Asianet Suvarna News Asianet Suvarna News

ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಸಿಎಂ ಬೊಮ್ಮಾಯಿ ವಿಶ್ವಾಸ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟವಾದ ಬಹುಮತ ದೊರೆಯಲಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚನೆ ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

Karnataka Election 2023 Clear majority for BJP Says CM Basavaraj Bommai gvd
Author
First Published Apr 1, 2023, 8:22 PM IST

ದೊಡ್ಡಬಳ್ಳಾಪುರ (ಏ.01): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟವಾದ ಬಹುಮತ ದೊರೆಯಲಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚನೆ ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ತಮ್ಮ ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಚುನಾವಣಾ ಸಮೀಕ್ಷೆಗಳು ನಡೆದಿದ್ದು, ಪೈಪೋಟಿಯನ್ನೇ ತೋರಿಸುತ್ತಿದೆ. ಕಾಂಗ್ರೆಸ್‌ ಪರವಾಗಿ ಇಲ್ಲ. ಚುನಾವಣೆಗೆ ಇನ್ನೂ ಒಂದೂವರೆ ತಿಂಗಳಿದ್ದು, ಬಹಳಷ್ಟುಬದಲಾವಣೆಗಳು ಕಾಣುತ್ತಿವೆ ಎಂದರು.

1 ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಪಟ್ಟಿ ತಯಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಎಲ್ಲ ಹಂತಗಳಲ್ಲಿ ಅಭ್ಯರ್ಥಿಗಳ ಸಾಮರ್ಥ್ಯ ಹಾಗೂ ಧನಾತ್ಮಕ ವಿವರಗಳನ್ನು ಕಲೆ ಹಾಕಲಾಗಿದ್ದು, ಹೈಕಮಾಂಡ್‌ ಸೂಕ್ಷ್ಮವಾಗಿ ಪರಿಶೀಲಿಸಿ ಸೂಕ್ತ ಮತ್ತು ಗೆಲ್ಲುವ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡಲಿದೆ ಎಂದರು.

ಡಿಕೆಶಿಯಿಂದ ಬಿಜೆಪಿ ಶಾಸಕರಿಗೆ ಫೋನ್‌ ಕರೆ: ಸಿಎಂ ಬೊಮ್ಮಾಯಿ

ಅಭಿಪ್ರಾಯ ಸಂಗ್ರಹ: ಸಂಭಾವ್ಯ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹ ಸಭೆ ನಡೆಯುತ್ತಿರುವ ಬಗ್ಗೆ ಮಾತನಾಡಿ ತಳಮಟ್ಟದ ಕ್ಷೇತ್ರ ಮಟ್ಟದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪರಾಮರ್ಶಿಸಿ ಸಂಸದೀಯ ಮಂಡಳಿಗೆ ಸಲ್ಲಿಸಲಾಗುವುದು ಎಂದರು.

ಸಿದ್ದರಾಮಯ್ಯ ಹತಾಶರಾಗಿದ್ದಾರೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. 2013ರಲ್ಲಿ ಕೊನೆ ಚುನಾವಣೆ ಎಂದಿದ್ದರು. 2018ರಲ್ಲಿ ಮತ್ತೆ ಸ್ಪರ್ಧಿಸಿದರು. ಈಗ ಪುನಃ ಕನಸು ಕಾಣುತ್ತಿದ್ದಾರೆ. ವ್ಯಕ್ತಿಯೊಬ್ಬರು ಮುಖ್ಯ ಮಂತ್ರಿಯಾಗುವುದು ಮುಖ್ಯವಲ್ಲ. ಮುಖ್ಯ ಮಂತ್ರಿಯಾಗಿ ರಾಜ್ಯದ ಜನಕ್ಕೇನು ಮಾಡಬಲ್ಲರು ಎನ್ನುವುದು ಮುಖ್ಯ ಎಂದರು. 2018ರಲ್ಲಿ ಜನ ತಿರಸ್ಕರಿಸಿದ್ದಾರೆ ಈ ಬಾರಿಯೂ ತಿರಸ್ಕರಿಸಲಿದ್ದಾರೆ ಎಂದರು.

ವಿರೋಧ ಪಕ್ಷಗಳಿಗೆ ಬದ್ಧತೆ ಇಲ್ಲ: ಮೀಸಲಾತಿ ಚುನಾವಣಾ ಗಿಮಿಕ್‌ ಎಂದಿರುವ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಇದನ್ನು ಅವರಿದಾಗ ಮಾಡಬಹುದಿತ್ತು. ಇದು 30 ವರ್ಷಗಳ ಬೇಡಿಕೆ. ಬದ್ಧತೆ ಇರದ ಕಾರಣ ಅವರು ಈ ಸಾಹಸಕ್ಕೆ ಹೋಗಲಿಲ್ಲ. ಜನರನ್ನು ಮತ ಬ್ಯಾಂಕ್‌ ಆಗಿ ಕಾಣುತ್ತಾರೆ. ಅವರಿಗೆ ಅಸಾಧ್ಯವಾದುದನ್ನು ಮಾವು ಮಾಡಿದ್ದೇವೆ. ಹೀಗಾಗಿ ಅವರಿಗೆ ತಳಮಳ ಶುರುವಾಗಿದ್ದು, ಎಲ್ಲ ದರಲ್ಲಿಯೂ ರಾಜಕೀಯ ಮಾಡುತ್ತಾರೆ ಎಂದರು.

ವರುಣಾ ಸ್ಪರ್ಧೆ ಗುಟ್ಟು ಬಿಟ್ಟುಕೊಡದ ಸಿಎಂ: ವರುಣಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ ಬಳಿಕ ಬಿಎಸ್‌ವೈ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ವರುಣಾದಲ್ಲಿ ನಾವು ಖಂಡಿತವಾಗಿ ಪ್ರಬಲವಾದ ಪೈಪೋಟಿ ನೀಡುತ್ತೇವೆ. ವಿಜಯೇಂದ್ರ ಅವರು ಸ್ಪರ್ಧೆ ಮಾಡಬೇಕು ಎಂದು ಜನಾಭಿಪ್ರಾಯವಿದೆ. ಅಂತಿಮವಾಗಿ ಎಲ್ಲಿ ನಿಲ್ಲಬೇಕು ಎಂಬುದನ್ನ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ಯಾವ ಎಸ್ಸಿ ಜಾತಿಯನ್ನೂ ಮೀಸಲಿನಿಂದ ತೆಗೆದಿಲ್ಲ: ಸಿಎಂ ಬೊಮ್ಮಾಯಿ

ಕುಟುಂಬದೊಂದಿಗೆ ಪೂಜೆ: ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಮುಖ್ಯಮಂತ್ರಿ ತಮ್ಮ ಪತ್ನ ಹಾಗೂ ಪುತ್ರ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಅರ್ಚನೆ, ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios