January 2023 ಕರ್ನಾಟಕ ರಾಜಕೀಯ ಬೆಳವಣಿಗೆಗಳು: ಮಾಜಿ ಸಿಎಂ ರಾಜಕೀಯ ನಿವೃತ್ತಿ, ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಬಾಂಬ್!
2023 ಜನವರಿ ತಿಂಗಳ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಮಾಜಿ ಸಿಎಂ ಎಸ್.ಎಂ. ಕೃಷ್ಣ ರಾಜಕೀಯ ನಿವೃತ್ತಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಸ್ಪರ್ದೆ ಹೆಚ್ಚು ಸದ್ದು ಮಾಡಿವೆ.
ಬೆಂಗಳೂರು (ಡಿ.12): ಕರ್ನಾಟಕದಲ್ಲಿ ಜನವರಿ 2023ರಲ್ಲಿ ರಾಜಕೀಯ ಬೆಳವಣಿಗೆಗಳೇ ಹೆಚ್ಚಾಗಿವೆ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವಂತೆ ಮೇ ತಿಂಗಳಲ್ಲಿ ನಡೆಯುತ್ತಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ ಆಗಿದೆ. ಜನವರಿ ತಿಂಗಳಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ರಾಜಕೀಯ ಕೆಸರೆರಚಾಟವನ್ನು ಮುಂದುವರೆಸಿದ್ದವು. ಇದೇ ವೇಳೆ ಬಿಜೆಪಿಗೆ ಹಿನ್ನಡೆ ಆಗುವಂತಹ ಹಲವು ಘಟನೆಗಳು ಕೂಡ ನಡೆದಿವೆ. ಇಲ್ಲಿವೆ ನೋಡಿ ಪ್ರಮುಖ ಅಂಶಗಳು...
ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ:
ನಮ್ಮ ವಯಸ್ಸಿನ ಬಗ್ಗೆ ಅರಿವು ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ನಾನು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿದ್ದೇನೆ. 90ರ ವಯಸ್ಸಿನಲ್ಲಿ ನನಗೆ 50 ವರ್ಷದವರ ಹಾಗೆ ನಟನೆ ಮಾಡಲು ಬರುವುದಿಲ್ಲ ಎಂದು ನಿವೃತ್ತಿಯ ಬಗ್ಗೆ ಭಾರವಾದ ನುಡಿಗಳನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಕ್ರೀಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆ. ನಮ್ಮ ವಯಸ್ಸಿನ ಬಗ್ಗೆ ಅರಿವಿರಬೇಕು. 90ರಲ್ಲಿ 50ರ ತರಹ ನಟನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಅಂತ ತಿರ್ಮಾನ ಮಾಡಿದ್ದೇನೆ. ಹಾಗಾಗಿಯೇ ನಾನು ಎಲ್ಲೂ ಈಗ ಸಾರ್ವಜನಿಕ ವಾಗಿ ಕಾಣಿಸ್ಕೊಳ್ಳುತ್ತಿಲ್ಲ. ವಯಸ್ಸಿಗೆ ಬೆಲೆ ಕೊಟ್ಟು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಾಜಕೀಯ ನಿವೃತ್ತಿಯ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಸಿಎಂ ಬೊಮ್ಮಾಯಿಯನ್ನು ನಾಯಿಮರಿಗೆ ಹೋಲಿಸಿದ ಸಿದ್ದರಾಮಯ್ಯ:
ನರೇಂದ್ರ ಮೋದಿ ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಿಮರಿ ಹಾಗೆ ಇರುತ್ತಾರೆ ಎಂದು ಅಂದಿನ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಎಂದು ಹೇಳಿದ್ದರು. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದೂ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಹಗುರವಾದ ಮಾತುಗಳನ್ನಾಡಿದ್ದಾರೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಲೆಕ್ಕಿಸದೇ ವಾಗ್ದಾಳಿ ಮುಮದುವರೆಸಿದ ಸಿದ್ದರಾಮಯ್ಯ, ಮೋದಿ ಮುಂದೆ ಬೊಮ್ಮಾಯಿ ಅವರು ನಾಯಿ ಬಾಲದ ರೀತಿ ಇರ್ತಾರೆ. ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ತಾಕತ್ತು, ಧಮ್ಮು ಎಲ್ಲೋಯ್ತು? ಕೇಂದ್ರಕ್ಕೆ ಹೋಗಿರುವ 3.5 ಲಕ್ಷ ಕೋಟಿ ತೆರಿಗೆ ವಸೂಲಿ ಎಲ್ಲೋಯ್ತು? ಎಂದು ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದರು.
