Asianet Suvarna News Asianet Suvarna News

ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ಬಜರಂಗಿ ಸಂಘರ್ಷ: ನಿಷೇಧ ಪ್ರಸ್ತಾವಕ್ಕೆ ಪ್ರಧಾನಿ ತಿರುಗೇಟು

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಪ್ರಸ್ತಾಪದ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ರಾರ‍ಯಲಿಗಳಲ್ಲಿ ‘ಬಜರಂಗ ಬಲಿ ಕೀ ಜೈ’ ಎಂಬ ಉದ್ಗಾರ ಸದ್ದು ಮಾಡುತ್ತಿದೆ. 

Karnataka Election 2023 BJP vs Congress Bajrang Dal Ban Row gvd
Author
First Published May 4, 2023, 5:22 AM IST

ಮಂಗಳೂರು/ಕಾರವಾರ/ಬೆಳಗಾವಿ (ಮೇ.04): ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಪ್ರಸ್ತಾಪದ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ರಾರ‍ಯಲಿಗಳಲ್ಲಿ ‘ಬಜರಂಗ ಬಲಿ ಕೀ ಜೈ’ ಎಂಬ ಉದ್ಗಾರ ಸದ್ದು ಮಾಡುತ್ತಿದೆ. ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಜರಂಗದಳ ನಿಷೇಧ ವಿಚಾರವನ್ನು ಪ್ರಸ್ತಾಪಿಸದೆಯೇ ಮೋದಿ ಕೇವಲ ‘ಬಜರಂಗ ಬಲೀ ಕೀ ಜೈ’ ಎಂದು ಜೈಕಾರ ಹಾಕಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದ್ದಾರೆ. ಜತೆಗೆ, ಮತದಾನದ ವೇಳೆ ‘ಬಜರಂಗ ಬಲಿ ಕೀ ಜೈ’ ಎಂದು ಹೇಳಿಯೇ ಬಿಜೆಪಿಗೆ ಮತಹಾಕಿ ಕಾಂಗ್ರೆಸ್‌ಗೆ ಶಿಕ್ಷೆ ನೀಡಿ ಎಂದೂ ಜನತೆಗೆ ಕರೆಕೊಟ್ಟಿದ್ದಾರೆ.

ಹೊಸಪೇಟೆಯಲ್ಲಿ ಮಂಗಳವಾರ ಬಜರಂಗ ದಳ ನಿಷೇಧದ ವಿಚಾರ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಹನುಮನಿಗೆ ಜೈಕಾರ ಹಾಕುವವರನ್ನು ಕಾಂಗ್ರೆಸ್‌ ಬಂಧಿಸಲು ಹೊರಟಿದೆ. ಮುಂದಿನ ದಿನಗಳಲ್ಲಿ ಅವರು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದರು. ಆದರೆ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಬೆಳಗಾವಿಯ ಬೈಲಹೊಂಗಲದಲ್ಲಿ ಆಯೋಜಿಸಿದ್ದ ಮೂರು ರಾಜ್ಯಗಳಲ್ಲೂ ಅವರು ಬಜರಂಗದಳ ನಿಷೇಧದ ವಿಚಾರ ಪ್ರಸ್ತಾಪಿಸಲೇ ಇಲ್ಲ. 

ತೆನೆ ಹೊಲದಲ್ಲಿ, ಕಮಲ ಕೊಳದಲ್ಲಿ, ಕಾಂಗ್ರೆಸ್‌ ಅಧಿಕಾರದಲ್ಲಿ: ಡಿ.ಕೆ.ಶಿವಕುಮಾರ್‌

ಬದಲಾಗಿ ಭಾಷಣ ಆರಂಭಕ್ಕೂ ಮುನ್ನ ಭಾರತ್‌ ಮಾತಾ ಕೀ ಜೈ, ಬಜರಂಗ ಬಲಿ ಕೀ ಜೈ ಎಂದು ನೆರೆದಿದ್ದ ಕಾರ್ಯಕರ್ತರಿಂದ ಮೂರು ಬಾರಿ ಜೈಕಾರ ಹಾಕಿಸುವ ಮೂಲಕ ಕಾಂಗ್ರೆಸ್‌ಗೆ ಸೂಕ್ತ ಸಂದೇಶ ರವಾನಿಸಿದರು. ಅಂಕೋಲಾದಲ್ಲಿ ಜೈಕಾರದ ಜತೆಗೆ ಮತದಾನದ ದಿನ ‘ಬಜರಂಗ ಬಲಿ ಕೀ ಜೈ’ ಎಂದು ಹೇಳಿಯೇ ಕಮಲದ ಬಟನ್‌ ಒತ್ತುವ ಮೂಲಕ ಕಾಂಗ್ರೆಸ್‌ಗೆ ಶಿಕ್ಷೆ ನೀಡಿ ಎಂದು ಕರೆ ಕೊಟ್ಟರು.

