ಕಾಂಗ್ರೆಸ್ ಸಿಎಂ ಕುರ್ಚಿ ಜಟಾಪಟಿಗೆ ತೆರೆ ಎಳೆದದ್ದು ವೇಣು, ಸುರ್ಜೇವಾಲಾ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಏಕೈಕ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಮುಂಬರುವ ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರನ್ನೇ ಮುಂದುವರೆಸಲಾಗುತ್ತದೆ.
ಬೆಂಗಳೂರು (ಮೇ.19): ‘ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಏಕೈಕ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಮುಂಬರುವ ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರನ್ನೇ ಮುಂದುವರೆಸಲಾಗುತ್ತದೆ.’
- ಹೀಗೆಂದು ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ಸಿಂಗ್ ಸುರ್ಜೇವಾಲ ಅವರು ಮುಖ್ಯಮಂತ್ರಿ ಗಾದಿ ದಂಗಲ್ಗೆ ಅಧಿಕೃತವಾಗಿ ತೆರೆಬಿತ್ತು ಎಂದು ಪ್ರಕಟಿಸಿದರು. ಆದರೆ, ಉಭಯ ನಾಯಕರನ್ನು ಯಾವ ಅಧಿಕಾರ ಹಂಚಿಕೆಯ ಸೂತ್ರದ ಮೂಲಕ ಮನವೊಲಿಸಲಾಯಿತು ಎಂಬುದನ್ನು ಮಾತ್ರ ಘೋಷಿಸಲಿಲ್ಲ. ಬದಲಾಗಿ, ಅಧಿಕಾರವನ್ನು ಕರ್ನಾಟಕದ ಜನತೆಗೆ ಹಂಚುವ ನಿರ್ಧಾರ ಮಾತ್ರ ಆಗಿದೆ ಎಂದು ತಿಳಿಸಿದರು.
ಗೆದ್ದರೂ, ಸೋತರು ಇದೇ ನನ್ನ ಕರ್ಮಭೂಮಿ: ಸಿ.ಪಿ.ಯೋಗೇಶ್ವರ್
ಮೇ 13ರಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟಬಹುಮತ ಪಡೆದಿದೆ. ಬಳಿಕ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಎಐಸಿಸಿಯಿಂದ ಮೂವರು ವೀಕ್ಷಕರನ್ನು ನೇಮಿಸಲಾಗಿತ್ತು. ಮೇ 14ರಂದು ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಭಿಪ್ರಾಯಗಳನ್ನು ವೀಕ್ಷಕರು ಸಂಗ್ರಹಿಸಿದ್ದರು. ನಮ್ಮ ಪಕ್ಷ ಪ್ರಜಾಪ್ರಭುತ್ವ ಪಕ್ಷವಾಗಿರುವುದರಿಂದ ಸರ್ವಾಧಿಕಾರದ ನಿರ್ಧಾರಕ್ಕೆ ಅವಕಾಶವಿಲ್ಲ. ಹೀಗಾಗಿ ಎಲ್ಲಾ ಹಿರಿಯ ನಾಯಕರು ಚರ್ಚಿಸಿ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ಪಡೆದು ನಿರ್ಧಾರ ಪ್ರಕಟಿಸಲಾಗಿದೆ ಎಂದರು.
ಮುಖ್ಯಮಂತ್ರಿ ಹುದ್ದೆಗೆ ಇಬ್ಬರೂ ಅರ್ಹರು!: ಸಿದ್ದರಾಮಯ್ಯ ಅವರು ಅನುಭವ ಹಾಗೂ ಸಮರ್ಥ ಆಡಳಿತ ಶೈಲಿ ಹೊಂದಿದ್ದು ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಪರಿಶ್ರಮ ಹಾಕಿ ಪ್ರಚಾರ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಪಕ್ಷದ ಪ್ರಬಲ ಸಂಘಟನಾಕಾರ. ಅಧ್ಯಕ್ಷರಾದ ಬಳಿಕ ಕಾರ್ಯಕರ್ತರಿಗೆ ಶಕ್ತಿ ತುಂಬಿ ತಳಮಟ್ಟದಿಂದ ಪಕ್ಷ ಸಂಘಟಿಸಿದ್ದಾರೆ. ಈ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು. ಆದರೆ, ಹುದ್ದೆಗೆ ಒಬ್ಬರನ್ನೇ ಆಯ್ಕೆ ಮಾಡಬೇಕಾಗಿದೆ. ಹೀಗಾಗಿ ಸುದೀರ್ಘ ಚರ್ಚೆ ಬಳಿಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯವನ್ನೂ ಪಡೆದು ಈ ನಿರ್ಧಾರ ಮಾಡಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ರಾಜ್ಯದ ರಾಜ್ಯದ ಏಕೈಕ ಉಪಮುಖ್ಯಮಂತ್ರಿ ಆಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಜತೆಗೆ ಲೋಕಭೆ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೂ ಮುಂದುವರೆಯಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ಗೆ ಅದಿಲ್ವಾ?: ಅಸ್ನೋಟಿಕರ್ ಅಸಂಬದ್ಧ ಪ್ರಶ್ನೆ
ಮೇ 20ರಂದು ಪ್ರಮಾಣ ವಚನ: ಮೇ 20ರಂದು ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಜತೆಗೆ ಕೆಲವು ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಸುಭದ್ರ ಹಾಗೂ ಜನಪರ, ಪಾರದರ್ಶಕ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.