Breaking: ಭಜನ್ಲಾಲ್ ಶರ್ಮ ರಾಜಸ್ಥಾನದ ಮುಂದಿನ ಸಿಎಂ
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಾಂಬ್ ಹಾಕಿದ್ದ ಸಿದ್ದರಾಮಯ್ಯ:
ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ. ಆದರೆ, ನಾವು ಕೆಲವು ಪ್ರಕ್ರಿಯೆಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದರು. ಎಲ್ಲರೂ ನನ್ನನ್ನ ಕೋಲಾರ ವಿಧಾನಸಭಾ ಕ್ಷೇತ್ರದಿಂದ ನಿಲ್ಲಬೇಕು ಒತ್ತಾಯ ಮಾಡಿದ್ದಾರೆ. ಮುನಿಯಪ್ಪ ಆದಿಯಾಗಿ ಎಲ್ಲರೂ ಒತ್ತಾಯ ಮಾಡಿದ್ದಾರೆ. ಜನರ ಆಶೀರ್ವಾದ ಇಲ್ಲದೇ ಇದ್ದರೆ ರಾಜಕೀಯದಲ್ಲಿ ಮುಂದುವರೆಯುವುದು ಅಸಾಧ್ಯ. ಹಿಂದೆ ಕೋಲಾರ ಬಂದಾಗ, ದೇವಾಲಯ, ಚರ್ಚ್, ಮಸೀದಿ ಭೇಟಿ ಮಾಡಿದ್ದೆ. ಅಲ್ಲಿ ಗುರುಗಳಿಗೆ ನಮಸ್ಕರಿಸಿದ್ದೆ. ಕೆಲ ಊರುಗಳಿಗೂ ಹೋಗಿದ್ದೆ. ಅಲ್ಲಿ ಎಲ್ಲರೂ ನೀವು ಬರಬೇಕು ಅಂತ ಒತ್ತಾಯ ಮಾಡಿದ್ದರು. ಹೀಗಾಗಿ ಇಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
ಅಮಿತ್ ಶಾ ರೌಡಿ ಎನ್ನುವ ಸಿ.ಪಿ. ಯೋಗೇಶ್ವರ್ ಆಡಿಯೋ ವೈರಲ್:
ಚುನಾವಣೆ ಬಳಿಕ ನಮ್ಮ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ, ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರ್ಕಾರ ರಚಿಸುತ್ತೇವೆ. ಅಮಿತ್ ಷಾ ಒಂಥರ ರೌಡಿ ರೀತಿ. ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ರಾಜಕೀಯ ಮಾಡ್ತಾರೆ ಕಣಯ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ನಾನು ಕುಮಾರಸ್ವಾಮಿ ವಿರುದ್ಧ ನಿಲ್ಲುತ್ತಿದ್ದೆನೆ. ಇದೇ ಅಶೋಕ್ ಬಂದು ಡಿ.ಕೆ.ಶಿವಕುಮಾರ್ ವಿರುದ್ಧ ನಿಲ್ಲಲಿ. ಅಶ್ವತ್ಥ್ ನಾರಾಯಣ್ ರಾಮನಗರದಿಂದ ಕುಮಾರಸ್ವಾಮಿ ಮಗನ ಮೇಲೆ ನಿಲ್ಲಲಿ? 2023ಕ್ಕೆ ಒಕಲಿಗರ ನಾಯಕರು ಯಾರು? ಕುಮಾರಸ್ವಾಮಿ ವಿರುದ್ದ ಗೆದ್ದಮೇಲೆ ನಾನು ಏಲ್ಲೊ ಇರ್ತಿನಿ. ನಾನೇ ಸಿಎಂ ಆದರೂ ಆದೆ. ಹೀಗೆ, ಸವಾಲೆಸೆದಿರುವುದು ಮಾತ್ರವಲ್ಲ 2023ರ ಚುನಾವಣೆಯ ಕುರಿತು ಭವಿಷ್ಯ ನುಡಿದಿರುವುದು ಬಿಜೆಪಿಯ ಎಂಎಲ್ಸಿ ಸಿ.ಪಿ.ಯೋಗೇಶ್ವರ್ !
