ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಯಾವುದೇ ನಾಯಕರೂ ಕಾಂಗ್ರೆಸ್‌ ಸೇರಬೇಕೆಂಬ ಇಚ್ಚೆ ಇದ್ದರೆ ನಮ್ಮ ಪಕ್ಷದ ಧ್ಯೇಯೋದ್ದೇಶಗಳ ಪ್ರಕಾರ ಪಕ್ಷ ಸೇರುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. 

ಮದ್ದೂರು (ಫೆ.12): ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಯಾವುದೇ ನಾಯಕರೂ ಕಾಂಗ್ರೆಸ್‌ ಸೇರಬೇಕೆಂಬ ಇಚ್ಚೆ ಇದ್ದರೆ ನಮ್ಮ ಪಕ್ಷದ ಧ್ಯೇಯೋದ್ದೇಶಗಳ ಪ್ರಕಾರ ಪಕ್ಷ ಸೇರುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್‌ ಅವರಿಂದ ಕಾಂಗ್ರೆಸ್‌ ಟಿಕೆಟ್ ಕೈತಪ್ಪಿತು ಎಂದು ಸಂಸದೆ ಸುಮಲತಾ ಆರೋಪಕ್ಕೆ ತಿರುಗೇಟು ನೀಡಿದರು.

Add Asianetnews Kannada as a Preferred SourcegooglePreferred

ನಾನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಬೆಂಬಲವಾಗಿ ನಿಂತು ಸಚಿವನಾಗಿದ್ದೆ. ಮಂಡ್ಯದಲ್ಲಿ ಏಳು ಮಂದಿ ಜೆಡಿಎಸ್‌ ಶಾಸಕರಿದ್ದರೂ, ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಆಶೀರ್ವಾದ ಮಾಡಿದ್ದೆ. ಹೀಗಾಗಿ ಕುಮಾರಸ್ವಾಮಿ ಅವರಿಗೆ ದ್ರೋಹ ಮಾಡಲು ಇಷ್ಟವಿಲ್ಲದೆ ಚುನಾವಣೆಯಲ್ಲಿ ಬೇರೆ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುವಂತೆ ಸುಮಲತಾ ಅವರಿಗೆ ತಿಳಿಸಿದ್ದು ನಿಜ ಎಂದು ಒಪ್ಪಿಕೊಂಡರು.

ಜೆಡಿಎಸ್‌ ಅಧಿಕಾರಕ್ಕೆ ಬರೋದು ಕನಸು: ಡಿ.ಕೆ.ಶಿವಕುಮಾರ್‌

ಮಳವಳ್ಳಿ ತಾಲೂಕಿನಲ್ಲಿ ಪ್ರಜಾಧ್ವನಿ ಯಾತ್ರೆಗೆ ಅದ್ಧೂರಿ ಸ್ವಾಗತ: ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆ ಪ್ರಥಮ ಬಾರಿಗೆ ತಾಲೂಕಿಗೆ ಆಗಮಿಸಿದಾಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಾವಿರಾರು ಕಾರ್ಯಕರ್ತರು ಕ್ರೇನ್‌ ಮೂಲಕ ವಿವಿಧ ರೀತಿಯ ಬೃಹತ್‌ ಹಾರಗಳನ್ನು ಹಾಕಿ ಅದ್ಧೂರಿ ಸ್ವಾಗತ ಕೋರಿದರು. ಹಲಗೂರಿನಲ್ಲಿ ಸೇಬಿಹಾರ, ಹೂವಿನ ಹಾರ, ತಾಲೂಕಿನ ಹಾಡ್ಲಿಯಲ್ಲಿ ರೇಷ್ಮೆಗೂಡಿನ ಹಾರ, ಪೇಟೆ ಬೀದಿ ಯುವಕರಿಂದ ಕ್ರೇನ್‌ನಿಂದ ಹಣ್ಣಿನ ಹಾರ, ಮಳವಳ್ಳಿ ಪ್ರವಾಸಿ ಮಂದಿರ ಹಾಗೂ ಅನಂತ್‌ರಾಂ ವೃತ್ತದಲ್ಲಿ ಬೆಲ್ಲ, ಅನಾನಸ್‌ ಸೇರಿದಂತೆ ವಿವಿಧ ರೀತಿಯ ಹೂವು, ಸೇಬಿನ ಹಾರಹಾಕಿ ಅಭಿನಂದಿಸಲಾಯಿತು.

ನೂರೊಂದು ಕಾಯಿ ಈಡುಗಾಯಿ: ತಾಲೂಕಿನ ಅಂಚೇದೊಡ್ಡಿ ಗೇಟ್‌ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಯಶಸ್ವಿ ದೊರೆಯಲಿ ಎಂದು ಪ್ರಾರ್ಥಿಸಿ ನೂರೊಂದು ತೆಂಗಿನಕಾಯಿ ಈಡುಗಾಯಿ ಹೊಡೆದು ಆಶಿಸಿದರು.

ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ: ಹಲಗೂರಿನಿಂದ ಮಳವಳ್ಳಿ ಪಟ್ಟಣದ ಟೋಲ್‌ಗೇಟ್‌ ಬಳಿಗೆ ಆಗಮಿಸಿ ಪ್ರಜಾಯಾತ್ರೆ ವೇಳೆ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಜಾಧ್ವನಿ ಯಾತ್ರೆ ಬಸ್‌ನಿಂದ ಕೆಳಗೆ ಇಳಿದು ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಪೇಟೆ ಬೀದಿ ಮಹಿಳೆಯರು ಡಿಕೆಶಿಗೆ ಬೆಲ್ಲದ ಅರತಿ ಮಾಡಿ ಆಶಿಸಿದರು. ಹಲಗೂರು, ಬಿಜಿಪುರ, ಕಿರುಗಾವಲು, ಕಸಬಾ ಹೋಬಳಿಗಳಿಂದ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ಜಾಥಾ ನಡೆಸಿದರು.

ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆ 3 ಆನೆಗಳು ಶಿಫ್ಟ್‌?: ಮಧ್ಯಪ್ರದೇಶದಿಂದ ಅರಣ್ಯ ಇಲಾ​ಖೆಗೆ ಮತ್ತೆ ಬೇಡಿಕೆ

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ ತಮಟೆ ಸೇರಿದಂತೆ ಜಾನಪದ ಕಲಾ ಮೇಳದೊಂದಿಗೆ ಪ್ರಜಾಧ್ವನಿ ಯಾತ್ರೆಯಲ್ಲಿ ಮೆರಗು ತಂದಿತು. ಯಾತ್ರೆಗೆ ನೂರಾರು ಗ್ರಾಮಗಳಿಂದ ಜನಸಾಗರವೇ ಹರಿದುಬಂದಿತು. ಡಿಕೆ ಡಿಕೆ ಎಂಬ ಕೂಗು ಪ್ರತಿಧ್ವನಿಸುತ್ತಿತ್ತು. ಮುಂದಿನ ಬಾರಿ ಎಂಎಲ್‌ಎ ನರೇಂದ್ರಸ್ವಾಮಿ ಎಂಬ ಘೋಷಣೆ ಕೇಳಿ ಬರುತ್ತಿತ್ತು.