ಸಚಿವ ಜಮೀರ್‌ ಅಹ್ಮಮದ್‌ ಖಾನ್‌, ಈ ಹಿಂದೆ ನಿಮ್ಮದೇ ಸರ್ಕಾರ ಇದ್ದಾಗ ಹೆಚ್ಚು ಅನುದಾನ ಏಕೆ ತೆಗೆದುಕೊಳ್ಳಲಿಲ್ಲ? ಸರ್ಕಾರ ಸ್ಲಂ ಬೋರ್ಡ್‌ಗೆ 50 ಕೋಟಿ ರು. ನೀಡಿದೆ. ರಾಜ್ಯದಲ್ಲಿ 2,800 ಕೊಳಗೇರಿಗಳಿವೆ. ಬೆಂಗಳೂರಿನಲ್ಲಿ 480 ಕೊಳಗೇರಿಗಳಿವೆ.

ವಿಧಾನಸಭೆ (ಮಾ.17): ವಸತಿ ಯೋಜನೆಯಡಿ ಏಳು ನಕಲಿ ಹಕ್ಕು ಪತ್ರ ನೀಡಿದ ಸಂಬಂಧ ದೂರು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಜಮೀರ್‌ ಅಹ್ಮಮದ್‌ ಖಾನ್‌ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಈ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಮುನಿರತ್ನ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜರಾಜೇರಿಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 2023-24ರಿಂದ 2025-26ರ ವರೆಗೆ ಕೇವಲ 24.65 ಲಕ್ಷ ರು. ವೆಚ್ಚ ಮಾಡಲಾಗಿದೆ. ನನ್ನ ಕ್ಷೇತ್ರದ ಕೊಳಗೇರಿ ಪ್ರದೇಶಗಳಲ್ಲಿ 5 ಸಾವಿರ ಮನೆಗಳಿವೆ. 460 ಮನೆಗಳನ್ನು ಕೆಡವಲಾಗಿದ್ದು, ಮನೆಗಳ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದೆ. ಹೀಗಾದರೆ ನಾವು ಏನು ಮಾಡಬೇಕು? ಎಂದು ಕೇಳಿದರು.

Add Asianetnews Kannada as a Preferred SourcegooglePreferred

90 ಸಾವಿರ ರು. ಎಲ್ಲಿಂದ ತರಬೇಕು?: ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸರ್ಕಾರ ಸಕಾಲಕ್ಕೆ ಹಣ ಕೊಟ್ಟಿಲ್ಲ. ಗುತ್ತಿಗೆದಾರರಿಗೆ ಬಿಲ್‌ ನೀಡದ ಕಾರಣ ಕಾಮಗಾರಿ ಪ್ರಗತಿ ಕುಂಠಿತವಾಗಿದೆ. 460 ಫಲಾನುಭವಿಗಳು ತಲಾ 10 ಸಾವಿರ ರು. ಪಾವತಿಸಿ, ತಲಾ 90 ಸಾವಿರ ರು. ಪಾವತಿ ಬಾಕಿಯಿದೆ. ಹೀಗಾಗಿ ಕಾಮಗಾರಿ ಸ್ಥಗಿತವಾಗಿದೆ ಎಂದು ಆರ್‌ಟಿಐ ಅಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫಲಾನುಭವಿಗಳು ತಮ್ಮ ಪಾತ್ರೆ ಮಾರಾಟ ಮಾಡಿದರೂ 10 ಸಾವಿರ ರು. ಸಿಗಲ್ಲ. 90 ಸಾವಿರ ರು. ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.

ವಸತಿ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಫೋಟೋ ಹಾಗೂ ಸಹಿ ಹಾಕಿದ ನಕಲಿ ಹಕ್ಕುಪತ್ರಗಳನ್ನು 7 ಮಂದಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ದಾಖಲೆ ಪ್ರದರ್ಶಿಸಿದರು. ಈಗ ನಾವು ಯಾರ ವಿರುದ್ಧ ತನಿಖೆಗೆ ಆಗ್ರಹಿಸಬೇಕು? ಇದಕ್ಕೆಯಾರು ಹೊಣೆ? ಎಂದರು.

ಅನುದಾನ ಏಕೆ ತೆಗೆದುಕೊಂಡಿಲ್ಲ?

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್‌ ಅಹಮ್ಮದ್ ಖಾನ್‌, ಈ ಹಿಂದೆ ನಿಮ್ಮದೇ ಸರ್ಕಾರ ಇದ್ದಾಗ ಹೆಚ್ಚು ಅನುದಾನ ಏಕೆ ತೆಗೆದುಕೊಳ್ಳಲಿಲ್ಲ? ಸರ್ಕಾರ ಸ್ಲಂ ಬೋರ್ಡ್‌ಗೆ 50 ಕೋಟಿ ರು. ನೀಡಿದೆ. ರಾಜ್ಯದಲ್ಲಿ 2,800 ಕೊಳಗೇರಿಗಳಿವೆ. ಬೆಂಗಳೂರಿನಲ್ಲಿ 480 ಕೊಳಗೇರಿಗಳಿವೆ. ಹೀಗಾಗಿ ಅನುದಾನ ಕಡಿಮೆ ಇದೆ. ವಸತಿ ಯೋಜನೆಯಡಿ ಒಂದು ಮನೆಗೆ 7.50 ಲಕ್ಷ ರು. ಆಗುತ್ತದೆ. ಈ ಪೈಕಿ ಫಲಾನುಭವಿ 4.50 ಲಕ್ಷ ರು. ಕೊಡಬೇಕಿತ್ತು. ನಾನು ವಸತಿ ಸಚಿವನಾದ ಬಳಿಕ ಹೊರೆಯಾಗಲಿದೆ ಎಂದು ಅರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಕಡಿಮೆ ಮಾಡಿಸಿದೆ. ನಮ್ಮ ಸರ್ಕಾರ ಬಂದ ಬಳಿಕ ಯಾವುದೇ ಪಕ್ಷ ನೋಡದೆ ಸುಮಾರು 80 ಸಾವಿರ ಮನೆಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.