ಮಾಜಿ ಶಾಸಕರಾದ ದೇಶಪ್ಪ ಲಮಾಣಿ, ಎಲ್.ಟಿ. ತಿಮ್ಮಪ್ಪ ಹೆಗಡೆ ನಿಧನ
ರಾಜ್ಯ ರಾಜಕಾರಣದಲ್ಲಿ ಉತ್ತಮ ಸೇವೆಯನ್ನು ಮಾಡಿ ಜನಮನ್ನಣೆ ಗಳಿಸಿದ್ದ ಜನಪ್ರತಿನಿಧಿಗಳಿಬ್ಬರು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಾಜಿ ಸಚಿವರಾಗಿದ್ದ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ ಮತ್ತು ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ನಿಧನರಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ (93) ವಯೋಸಹಜ ಕಾಯಿಲೆಯಿಂದ ಜ.16ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕಲಾ ಮಹಾವಿದ್ಯಾಲಯದ ಮುಖ್ಯ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಜೊತೆಗೆ, ರಾಜಕೀಯ ಪ್ರವೇಶದ ನಂತರ ಬ್ಯಾಡಗಿ ಕ್ಷೇತ್ರದಿಂದ 1983 ಮತ್ತು 1989 ರಂದು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮಾಜಿ ಶಾಸಕ ಎಲ್..ಟಿ.ತಿಮ್ಮಪ್ಪ ಹೆಗಡೆ ನಿಧನ: ಮತ್ತೊಂದೆಡೆ ಜ.17ರಂದು ಬೆಳಗ್ಗೆ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಲ್..ಟಿ.ತಿಮ್ಮಪ್ಪ ಹೆಗಡೆ (94) ಅವರು ಕೂಡ ಸಾವನ್ನಪ್ಪಿದ್ದಾರೆ. ಇವರು ಕೂಡ ವಯೋಸಹಜ ಕಾರಣಗಳಿಂದ ಬಳಲುತ್ತಿದ್ದರು. ಕಾಂಗ್ರೆಸ್ನ ಪ್ರಮುಖ ನಾಯಕರದಲ್ಲಿ ಒಬ್ಬರಾಗಿದ್ದ ಇವರು ಸಾಗರ ವಿಧಾನಸಭಾ ಕ್ಷೇತ್ರದಿಂದ 1978 ಮತ್ತು 1983ರಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
Bengaluru: ಹೊಸ ವರ್ಷಕ್ಕೆ ಡ್ರಗ್ಸ್ ಸೇಲ್ ಮಾಡಲು ಬಂದ ವಿದೇಶ ಪ್ರಜೆ: ಸೋಪು, ಚಾಕೋಲೇಟ್ ಬಾಕ್ಸ್ನಲ್ಲಿ ಸಾಗಣೆ
ಭಾರತ ಜೋಡೋ ಸಮಾರೋಪ ಸಮಾರಂಭಕ್ಕೆ ಕಾಶ್ಮೀರಕ್ಕೆ ತೆರಳಿದ ಡಿ.ಕೆ.ಶಿವಕುಮಾರ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯನ್ನು ಕೇರಳದ ಕನ್ಯಾಕುಮಾರಿಯಿಂದ ಆರಂಭಿಸಿ ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಳಿಸಲಾಗಿದೆ. ಕರ್ನಾಟಕದ 10ಕ್ಕೂ ಅಧಿಕ ಸ್ಥಳಗಳಲ್ಲಿ ಪಾದಯಾತ್ರೆ ಮಾಡಿದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಸಮಾರೋಪ ಸಮಾರಂಭವನ್ನು ಕಾಶ್ಮೀರದ ಶ್ರೀನಗರದಲ್ಲಿ ಮಾಡಲಾಗಿದ್ದು, ಇದರಲ್ಲಿ ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಪಾಲ್ಗೊಂಡಿದ್ದರು. ಇನ್ನು ಕರ್ನಾಟಕದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಕಾಶ್ಮೀರಕ್ಕೆ ತೆರಳಿ ಅಲ್ಲಿನ ಹಿಮದ ವೀಡಿಯೋವನ್ನು ಹಂಚಿಕೊಂಡಿದ್ದರು.