ರಾಜ್ಯ ಸರ್ಕಾರ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ(ಪ್ರತಿಬಂಧಕ) ಮಸೂದೆ-2025 ತಂದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಸುವರ್ಣ ವಿಧಾನಸೌಧ (ಡಿ.11): ರಾಜ್ಯ ಸರ್ಕಾರ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ(ಪ್ರತಿಬಂಧಕ) ಮಸೂದೆ-2025 ತಂದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಸುವರ್ಣ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಮಸೂದೆ ರಾಜ್ಯ ಸರ್ಕಾರದ ಪಿತೂರಿ. ತಪ್ಪು ಮಾಡಿದವರಿಗೆ, ಅವಾಚ್ಯ ಶಬ್ದ ಬಳಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಕಾನೂನು ಇದೆ. ಆದರೂ ಈ ಸರ್ಕಾರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಮಸೂದೆ ತಂದಿದೆ ಎಂದರು.

ಚುನಾವಣೆ ಗೆಲ್ಲಲಷ್ಟೇ ಗ್ಯಾರಂಟಿ ಬೇಕು

ಇಷ್ಟು ದಿನ ಬಿಜೆಪಿಯವರು ಗ್ಯಾರಂಟಿಗಳ ವಿರೋಧಿಗಳು ಎನ್ನುತ್ತಿದ್ದರು. ಈಗ ಕಾಂಗ್ರೆಸ್‌ ಶಾಸಕರೇ ಅಭಿವೃದ್ಧಿಗೆ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಇವರಿಗೆ ಚುನಾವಣೆ ಗೆಲ್ಲಲು ಮಾತ್ರ ಗ್ಯಾರಂಟಿ ಬೇಕು. ಉತ್ತರ ಕರ್ನಾಟಕ ಭಾಗದ ಎಲ್ಲಾ ರಸ್ತೆಗಳು ಹಾಳಾಗಿವೆ. ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇ.63ರಷ್ಟು ಭ್ರಷ್ಟಾಚಾರದ ಆರೋಪವಿದೆ. ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಸರ್ಕಾರ ಸತ್ತಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಗುತ್ತಿಗೆದಾರರು, ಲೋಕಾಯುಕ್ತ ಎಲ್ಲರೂ ಹೇಳಿದ ಬಳಿಕ ಕಾಂಗ್ರೆಸ್ ಶಾಸಕರೂ ಹೇಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಮ್ಮೂರಿಗೆ ಏನು ಮಾಡಿದ್ದೀರಿ ಎಂದು ಶಾಸಕರನ್ನು ಕೇಳಿದರೆ, ಅವರ ಬಳಿ ಉತ್ತರ ಇಲ್ಲ. ನಾವು ಪುಕ್ಸಟ್ಟೆ ಗ್ಯಾರಂಟಿ ಕೇಳಿರಲಿಲ್ಲ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಗೃಹಲಕ್ಷ್ಮೀ ಹಣ ತಿಂಗಳಿಗೆ ಸರಿಯಾಗಿ ಬರುತ್ತಿಲ್ಲ. ಹಬ್ಬ ಮತ್ತು ಚುನಾವಣೆ ಬಂದಾಗ ಮಾತ್ರ ಎರಡು ಸಾವಿರ ರು. ಬರುತ್ತದೆ. ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆಯಾಗಿದೆ. ಭ್ರಷ್ಟಾಚಾರಕ್ಕೆ ಲೈಸೆನ್ಸ್‌ ತೆಗೆದುಕೊಂಡಿದ್ದಾರೆ. ಲಂಚ ಕೊಟ್ಟೇ ಬಂದಿದ್ದೇನೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೇ ಅಸಮಾಧಾನ ಇರುವಾಗ ಇನ್ನು ಜನಸಾಮಾನ್ಯರಿಗೂ ಬೇಸರ ಇರುತ್ತದೆ ಎಂದು ಕಾಂಗ್ರೆಸ್‌ ಸಿಎಲ್ಪಿ ಸಭೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.