಸೋಜಾ

ಪರೇಶ ಮೇಸ್ತ ಪ್ರಕರಣ-ಚುನಾವಣೆಗೂ ಮುನ್ನ ವರದಿ ಬಂದಿದ್ದರಿಂದ ಬಿಜೆಪಿಗೆ ಆಘಾತ: ಕೆಪಿಸಿಸಿ ಉಪಾಧ್ಯಕ್ಷ ಐವಾನ್‌ ಡಿಸೋಜಾ 

KPCC Vice President Ivan Dsouza Slams BJP Government grg
Author
First Published Nov 23, 2022, 12:15 PM IST

ಭಟ್ಕಳ(ನ.23): ಪರೇಶ ಮೇಸ್ತಾ ಅವರ ಸಹಜ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆದು ಆಯ್ಕೆಯಾಗಿದ್ದ ಬಿಜೆಪಿ ಶಾಸಕರು, ಸಂಸದರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್‌ ಡಿಸೋಜಾ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಣೆಯಾಗಿದ್ದ ಪರೇಶ ಮೇಸ್ತ ಎರಡು ದಿನಗಳ ಆನಂತರ ಶವವಾಗಿ ಪತ್ತೆಯಾಗಿದ್ದನ್ನೇ ಚುನಾವಣಾ ಬಂಡವಾಳವನ್ನಾಗಿ ಬಳಸಿಕೊಂಡಿದ್ದ ಬಿಜೆಪಿ ಐದು ಮಂದಿ ಮುಸ್ಲಿಮರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿತ್ತು. ಅಂದಿನ ಮುಖ್ಯಮಂತ್ರಿ ಸಿಒಡಿಗೆ ಪ್ರಕರಣ ಹಸ್ತಾಂತರ ಮಾಡಿದ್ದನ್ನು ವಿರೋಧಿಸಿ ನಮಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ, ನಾವೇನಿದ್ದರೂ ಸಿಬಿಐ ಮೇಲೆ ನಂಬಿಕೆ ಇದ್ದವರು. ಸಿಬಿಐ ತನಿಖೆಯೇ ಆಗಬೇಕು ಎಂದು ಆಗ್ರಹಿಸಿದರು. ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು. ಆದರೆ ಇಂದು ಸಿಬಿಐ ಅವರ ಪರವಾಗಿ ವರದಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿಬಿಐ ತನಿಖೆಯ ಮೇಲೆಯೇ ನಂಬಿಕೆ ಇಲ್ಲ ಎನ್ನುತ್ತಿದೆ. ಈಗ ಬಿಜೆಪಿ ಬಣ್ಣ ಬಯಲಾಗಿದೆ ಎಂದು ಹೇಳಿದರು.

Assembly Election: ಕಾಂಗ್ರೆಸ್‌ನಲ್ಲಿ ಬಿರುಕು; ಜೋರಾದ ಟಿಕೆಟ್ ಫೈಟ್!

ಅಂದು ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ 2082 ಜನರ ಮೇಲೆ 67 ಪ್ರಕರಣಗಳು ದಾಖಲಾಗಿ 361 ಜನರನ್ನು ಬಂಧಿಸಲಾಗಿತ್ತು. 272 ಜನರ ಮೇಲೆ ರೌಡಿ ಶೀಟ್‌ ತೆರೆಯಲಾಗಿದೆ. ಪೊಲೀಸ್‌ ಇಲಾಖೆ 1699 ಜನರ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ಇದೆಲ್ಲವೂ ಇವರು ಚುನಾವಣೆಯಲ್ಲಿ ಗೆಲ್ಲಲು ಮಾಡಿದ ಕುತಂತ್ರ ದುಷ್ಕೃತ್ಯವಾಗಿದೆ. ಈಗ ಎಲ್ಲರೂ ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದೂ ಆರೋಪಿಸಿದರು.

ಕೇಂದ್ರ, ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಸಿಬಿಐ ವರದಿ ಒಪ್ಪುವುದಿಲ್ಲ ಎನ್ನುವ ನಿಮ್ಮ ಮಾತನ್ನು ಕೇಳಿ ಜನ ನಗುವಂತಾಗಿದೆ. ಕಾನೂನಿನ ಅರಿವೇ ಇಲ್ಲದಂತಹ ನಿಮ್ಮ ಮರು ತನಿಖೆಯ ನಾಟಕ ಸಾಕಾಗಿ ಹೋಗಿದೆ ಎಂದ ಅವರು, ಜನರಲ್ಲಿ ಸುಳ್ಳನ್ನೇ ಸತ್ಯ ಎಂದು ನಂಬಿಸಿ ಮೋಸದಿಂದ ಆಯ್ಕೆಯಾದ ಶಾಸಕ ಸುನಿಲ್‌ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸಂಸದ ಅನಂತಕುಮಾರ ಹೆಗಡೆ ನೈತಿಕ ಹೊಣೆ ಹೊತ್ತು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಡಿಸೋಜಾ ಹೇಳಿದರು.

ಮೂಲ ಬಿಜೆಪಿ, ವಲಸೆ ಬಿಜೆಪಿಗ ಎಂಬ ಪ್ರಶ್ನೆ ನನ್ನೆದುರಿಗಿಲ್ಲ: ಸಚಿವ ಹೆಬ್ಬಾರ

ಪರೇಶ ಮೇಸ್ತ ಸಾವಿನ ವರದಿ ಚುನಾವಣೆಗೆ ಮೊದಲು ಬಂದಿದ್ದರಿಂದ ಬಿಜೆಪಿಗೆ ದೊಡ್ಡ ಆಘಾತವಾಗಿದೆ. ಈ ಬಾರಿ ಚುನಾವಣೆಗೂ ಮುನ್ನವೇ ಜನರಿಗೆ ಸತ್ಯದ ಅರಿವಾಗಿದ್ದರಿಂದ ಬಿಜೆಪಿಗೆ ಇದು ಮುಳುವಾಗಲಿದೆ ಎಂದರು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ಎಂ. ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಪ್ರಮುಖರಾದ ಪರ್ವೇಜ್‌ ಕಾಶಿಮಜಿ, ಟಿ.ಡಿ. ನಾಯ್ಕ, ಸತೀಶ ನಾಯ್ಕ, ಶ್ರೀಧರ ನಾಯ್ಕ ಕಾಯ್ಕಿಣಿ, ಸಂತೋಷ ನಾಯ್ಕ, ಖೈಸರ್‌ ಮೊಹತೆಶಂ, ಸುಲೇಮಾನ್‌ ಸಾಬ್‌, ಮಹಾಬಲೇಶ್ವರ ನಾಯ್ಕ, ನಾರಾಯಣ ನಾಯ್ಕ, ಮಂಜು ನಾಯ್ಕ, ಗಣಪತಿ ನಾಯ್ಕ ಜಾಲಿ, ಮಹೇಶ ನಾಯ್ಕ ಸೇರಿದಂತೆ ಹಲವು ಮುಖಂಡರಿದ್ದರು.

ಕುಮಟಾದಲ್ಲಿ ಬೃಹತ್‌ ಸಮಾವೇಶ

ರಾಜ್ಯ ಸರ್ಕಾರದ ಆಡಳಿತ ವಿರೋಧಿ ನೀತಿ ಮತ್ತು ಬಿಜೆಪಿ ದ್ವಂದ್ವ ನೀತಿಯ ಬಗ್ಗೆ ಜನತೆಗೆ ತಿಳಿಸಲು ಹಾಗೂ ರಾಜ್ಯ-ಕೇಂದ್ರ ಸರ್ಕಾರಗಳ ವೈಫಲ್ಯವನ್ನು ಜನರ ಮುಂದೆ ಇಡಲು ಕುಮಟಾದಲ್ಲಿ ನ. 24ರಂದು ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದಿನ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿಗಳು, ಶಾಸಕರು, ಸಂಸದರು ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
 

Follow Us:
Download App:
  • android
  • ios