ಮಂಡ್ಯದಿಂದ ಸ್ಪರ್ಧೆ ಇಲ್ಲ, ಚನ್ನಪಟ್ಟಣದಿಂದಲೇ ಕಣಕ್ಕಿಳಿಯುತ್ತೇನೆ: ಎಚ್.ಡಿ.ಕುಮಾರಸ್ವಾಮಿ
ಮಂಡ್ಯದಿಂದ ನನ್ನ ಸ್ಪರ್ಧೆ ಇಲ್ಲ. ಚನ್ನಪಟ್ಟಣ ಬಿಟ್ಟು ನಾನು ಬೇರೆಲ್ಲೂ ಸ್ಪರ್ಧಿಸುವುದಿಲ್ಲ. ಮಂಡ್ಯಕ್ಕೆ ಸ್ಥಳೀಯ ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣ (ಏ.18): ‘ಮಂಡ್ಯದಿಂದ ನನ್ನ ಸ್ಪರ್ಧೆ ಇಲ್ಲ. ಚನ್ನಪಟ್ಟಣ ಬಿಟ್ಟು ನಾನು ಬೇರೆಲ್ಲೂ ಸ್ಪರ್ಧಿಸುವುದಿಲ್ಲ. ಮಂಡ್ಯಕ್ಕೆ ಸ್ಥಳೀಯ ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಂಡ್ಯದಿಂದಲೂ ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಮಂಡ್ಯದ ಶಾಸಕರು ಹಲವಾರು ಬಾರಿ ಬಂದು ಮಂಡ್ಯದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ನೀವು ನಿಂತರೆ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆಲ್ಲಲು ಸಹಕಾರಿಯಾಗುತ್ತದೆ.
ನೀವು ಬಂದು ನಿಲ್ಲಿ ಎಂದು ಅಲ್ಲಿನ ನಾಯಕರು, ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ, ಅಲ್ಲಿಗೆ ಹೋದರೆ ಅಪಪ್ರಚಾರ ಶುರುವಾಗುತ್ತದೆ ಎಂದು ಹೇಳಿ ನಿರಾಕರಿಸಿದ್ದೇನೆ’ ಎಂದರು. ಮಂಡ್ಯದ ಜನ ಭಾವನಾತ್ಮಕ ಜೀವಿಗಳು. ಹೀಗಾಗಿ, ಮಂಡ್ಯದಲ್ಲಿ ಶ್ರಮ ಹಾಕಿದರೆ ಏಳಕ್ಕೆ ಏಳು ಕ್ಷೇತ್ರ ಗೆಲ್ಲಬಹುದು. ರಾಜ್ಯದಲ್ಲಿ ಜೆಡಿಎಸ್ಗೆ 123 ಸ್ಥಾನ ಬರಬೇಕಾದರೆ ಹಾಸನ, ಮಂಡ್ಯದ ತಲಾ 7, ತುಮಕೂರಿನ 11 ಕ್ಷೇತ್ರ ಗೆಲ್ಲಬೇಕು ಎಂದರು. ಮಂಡ್ಯದಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬರುತ್ತೆ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ದೊಡ್ಡವರು. ಈಗ ರಾಷ್ಟ್ರೀಯ ಪಕ್ಷಕ್ಕೆ ಸೇರಿದ್ದಾರೆ. ನಾವು ಸಣ್ಣ ಪಕ್ಷದವರು. ನೋಡೋಣ, ಜನ ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು.
ನನ್ನ, ಶೆಟ್ಟರ್ ಬಗ್ಗೆ ಮಾತಾಡುವ ನೈತಿಕತೆ ಬಿಎಸ್ವೈಗಿಲ್ಲ: ಲಕ್ಷ್ಮಣ ಸವದಿ
ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ವದಂತಿ: ಚನ್ನಪಟ್ಟಣದ ಜೊತೆ ಮಂಡ್ಯದಿಂದಲೂ ಕಣಕ್ಕಿಳಿಯಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಏ.20ರಂದು ಅಮಾವಾಸ್ಯೆ ದಿನ ಅವರು ಆದಿಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬರೂ ಹೊಸ ಖಾತೆ ತೆರೆದು, ಅದೇ ಖಾತೆಯಲ್ಲಿ ಚುನಾವಣಾ ವೆಚ್ಚ ನಿರ್ವಹಿಸಲು ಚುನಾವಣಾ ಆಯೋಗದ ಆದೇಶವಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯದ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದಾರೆ.
ಚಾಮರಾಜನಗರ ಟಿಕೆಟ್ ಆಕಾಂಕ್ಷಿಗಳ ಬಂಡಾಯ ಶಮನ: ಸಚಿವ ಸೋಮಣ್ಣ ಹಾದಿ ಸುಗಮ
ಅವರ ಬೆಂಬಲಿಗರು ಉಳಿದುಕೊಳ್ಳುವುದಕ್ಕೆ ಮಂಡ್ಯದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ರೂಮ್ಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಲಾಗಿದೆ ಎಂದು ವರದಿಯಾಗಿತ್ತು. ಅಲ್ಲದೆ, ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಉಳಿದಿದ್ದರೂ ಈವರೆಗೂ ಯಾರಿಗೂ ‘ಬಿ’ ಫಾರಂ ನೀಡದಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.