ಬಜರಂಗ ದಳ ನಿಷೇಧ ಪ್ರಸ್ತಾವಕ್ಕೆ ಬಿಜೆಪಿ ಕೆಂಡಾಮಂಡಲ: ಅಧಿಕಾರಕ್ಕೆ ಬಂದರೆ ಬಜರಂಗ ದಳ, ಪಿಎಫ್‌ಐನಂತಹ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂಬ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಗೆ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.  ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್‌ ಜೋಶಿ ಸೇರಿದಂತೆ ರಾಜ್ಯಾದ್ಯಂತ ಪಕ್ಷದ ಹಲವು ನಾಯಕರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಹನುಮನ ಭಕ್ತರದ್ದು ಈ ಬಜರಂಗದಳ. ಇದನ್ನು ಯಾರೂ ನಿಷೇಧಿಸಲು ಸಾಧ್ಯವಿಲ್ಲ. ಒಂದು ವೇಳೆ ನಿಷೇಧಿಸಲು ಮುಂದಾದರೆ ಬಜರಂಗಿಗಳು ಕಾಂಗ್ರೆಸನ್ನೇ ಕಿತ್ತು ಓಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಚ್ಚರ ಎಂದು ಹೇಳಿದರು. ಬಜರಂಗ ದಳವು ಸಂಸ್ಕೃತಿ, ಪರಂಪರೆ ಹಾಗೂ ಹಿಂದುತ್ವದ ಆಧಾರದ ಮೇಲಿದೆ. ಮುಂದಿನ ದಿನಗಳಲ್ಲಿ ಏನಾದರೂ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದರೆ ಕೇಸರಿ ಧ್ವಜವನ್ನು ಕೂಡ ರದ್ದುಪಡಿಸುತ್ತಾರೆ. ಇದನ್ನು ಜನತೆ ನೆನಪಿನಲ್ಲಿಟ್ಟುಕೊಂಡು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದೂ ಅವರು ಕರೆ ಕೊಟ್ಟರು.

ಪ್ರಧಾನಿಯ ನಿಂದಿಸುವುದೇ ಕಾಂಗ್ರೆಸ್‌ ಸಾಧನೆ: ಸಚಿವ ಸುಧಾಕರ್‌

ಕೇಂದ್ರ ಸಚಿವೆ ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಮಾತನಾಡಿ, ಮುಸ್ಲಿಮರನ್ನು ಓಲೈಕೆ ಮಾಡಲು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ಗೆ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ವಿನಾಶಕಾಲ ಬಂದಿದೆ. ಪಿಎಫ್‌ಐ ಮೇಲಿನ ಪ್ರಕರಣಗಳನ್ನು ಈ ಹಿಂದಿನ ಕಾಂಗ್ರೆಸ್‌ನ ಸರ್ಕಾರ ಹಿಂತೆಗೆದುಕೊಂಡು, ನೂರಾರು ಪ್ರಕರಣಗಳನ್ನು ಕೈ ಬಿಟ್ಟಿದೆ. ಬಜರಂಗ ದಳವು ಆರ್‌ಎಸ್‌ಎಸ್‌ ಭಾಗವಾಗಿದ್ದು, ಯುವಕರ ಮಧ್ಯೆ ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಅದು ಎಂದಿಗೂ ದೇಶ ವಿರೋಧಿ ಕೆಲಸ ಮಾಡಿಲ್ಲ. ಇಂತಹ ಸಂಘಟನೆಯನ್ನು ಬಾಂಬ್‌ ಸ್ಫೋಟಿಸುವ, ಮತೀಯ ಗಲಭೆಗಳನ್ನು ನಡೆಸುವ, ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವ ಪಿಎಫ್‌ಐನೊಂದಿಗೆ ಹೋಲಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios