ಕೋಪದಲ್ಲಿ ಬಾಯಿತಪ್ಪಿ ನಮ್ಮ ಹಿರಿಯ ನಾಯಕರಾದ ಸಲೀಂ ಅಹ್ಮದ್‌ ಅವರ ಬಗ್ಗೆ ಮಾತನಾಡಿದ್ದೇನೆ. ಅವರು ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರಾಗಿದ್ದು, ಪಕ್ಷಕ್ಕಾಗಿ ಹಲವು ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರ: ಕೆಜಿಎಫ್‌ ಬಾಬು 

ಬೆಂಗಳೂರು(ಜ.12): ‘ಕಳೆದ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ನಾನು ದೊಡ್ಡ ತಪ್ಪು ಮಾಡಿದ್ದೇನೆ. ಕಾಂಗ್ರೆಸ್‌ ಮುಖಂಡರ ಅನುಮತಿ ಇಲ್ಲದೆ ಮಾಧ್ಯಮಗಳ ಮುಂದೆ ಮಾತನಾಡಿದ್ದೇನೆ. ಅದಕ್ಕಾಗಿ ನಾನು ಕಾಂಗ್ರೆಸ್‌ ಪಕ್ಷದ ಎಲ್ಲ ನಾಯಕರು ಹಾಗೂ ನಮ್ಮ ಹಿರಿಯ ನಾಯಕ ಸಲೀಂ ಅಹ್ಮದ್‌ ಅವರಿಗೆ ಕ್ಷಮೆ ಕೋರುತ್ತೇನೆ’ ಎಂದು ಕಾಂಗ್ರೆಸ್‌ ಉಚ್ಚಾಟಿತ ಮುಖಂಡ ಕೆಜಿಎಫ್‌ ಬಾಬು ಅವರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಯಿ ತಪ್ಪಿನಿಂದ ಕಾಂಗ್ರೆಸ್‌ ಪಕ್ಷಕ್ಕೆ 80ಕ್ಕೂ ಹೆಚ್ಚು ಸೀಟು ಬರುವುದಿಲ್ಲ ಎಂದು ಹೇಳಿಬಿಟ್ಟೆ. ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ದಿನಕ್ಕೆ 18-20 ಗಂಟೆ ಕೆಲಸ ಮಾಡುತ್ತಿದ್ದಾರೆ. ಆ ನೋವಿಂದ ನಾನು ಮಾತನಾಡಿದ್ದೇನೆ. ಕಾಂಗ್ರೆಸ್‌ ಬೆಳೆಯಬೇಕು, ಅಧಿಕಾರಕ್ಕೆ ಬರಬೇಕು ಎಂಬ ಆಸೆ ನನ್ನದು. ಕಾಂಗ್ರೆಸ್‌ ಕಚೇರಿಗೆ ಬೇರೆ ಕಡೆಯಿಂದ ಬಂದವರನ್ನು ಸರಿಯಾಗಿ ವಿಚಾರಿಸುತ್ತಿಲ್ಲ. ಅಲ್ಲಿನ ವ್ಯವಸ್ಥೆ ಸರಿ ಮಾಡಿ ಎಂದು ಮನವಿ ಮಾಡಿದೆ ಅಷ್ಟೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ 80 ಸ್ಥಾನವನ್ನೂ ಗೆಲ್ಲಲ್ಲ: ಕೆಜಿಎಫ್‌ ಬಾಬು

‘ಇನ್ನು ಮುಂದೆ ಯಾವುದೇ ತಪ್ಪಾಗದಂತೆ ನಡೆದುಕೊಳ್ಳುತ್ತೇನೆ. ಇದೊಂದು ಬಾರಿ ಪಕ್ಷದ ಎಲ್ಲ ಮುಖಂಡರು ನಿಮ್ಮ ಮನೆಯ ಮಗನಂತೆ ನನ್ನನ್ನು ಕ್ಷಮಿಸಿ. ಇನ್ನು ಕೋಪದಲ್ಲಿ ಬಾಯಿತಪ್ಪಿ ನಮ್ಮ ಹಿರಿಯ ನಾಯಕರಾದ ಸಲೀಂ ಅಹ್ಮದ್‌ ಅವರ ಬಗ್ಗೆ ಮಾತನಾಡಿದ್ದೇನೆ. ಅವರು ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರಾಗಿದ್ದು, ಪಕ್ಷಕ್ಕಾಗಿ ಹಲವು ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ, ಮಾಧ್ಯಮಗಳ ಮೂಲಕ ಅವರಲ್ಲಿ ಕ್ಷಮೆ ಕೋರುತ್ತೇನೆ’ ಎಂದು ತಿಳಿಸಿದರು.