Asianet Suvarna News Asianet Suvarna News

ಬೊಮ್ಮಾಯಿ, ಎಚ್‌ಡಿಕೆ, ಅಶೋಕ್‌, ಈಶ್ವರಪ್ಪ, ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ಘೋಷಣೆ ಇಲ್ಲ!

ಕುತೂಹಲಕಾರಿ ಸಂಗತಿಯೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಯಡಿಯೂರಪ್ಪ ಪುತ್ರ ವಿಜಯೇಂದ್ರ (ಶಿಕಾರಿಪುರ) ಸೇರಿದಂತೆ ಎದುರಾಳಿ ಪಕ್ಷಗಳ ಪ್ರಮುಖ ನಾಯಕರ ಕ್ಷೇತ್ರಗಳಿಗೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಸ್ಥಾನ ದೊರಕಿಲ್ಲ.

Karnataka Election 2023 Suspense of Congress candidate against opposition leaders gvd
Author
First Published Mar 26, 2023, 10:22 AM IST

ಬೆಂಗಳೂರು (ಮಾ.26): ಕುತೂಹಲಕಾರಿ ಸಂಗತಿಯೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಯಡಿಯೂರಪ್ಪ ಪುತ್ರ ವಿಜಯೇಂದ್ರ (ಶಿಕಾರಿಪುರ) ಸೇರಿದಂತೆ ಎದುರಾಳಿ ಪಕ್ಷಗಳ ಪ್ರಮುಖ ನಾಯಕರ ಕ್ಷೇತ್ರಗಳಿಗೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಸ್ಥಾನ ದೊರಕಿಲ್ಲ. ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ವಿನಯ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಚಿಂತನೆ ಹೊಂದಿದೆ. ಆದರೆ, ವಿನಯ ಕುಲಕರ್ಣಿ ಅವರು ಧಾರವಾಡದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. 

ಜತೆಗೆ, ವಿನಯ ಕುಲಕರ್ಣಿ ಅವರಿಗೆ ಅವರ ಬಯಕೆಯ ಕ್ಷೇತ್ರಕ್ಕೂ ಹೆಸರು ಪ್ರಕಟಿಸಿಲ್ಲ. ಉಳಿದಂತೆ ಸಚಿವರಾದ ಆರ್‌. ಅಶೋಕ್‌ (ಪದ್ಮನಾಭನಗರ), ಗೋವಿಂದ ಕಾರಜೋಳ ( ಮುಧೋಳ), ಮುರುಗೇಶ್‌ ನಿರಾಣಿ (ಬೀಳಗಿ), ಬಿ. ಶ್ರೀರಾಮುಲು (ಮೊಳಕಾಲ್ಮೂರು), ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ), ನಾಯಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌ (ವಿಜಯಪುರ), ಜಗದೀಶ್‌ ಶೆಟ್ಟರ್‌ (ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌), ಈಶ್ವರಪ್ಪ (ಶಿವಮೊಗ್ಗ), ಎಚ್‌.ಡಿ. ಕುಮಾರಸ್ವಾಮಿ (ಚನ್ನಪಟ್ಟಣ) ಸೇರಿದಂತೆ ಪ್ರಮುಖ ಎದುರಾಳಿ ಪಕ್ಷಗಳ ನಾಯಕರ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಿಲ್ಲ. 

ಚುನಾವಣೆ ಘೋಷಣೆ ನಂತರ ಕಾಂಗ್ರೆಸ್‌ 2ನೇ ಪಟ್ಟಿ: 100 ಕ್ಷೇತ್ರಗಳ ಟಿಕೆಟ್‌ಗೆ ಇದೆ ಭಾರಿ ಪೈಪೋಟಿ

ಅದೇ ರೀತಿ ಹೊಸ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿರುವ ಮಾಜಿ ಗಣಿ ಧಣಿ ಜನಾರ್ದನ ರೆಡ್ಡಿ ಅವರು ಸ್ಪರ್ಧಿಸಬಯಸಿರುವ ಗಂಗಾವತಿ ಕ್ಷೇತ್ರಕ್ಕೂ ಟಿಕೆಟ್‌ ಘೋಷಣೆ ಮಾಡಿಲ್ಲ. ಇನ್ನೂ ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣದ 17 ಕ್ಷೇತ್ರಗಳ ಪೈಕಿ ಎಂಟು (ರಮೇಶ್‌ ಜಾರಕಿಹೊಳಿ- ಗೋಕಾಕ್‌, ಎಸ್‌.ಟಿ. ಸೋಮಶೇಖರ್‌- ಯಶವಂತಪುರ, ಗೋಪಾಲಯ್ಯ- ಮಹಾಲಕ್ಷ್ಮೇ ಲೇಔಟ್‌, ಬೈರತಿ ಬಸವರಾಜ- ಕೆ.ಆರ್‌. ಪುರ, ಶಿವರಾಮ ಹೆಬ್ಬಾರ್‌- ಯಲ್ಲಾಪುರ

ಮೊದಲ ಟಿಕೆಟ್‌ ಪಟ್ಟಿ ಪ್ರಕಟ: ರಾಜ್ಯ ವಿಧಾನಸಭಾ ಚುನಾವಣೆಗೆ ಕಡೆಗೂ ಕಾಂಗ್ರೆಸ್‌ ಪಕ್ಷ ತನ್ನ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಗೊಂದಲರಹಿತ ಹಾಗೂ ಬಂಡಾಯ ಸಾಧ್ಯತೆ ಕಡಿಮೆ ಎಂದು ಪಕ್ಷ ನಿರೀಕ್ಷಿರಿಸಿರುವ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಬಹಿರಂಗಪಡಿಸಿದೆ. ಮುಖ್ಯವಾಗಿ ಚುನಾವಣೆಗೆ ತನ್ನ ಪ್ರಮುಖ ಅಸ್ತ್ರವೆನಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸುರಕ್ಷಿತ ಕ್ಷೇತ್ರ ವರುಣದಿಂದ ಕಣಕ್ಕಿಳಿಸಲು ಮುಂದಾಗಿದೆ. ಜತೆಗೆ, ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸದೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಹಿರಂಗ ಅಪೇಕ್ಷೆ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರ ಬಯಕೆ ಜೀವಂತ ಆಗಿರುವಂತೆ ನೋಡಿಕೊಂಡಿದೆ.

ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರು ವಿಜಯೇಂದ್ರ ಸ್ಪರ್ಧೆ ಮಾಡ್ತಾರಾ?

ಉಳಿದಂತೆ, ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (ಕನಕಪುರ), ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ (ಕೊರಟಗೆರೆ), ಹಿರಿಯ ನಾಯಕ ಎಂ.ಬಿ.ಪಾಟೀಲ್‌ (ಬಬಲೇಶ್ವರ), ಡಾ.ಎಚ್‌.ಸಿ.ಮಹದೇವಪ್ಪ (ಟಿ.ನರಸೀಪುರ) ಸೇರಿದಂತೆ ಪ್ರಮುಖ ನಾಯಕರನ್ನು ಕಣಕ್ಕೆ ಇಳಿಸಿದೆ. ರಾಜ್ಯ ರಾಜಕಾರಣಕ್ಕೆ ಮರಳುವ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಆಸೆಗೆ ಹೈಕಮಾಂಡ್‌ ಮನ್ನಣೆ ನೀಡಿದ್ದು, ತೀವ್ರ ವಿರೋಧವಿದ್ದರೂ ದೇವನಹಳ್ಳಿ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್‌ ಪ್ರಕಟಿಸಿದೆ. ತೀವ್ರ ಪೈಪೋಟಿಯಿರುವ ಕಾರಣಕ್ಕೆ ಆರು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಪ್ರಕಟಿಸಿಲ್ಲ. ಒಂದು ಕ್ಷೇತ್ರದಲ್ಲಿ ಹಾಲಿ ಶಾಸಕರ (ಪಾವಗಡ- ವೆಂಕಟರಮಣಪ್ಪ) ಬದಲಿಗೆ ಅವರ ಪುತ್ರನಿಗೆ (ಎಚ್‌.ವಿ.ವೆಂಕಟೇಶ್‌) ಟಿಕೆಟ್‌ ನೀಡಲಾಗಿದೆ. ಉಳಿದಂತೆ ಎಲ್ಲ 60 ಮಂದಿ ಶಾಸಕರಿಗೆ ಟಿಕೆಟ್‌ ಘೋಷಿಸಿದೆ.

Follow Us:
Download App:
  • android
  • ios