Asianet Suvarna News Asianet Suvarna News

ಚಿಕ್ಕಮಗಳೂರಲ್ಲಿ ಹಾಲಿ- ಮಾಜಿ ಶಾಸಕರ ಫೈಟ್‌: ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲು

ಚಿಕ್ಕಮಗಳೂರಿನಲ್ಲಿ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿರುವ ಮಾಜಿ ಶಾಸಕ ಸಿ.ಟಿ. ರವಿ ಅವರು ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸದಂತೆ ಪತ್ರ ಬರೆದಿದ್ದಾರೆ.

Karnataka politics Fight started between current and former MLAs in Chikmagalur district sat
Author
First Published May 28, 2023, 11:00 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮೇ 28): ಚಿಕ್ಕಮಗಳೂರಿನಲ್ಲಿ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿರುವ ಮಾಜಿ ಶಾಸಕ ಸಿ.ಟಿ. ರವಿ ಅವರು ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸದಂತೆ ಪತ್ರ ಬರೆದಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮಂಜೂರು ಮಾಡಿಸಿರುವ, ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಮನಹರಿಸಬೇಕು. ಜೊತೆಗೆ, ಅಮಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಬಾರದು ಎಂದು ತಿಳಿಸಿದ್ದಾರೆ.

ಹಾಲಿ ಶಾಸಕರಿಗೆ ಮಾಜಿ ಶಾಸಕರಿಂದ ಬಹಿರಂಗ ಪತ್ರ ಬರೆದಿರುವ ಘಟನೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಚಿಕ್ಕಮಗಳೂರಿನ ಮಾಜಿ ಶಾಸಕರೂ ಆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೂತನ ಶಾಸಕ ಹೆಚ್.ಡಿ. ತಮ್ಮಯ್ಯಗೆ ಪತ್ರ ಬರೆದಿದ್ದಾರೆ. ನೂತನ ಸರ್ಕಾರ ತೆಗೆದುಕೊಂಡ ಈ ಹಿಂದಿನ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ತಡೆ ಹಿಡಿಯವ ಆದೇಶ ನೋಡಿ ಜಿಲ್ಲೆಯ ಅಭಿವೃದ್ಧಿಗೆ ಗ್ರಹಣ ಬಂದಿತು ಎಂದೆನಿಸಿ ಈ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.  ಈ ಹಿಂದೆ ಮಂಜೂರಾಗಿರುವ ಕಾಮಗಾರಿಗಳಿಗೆ ತಡೆಯೊಡ್ಡದೆ ಕ್ಷೇತ್ರ ಹಾಗೂ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕಾಮಗಾರಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಮುಗಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.ಮೆಡಿಕಲ್ ಕಾಲೇಜು ಕಟ್ಟಡ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. 

ರಾಮಲಿಂಗಾರೆಡ್ಡಿಗೆ ಒಂದು ಖಾತೆ ತಗೊಂಡ್ರೆ ಮತ್ತೊಂದು ಫ್ರೀ: ಆಪ್ತನಿಗೆ ಆಫರ್‌ ಕೊಟ್ಟ ಡಿ.ಕೆ.ಶಿವಕುಮಾರ್

ಕೆರೆ ತುಂಬಿಸುವ ಯೋಜನೆ ನನೆಗುದಿಗೆ: ಭದ್ರಾ ನದಿ ಗೊಂಧಿ ಯೋಜನೆಯ ಮೂಲಕ ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಮೊದಲನೇ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಟೆಂಡರ್ ಪಕ್ರಿಯೆ ಪೂರ್ಣಗೊಂಡಿದೆ. ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿ ಪ್ರಾರಂಭಿಸಬೇಕು. ರಣಘಟ್ಟದಿಂದ ಬೆಳವಾಡಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು. ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಮುಗಿಸಬೇಕು. ಮುಜರಾಯಿ ಇಲಾಖೆಯಿಂದ ಒಟ್ಟು 46 ದೇವಸ್ಥಾನದ ಅಭಿವೃದ್ಧಿಗಾಗಿ ಅನುದಾನ ಮಂಜೂರಾಗಿದ್ದು ಜೀರ್ಣೋದ್ಧಾರ ಕಾಮಗಾರಿ ಮುಗಿಸಬೇಕೆಂದು ಸಲಹೆ ನೀಡಿದ್ದಾರೆ. 

ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣಕ್ಕೆ ಸಲಹೆ: ಲೋಕೋಪಯೋಗಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಸಮುದಾಯ ಭವನಗಳ ಕಾಮಗಾರಿ ಮುಗಿಸಬೇಕು. ಅಂಬೇಡ್ಕರ್ ಭವನ ಕಾಮಗಾರಿ ಮುಗಿಸಬೇಕು. ರಸ್ತೆಗಳು, ಬಸವನಹಳ್ಳಿ ಕೆರೆ ಕಾಮಗಾರಿ, ಜಿಲ್ಲಾ ಕಚೇರಿ ಸಂಕೀರ್ಣ, ಅರಣ್ಯ ಭವನ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳಲು ಕ್ರಮ ವಹಿಸಬೇಕೆಂದು ಹೇಳಿ ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಸಿ.ಟಿ. ರವಿ ಸಲಹೆ ನೀಡಿದ್ದಾರೆ. 

ಗ್ಯಾರಂಟಿ ಬದಲು ಸರ್ಕಾರಿ ನೌಕರರಿಗೆ ಉಚಿತ ಏಟಿನ ಭಾಗ್ಯ: ನಳಿನ್‌ ಲೇವಡಿ

ಅಲ್ಲದೆ ರಾಜ್ಯಧರ್ಮ, ದ್ವೇಷದ ರಾಜಕಾರಣ , ಅಭಿವೃದ್ಧಿ ಕೆಲಸದ ಬಗ್ಗೆ ಪತ್ರದ  ಲ್ಲಿ ಉಲ್ಲೇಖ ಮಾಡಿ ಸಂವಿಧಾನದ ಆಶಯದಂತೆ ಚುನಾಯಿತ ಜನತಾ ಸರ್ಕಾರವಿರುತ್ತದೆ. ಕ್ಷೇತ್ರದಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅಮಾಯಕರನ್ನು ಜೈಲಿಗೆಟ್ಟುವ ಕೆಲಸ ನಡೆಯುತ್ತಿದೆ. ಇದು ವಿಪರ್ಯಾಸದ ಸಂಗತಿ, ಇದು ದ್ವೇಷದ ರಾಜಕಾರಣವೆಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯ ಅಭಿವೃದ್ಧಿ, ಒಳ್ಳೆಯ ಕಾರ್ಯಕ್ಕೆ ಸದಾ ಬೆಂಬಲ ಇರುತ್ತದೆ ಎಂದು ಮಾಜಿ ಶಾಸಕ ಸಿ.ಟಿ. ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios