ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಲಭ್ಯವಾಗುವ ಒಂದು ಸ್ಥಾನಕ್ಕೆ ಐದು ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ.

ಬೆಂಗಳೂರು (ಮೇ.25): ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಲಭ್ಯವಾಗುವ ಒಂದು ಸ್ಥಾನಕ್ಕೆ ಐದು ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ.

ಸದ್ಯ ಪರಿಷತ್ತಿನಿಂದ ನಿವೃತ್ತಿ ಹೊಂದುತ್ತಿರುವ ಬಿ.ಎಂ.ಫಾರೂಕ್, ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಪರಿಷತ್ತಿನ ಮಾಜಿ ಸದಸ್ಯ ರಮೇಶ್‌ಗೌಡ, ಪಕ್ಷದ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್‌ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಅವರ ಹೆಸರುಗಳು ಪ್ರಸ್ತಾಪವಾಗಿವೆ. ಈ ಹೆಸರುಗಳನ್ನು ಬಿಟ್ಟು ಅಂತಿಮ ಹಂತದಲ್ಲಿ ಹೊಸ ಹೆಸರೂ ಸೇರ್ಪಡೆಯಾಗಬಹುದು ಎನ್ನಲಾಗಿದೆ.

ಈ ಪೈಕಿ ಫಾರೂಕ್ ಅವರಿಗೆ ಮತ್ತೊಂದು ಬಾರಿ ಅವಕಾಶ ಕಲ್ಪಿಸುವ ಸಾಧ್ಯತೆ ಕಡಮೆ ಎನ್ನಲಾಗುತ್ತಿದೆ. ಬಿಜೆಪಿ ಜತೆ ಸ್ನೇಹ ಬೆಳೆಸಿರುವ ಜೆಡಿಎಸ್‌ ನಾಯಕರಲ್ಲಿ ಈಗ ಮುಸ್ಲಿಂ ಸಮುದಾಯದ ಬಗ್ಗೆ ಅಷ್ಟಾಗಿ ಪ್ರೀತಿ ಉಳಿದಂತೆ ಕಾಣುತ್ತಿಲ್ಲ.

ಗಾಂಧಿ ಕುಟುಂಬದ ಮೇಲೆ ಆರೋಪ ಮಾಡೋದನ್ನ ಮೋದಿ ಮೊದಲು ನಿಲ್ಲಿಸಬೇಕು: ಮಲ್ಲಿಕಾರ್ಜುನ ಖರ್ಗೆ ಗರಂ

ಜವರಾಯಿಗೌಡ ಅವರು ಸತತ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವುದರಿಂದ ಪಕ್ಷದ ನಾಯಕರಿಗೆ ಅನುಕಂಪವಿದೆ. ಆದರೆ, ಹಾಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್ ಅವರು ಕಾಂಗ್ರೆಸ್‌ಗೆ ವಲಸೆ ಹೋಗುವ ಸಾಧ್ಯತೆ ಇರುವುದರಿಂದ ಉಪಚುನಾವಣೆ ಎದುರಾದರೆ ಜವರಾಯಿಗೌಡ ಅವರನ್ನು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಿಂದ ಮತ್ತೊಮ್ಮೆ ಕಣಕ್ಕಿಳಿಸುವ ಸಂಭವವಿದೆ. ಹೀಗಾಗಿ, ಪರಿಷತ್ತಿಗೆ ಪರಿಗಣಿಸುವ ಬಗ್ಗೆ ಸ್ಪಷ್ಟತೆ ಇಲ್ಲ.

ಹೀಗಾಗಿ, ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿರುವ ಕುಪೇಂದ್ರ ರೆಡ್ಡಿ, ಎ.ಪಿ.ರಂಗನಾಥ್‌ ಹಾಗೂ ರಮೇಶ್‌ಗೌಡ ಅವರ ಪೈಕಿ ಒಬ್ಬರಿಗೆ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ.

ಚುನಾವಣಾ ಅಖಾಡದಲ್ಲಿ ರತ್ನ ಭಂಡಾರ ಕೀಲಿ ಕೈ ವಿವಾದ: ಓಡಿಶಾದಲ್ಲಿ ಮೋದಿ ಭಾಷಣ..ತಮಿಳುನಾಡಿನಲ್ಲೂ ಸಂಚಲನ!

ಪ್ರಸ್ತಾಪಿತ ಹೆಸರುಗಳು

  • ಕುಪೇಂದ್ರ ರೆಡ್ಡಿ
  • ರಮೇಶ್‌ಗೌಡ
  • ಎ.ಪಿ.ರಂಗನಾಥ್‌
  • ಬಿ.ಎಂ.ಫಾರೂಕ್
  • ಜವರಾಯಿಗೌಡ