ಪ್ರತಿಯೊಂದು ಧರ್ಮದವರು ನಮ್ಮ ಮುಖಂಡ ಸಿಎಂ ಆಗಲಿ ಎಂದು ಆಸೆ ಇರುತ್ತದೆ. ಆದರೆ ನನಗೆ ನಮ್ಮ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಮಹದಾಸೆಯಿದೆ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು. 

ದಾಬಸ್‌ಪೇಟೆ (ಏ.29): ಪ್ರತಿಯೊಂದು ಧರ್ಮದವರು ನಮ್ಮ ಮುಖಂಡ ಸಿಎಂ ಆಗಲಿ ಎಂದು ಆಸೆ ಇರುತ್ತದೆ. ಆದರೆ ನನಗೆ ನಮ್ಮ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಮಹದಾಸೆಯಿದೆ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಾಬಸ್‌ಪೇಟೆ ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಮಧುಗಿರಿಗೆ ಪ್ರಚಾರಕ್ಕೆ ತೆರಳುವ ವೇಳೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿದ್ದ ಕೆಲಸದಿಂದ ಮತ್ತೊಮ್ಮೆ ಅವರೇ ಸಿಎಂ ಆಗಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಇದು ನನ್ನ ಅಭಿಪ್ರಾಯ ಕೂಡ ಆಗಿದೆ. ಅಂತಿಮವಾಗಿ ಹೈಕಮಾಂಡ್‌ ಅದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿ: ಸೋಂಪುರ ಹೋಬಳಿಯ ಗೋವಿಂದಪುರ ನನ್ನ ತಾಯಿ ತವರುಮನೆ. ನಮ್ಮ ಅಜ್ಜಿ ಊರು ಇದೇ ಹೋಬಳಿಯ ಕೂತಘಟ್ಟವಾಗಿದ್ದು ನಾನು ಚಿಕ್ಕ ವಯಸ್ಸಿನಲ್ಲಿ ಇಲ್ಲೇ ಕಾಲ ಕಳೆದಿದ್ದೇನೆ. ಹಾಗಾಗಿ ನನಗೂ ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸುವಂತೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಜೆಡಿಎಸ್‌-ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಚಲುವರಾಯಸ್ವಾಮಿ

ತಮಿಳುನಾಡು ಮಾದರಿ ಮೀಸಲಾತಿ ಹೆಚ್ಚಿಸಲಿ: ಇದೇ ಸಂದರ್ಭದಲ್ಲಿ ಮುಸ್ಲಿಂ ಮೀಸಲಾತಿ ರದ್ದುಗೊಳಿಸಿದ್ದ ಬಿಜೆಪಿ ಸರ್ಕಾರದ ತೀರ್ಮಾನಕ್ಕೆ ಸುಪ್ರೀಂಕೋರ್ಚ್‌ ತಡೆ ನೀಡಿರುವ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿರುವುದಕ್ಕೆ ಯಾವುದೇ ಬೇಸರವಿಲ್ಲ. ಆದರೆ 30 ವರ್ಷಗಳ ಹಿಂದೆ ಮುಸ್ಲಿಮರಿಗೆ ನೀಡಿದ್ದ ಕೇವಲ 4 ಪರ್ಸೆಂಟ್‌ ಮೀಸಲಾತಿಯನ್ನೂ ಯಾವುದೇ ಪರಾಮರ್ಶೆಯಿಲ್ಲದೆ ಅವೈಜ್ಞಾನಿಕವಾಗಿ ತೆಗೆದಿರುವುದು ಯಾವ ನ್ಯಾಯ? ಬೇಕಿದ್ದರೆ ಈಗಿರುವ ಮೀಸಲಾತಿ ಪ್ರಮಾಣವನ್ನು ತಮಿಳುನಾಡು ಮಾದರಿಯಲ್ಲಿ ಹೆಚ್ಚಿಸಿ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ಸೇರಿದ ಮುಸ್ಲಿಂ ಮುಖಂಡರು: ಜಮೀರ್‌ ಅಹಮ್ಮದ್‌ ಸಮ್ಮುಖದಲ್ಲಿ ಮುಸ್ಲಿಂ ಮುಖಂಡರಾದ ಗ್ರಾಪಂ ಮಾಜಿ ಸದಸ್ಯ ಹಾಗೂ ಹಾಲೇನಹಳ್ಳಿ ಡೇರಿ ಅಧ್ಯಕ್ಷ ನಯಾಜ್‌ ಖಾನ್‌, ಗ್ರಾಪಂ ಮಾಜಿ ಸದಸ್ಯ ಸೈಯದ್‌ ಚಾಂದ್‌ ಪಾಷಾ, ತಾಪಂ ಮಾಜಿ ಸದಸ್ಯ ಸಲೀಂಬಾಷಾ, ಮುಜೀಬ್‌, ಇಲಿಯಾಸ್‌ ಪಾಷಾ, ಬಾಬುದಾ, ಷಫೀ ಉಲ್ಲಾ, ಮೌಸಿನ್‌, ಮಸ್ತಾನ್‌, ಮುಬಾರಕ್‌, ಅತ್ತಹುಲ್ಲಾ ಖಾನ್‌, ಮಹಬೂಬ್‌, ಏಜಾಜ್‌, ಫಯಾಜ್‌,ಅಹಮದ್‌ ಖಾನ್‌, ತೌಸೀಪ್‌, ಮಸೀದಿ ಅಧ್ಯಕ್ಷ ಗೈಭಾನ್‌ ಖಾನ್‌ ಫಯಾಜ್‌ ಕಾಂಗ್ರೆಸ್‌ ಸೇರ್ಪಡೆಯಾದರು.

ಹಿಂದಿನ ಅಭಿವೃದ್ಧಿಗಳೇ ನಾಳೆಯ ಅಧಿಕಾರಕ್ಕೆ ದಾರಿ: ಡಾ.ಜಿ.ಪರಮೇಶ್ವರ್‌

ಇದೇ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಸ್ಲಿಂ ಬಾಂಧವರಿಂದ ಜಮೀರ್‌ ಅಹಮದ್‌ ಖಾನ್‌ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಗ್ರಾಪಂ ಅಧ್ಯಕ್ಷ ಶಿವಕುಮಾರ್‌, ಸಿದ್ದರಾಜು, ಖಲೀಂ, ಹನುಮಂತರಾಜು, ನಾರಾಯಣ, ಜಗದೀಶ್‌ ಮತ್ತಿತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.