ತಾಲೂಕಿನಲ್ಲಿ ಇದುವರೆಗೂ ಕಾಂಗ್ರೆಸ್‌ ಹವಾ ಇತ್ತು. ಇನ್ನು ಮುಂದೆ ಬಿಜೆಪಿ ಹವಾ ಶುರುವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿಯಾದ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಕನಕಪುರ (ಏ.19): ತಾಲೂಕಿನಲ್ಲಿ ಇದುವರೆಗೂ ಕಾಂಗ್ರೆಸ್‌ ಹವಾ ಇತ್ತು. ಇನ್ನು ಮುಂದೆ ಬಿಜೆಪಿ ಹವಾ ಶುರುವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿಯಾದ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು. ನಗರದ ತಾಲೂಕು ಕಚೇ​ರಿ​ಯಲ್ಲಿ ಕ್ಷೇತ್ರ ಚುನಾವಣಾಧಿಕಾರಿ ಸಂತೋಷ್‌ ಅವರಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಸೇನಾನಿಯಾಗಿದ್ದೇನೆ. ಕೇಂದ್ರ ನಾಯಕರ ತೀರ್ಮಾನದಂತೆ ಈ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದು, ಗೆಲುವು ಸಾಧಿ​ಸು​ವು​ದ​ರಲ್ಲಿ ಅನು​ಮಾನ ಇಲ್ಲ ಎಂದ​ರು.

ಈ​ಗಾ​ಗಲೇ ದೇಶದಾದ್ಯಂತ ಕಾಂಗ್ರೆಸ್‌ ಪಕ್ಷ ಧೂಳಿ​ಪ​ಟ​ವಾ​ಗಿದೆ. ನಮ್ಮ ರಾಜ್ಯದಲ್ಲಿ ಅಲ್ಪಸ್ವಲ್ಪವಾಗಿ ಉಸಿರಾಡುತ್ತಿರುವ ಕಾಂಗ್ರೆಸ್‌ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನರ ಆಶಿರ್ವಾದದಿಂದ ಗಂಟುಮೂಟೆಯನ್ನು ಕಟ್ಟುವುದು ನಿಶ್ಚಿತವಾಗಿದೆ. ಇಡೀ ದೇಶದಲ್ಲಿ ಹೇಗೆ ಮೋದಿ- ಅಮಿತ್‌ ಶಾ ಹವಾ ಇದೆಯೊ ಹಾಗಯೇ ರಾಜ್ಯದಲ್ಲಿ ಯಡಿಯೂರಪ್ಪ- ಬೊಮ್ಮಯಿ ರವರ ನಾಯಕತ್ವದ ಬಿಜೆಪಿ ಹವಾಯಿದೆ. ಈ ಕ್ಷೇತ್ರದ ಜನರ ಆಶಿರ್ವಾದದಿಂದ ಮುಂದಿನ ದಿನದಲ್ಲಿ ಇಲ್ಲೂ ಬಿಜೆಪಿ ಹವಾ ಶುರುವಾಗಲಿದೆ ಎಂದು ಹೇಳಿ​ದ​ರು.

ಬಿಜೆಪಿ ಹಿರಿಯರನ್ನು ಎಂದೂ ಕಡೆಗಣಿಸಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರದಲ್ಲಿ ನರೇಂದ್ರ ಮೋದಿ ವರ್ಸಸ್‌ ರಾಹುಲ್, ರಾಜ್ಯದಲ್ಲಿ ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ರೀತಿಯಲ್ಲಿ ಕ್ಷೇತ್ರದಲ್ಲಿ ಅಶೋಕ್‌ ವರ್ಸಸ್‌ ಶಿವಕುಮಾರ್‌ ವಿರುದ್ಧ ಚುನಾವಣೆ ನಡೆಯಲಿದೆ. ನಮ್ಮ ಪಕ್ಷ ಇದುವರೆಗೂ ಎಂದಿಗೂ ಜಾತಿ ಆಧಾರದ ಮೇಲೆ ಚುನಾವಣೆ ನಡೆಸದೇ ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಕ್ಷೇತ್ರದ ಮತದಾರರ ಆಶಿರ್ವಾದ ಬೇಡುವುದಾಗಿ ತಿಳಿಸಿದರು, ಈ ಕ್ಷೇತ್ರದ ಬಿಜೆಪಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಬಹಿರಂಗವಾಗಿ ಪ್ರಚಾರ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇಂದು ನನಗೆ ಹಾಗೂ ನಮ್ಮ ನಾಯಕರಿಗೆ ಸಿಕ್ಕ ಅಭೂತಪೂರ್ವ ಸ್ವಾಗತದಿಂದ ನನಗೆ ಅತೀವ ಸಂತಸವಾಗಿದ್ದು ಈ ಜನ ಬೆಂಬಲ ನನ್ನ ಗೆಲುವಿನ ಸಂಕೇತವಾಗಿದೆ.

ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಯಾರಿಗೂ ಹೆದರದೇ ಕ್ಷೇತ್ರದ ಪ್ರತಿಯೊಂದು ಮನೆ-ಮನೆಗಳಿಗೂ ತೆರಳಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ದಲ್ಲಿ ಈ ತಾಲೂಕಿಗೆ ಕೊಟ್ಟಿರುವ ಕೊಡುಗೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿ ಮತವನ್ನು ಯೋಚಿಸುವಂತೆ ಕರೆ ನೀಡಿದರು. ಕಳೆದ ಬಾರಿ ನಿಮ್ಮ ಪಕ್ಷದ ಅಭ್ಯರ್ಥಿಗೆ ಠೇವಣಿಯೇ ಬಂದಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್‌, ಕಾಂಗ್ರೆಸ್‌ ಪಕ್ಷದ ನಾಯಕರಾದ ರಾಹುಲ್‌ ಗಾಂಧಿಯೇ ಸೋತಿರುವುದನ್ನು ಬಹುಶಃ ಡಿ.ಕೆ.ಶಿವಕುಮಾರ್‌ ರವರು ಮರೆತಿರಬಹುದು. ನಮ್ಮನ್ನು ಸೋಲಿಸುವರು ಯಾರು ಇಲ್ಲ ಎಂಬ ಅವರ ಮಾತಿಗೆ ಕಾಲವೇ ಉತ್ತರಿಸಲಿದೆ ಎಂದರು.

ಸುಂಟರಗಾಳಿ ಬಂದ ವೇಳೆ ಯಾವ ರೀತಿ ನೆಲದ ಮೇಲೆ ಬಿದ್ದ ತರಗಲೆಯನ್ನು ಎತ್ತರಕ್ಕೆ ಹಾಗೂ ಗೋಪುರದ ಮೇಲಿರುವ ಕಳಶವನ್ನು ಕೆಳಕ್ಕೆ ತೆಗೆದುಕೊಂಡು ಹೋಗು ತ್ತದೊ ಹಾಗಯೇ ಮತದಾರ ಪ್ರಭುಗಳು ಮನಸ್ಸನ್ನು ಮಾಡಿದರೆ ಅಸಾಧ್ಯವಾದದು ಸಾಧ್ಯವಾಗುತ್ತದೆ ಎಂಬುದು ಮರೆಯಬಾರದು ಎಂದು ಡಿಕೆ ಸಹೋ​ದ​ರ​ರಿಗೆ ಟಾಂಗ್‌ ನೀಡಿ​ದ​ರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

10 ಬಾರಿ ಒಂದೇ ಪಕ್ಷ, ಒಂದೇ ಚಿಹ್ನೆಯಡಿ ಸ್ಪರ್ಧಿಸಿ ದಾಖಲೆ ನಿರ್ಮಿಸುವತ್ತ ಆರಗ ಜ್ಞಾನೇಂದ್ರ!

ಬಿಜೆಪಿ ರಾಜ್ಯ ಉಸ್ತು​ವಾರಿ ಅರುಣ್‌ ಸಿಂಗ್‌ , ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ ನಾರಾ​ಯಣ , ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ರಾಜ್ಯ ಚುನಾವಣಾ ವೀಕ್ಷಕ ಆಜಾದ್‌ ಸಿಂಗ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ ನಾರಾಯಣ್‌ ಗೌಡ, ಬಿಜೆಪಿ ಘಟಕ ತಾಲೂಕು ಅಧ್ಯಕ್ಷ ವೆಂಕಟೇಶ,ನಗರ ಘಟಕದ ಅಧ್ಯಕ್ಷ ವೆಂಕಟೇಶ್‌, ಭೂ ಮಂಜೂರಾತಿ ಸದಸ್ಯ ರವಿಕುಮಾರ್‌, ನಗರಸಭಾ ಸದಸ್ಯೆ ಮಾಲತಿ ಆನಂದ್‌, ನಗರ ಘಟಕದ ಮಾಜಿ ಅಧ್ಯಕ್ಷ ನಾಗನಂದ್‌, ನಗರಸಭಾ ನಾಮನಿರ್ದೇಶನ ಸದಸ್ಯ ಮಾಯಣ್ಣಗೌಡ, ಕಾರ್ತಿಕ್‌, ತಾಲೂಕು ಎಸ್‌. ಸಿ. ಮೋರ್ಚಾ ಅಧ್ಯಕ್ಷ ಶಿವಮುತ್ತು, ಯುವ ಮೋರ್ಚಾ ಅಧ್ಯಕ್ಷ ಸುನೀಲ,ಭರತ್‌ ಮತ್ತಿ​ತ​ರರು ಹಾಜ​ರಿ​ದ್ದರು.