Asianet Suvarna News Asianet Suvarna News

ತೆನೆ ಹೊಲದಲ್ಲಿ, ಕಮಲ ಕೊಳದಲ್ಲಿ, ಕಾಂಗ್ರೆಸ್‌ ಅಧಿಕಾರದಲ್ಲಿ: ಡಿ.ಕೆ.ಶಿವಕುಮಾರ್‌

ಮುಳಬಾಗಿಲು ಕಾಂಗ್ರೆಸ್‌ ಅಭ್ಯರ್ಥಿ ವಿ.ಆದಿನಾರಾಯಣ, ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರಿಗೆ ಉಡುಗೊರೆಯಾಗಿ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆ ನೀಡಿದರು. 

Karnataka Election 2023 KPCC President DK Shivakumar Campaign In Kolar District gvd
Author
First Published May 3, 2023, 1:24 PM IST

ಮುಳಬಾಗಿಲು (ಮೇ.03): ಮುಳಬಾಗಿಲು ಕಾಂಗ್ರೆಸ್‌ ಅಭ್ಯರ್ಥಿ ವಿ.ಆದಿನಾರಾಯಣ, ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರಿಗೆ ಉಡುಗೊರೆಯಾಗಿ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆ ನೀಡಿದರು. ಮುಳಬಾಗಿಲಿನ ನೇತಾಜಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಆದಿನಾರಾಯಣ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಮುಳಬಾಗಿಲು- ಕೋಲಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಅಲೆ ಬೀಸುತ್ತಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. 

ಆದ್ದರಿಂದ ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ನೀಡಬೇಡಿ. ಕಾಂಗ್ರೆಸ್‌ನ 5 ಗ್ಯಾರಂಟಿಗಳನ್ನು ನಾವು ಅಧಿಕಾರ ಹಿಡಿದ ಮೇಲೆ ಅನುಷ್ಠಾನಕ್ಕೆ ತರುತ್ತೇವೆಂದು ಭರವಸೆ ನೀಡಿದರು. ಜೆಡಿಎಸ್‌ನ ಕುಮಾರಸ್ವಾಮಿಗೆ ಒಂದು ಬಾರಿ ಅವಕಾಶ ನೀಡಿದ್ದೆವು. ಆದರೆ ಅವರು ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲ್ಲ. ಜೆಡಿಎಸ್‌ಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ ಅವರು ದಾನ ಧರ್ಮಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದು ಕೊತ್ತೂರು ಮತ್ತು ಆದಿನಾರಾಯಣ ಅವರ ಕೈಗಳನ್ನು ಮೇಲಕ್ಕೆತ್ತಿ ಪ್ರದರ್ಶಿಸಿದರು.

ನುಡಿದಂತೆ ನಡೆಯುವ ಕುಮಾರಸ್ವಾಮಿ ಕೈ ಬಲಪಡಿಸಿ: ಎಚ್‌.ಡಿ.ದೇವೇಗೌಡ

ಹೆಲಿಕಾಪ್ಟರ್‌ಗೆ ರಣಹದ್ದು ಡಿಕ್ಕಿ: ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಬೇಕಾಗಿತ್ತು. ಆದರೆ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಡಿಕ್ಕಿಹೊಡೆದ ಪರಿಣಾಮ ಹೆಲಿಕಾಪ್ಟರ್‌ನ ಮುಂಭಾಗದ ಗಾಜು ಒಡೆದಿದ್ದರಿಂದ ತುರ್ತಾಗಿ ಹೆಲಿಕಾಪ್ಟರ್‌ ಭೂಸ್ಪರ್ಶ ಮಾಡಿಸಲಾಯಿತು. ಬಳಿಕ ಡಿಕೆಶಿ ಬೆಂಗಳೂರಿನಿಂದ ಕಾರ್‌ನಲ್ಲಿ ಆಗಮಿಸಿದ್ದರಿಂದ ಮಧ್ಯಾಹ್ನ 2.30ಕ್ಕೆ ಸಭೆ ಆರಂಭವಾಯಿತು. ಈ ವಿಷಯವನ್ನು ಪ್ರಸ್ತಾಪಿಸಿದ ಡಿಕೆಶಿ, ಬೆಂಗಳೂರಿನಿಂದ ಮುಳಬಾಗಿಲುಗೆ ಬರುತ್ತಿದ್ದಾಗ ನಾನು ಕುಳಿತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಡಿಕ್ಕಿ ಹೊಡೆದು ಗ್ಲಾಸ್‌ ಒಡೆದುಹೋಯಿತು. ನಾನು ಸತ್ತು ಬದುಕಿ ಮುಳಬಾಗಿಲುಗೆ ಬಂದಿದ್ದೇನೆ. ಇಲ್ಲಿ ಆದಿ ನಾರಾಯಣ ಅಭ್ಯರ್ಥಿ, ಆದರೆ ನಾನು ಮತ್ತು ಕೊತ್ತೂರು ಅಭ್ಯರ್ಥಿಯೆಂದು ಭಾವಿಸಿ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮುಳಬಾಗಿಲು ದೋಸೆ ಇಷ್ಟ: ಜೆಡಿಎಸ್‌ನ ತೆನೆ ಹೊಲದಲ್ಲಿ ಇರಲಿ ಬಿಜೆಪಿಯ ಕಮಲ ಕೊಳದಲ್ಲಿ ಇರಲಿ ಕೈ ಮಾತ್ರ ಅಧಿಕಾರದಲ್ಲಿ ಇರುವಂತೆ ಕಾರ್ಯಕರ್ತರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರಲ್ಲದೆ ಆದಿನಾರಾಯಣ ಗೋವಿಂದ ಗೋವಿಂದ ಎಂದು ಸಂಬೋಧಿಸಿದರಲ್ಲದೆ ಮುಳಬಾಗಿಲು ದೋಸೆ ಎಂದರೆ ನನಗೆ ತುಂಬ ಇಷ್ಟಮತ್ತೊಮ್ಮೆ ಮುಳಬಾಗಿಲುಗೆ ಬರುತ್ತೇನೆಂದು ಹೇಳಿದರು.

ಕಾಂಗ್ರೆಸ್‌ ಆನೆ ಇದ್ದಂತೆ: ಕೊತ್ತೂರು ಮಂಜುನಾಥ್‌ ಮಾತನಾಡಿ, 20 ವರ್ಷಗಳ ಕಾಲ ಯಾವ ರೀತಿ ನನ್ನನ್ನು ಕಾಪಾಡಿಕೊಂಡು ಬಂದಿದ್ದಿರೋ ಅದೇ ರೀತಿ ಆದಿನಾರಾಯಣ ರವರನ್ನು ಸಹ ಕಾಪಾಡಬೇಕು. ಕಾಂಗ್ರೆಸ್‌ ಪಕ್ಷ ಆನೆ ಇದ್ದಂತೆ. ಬಿಜೆಪಿ ಡಬಲ್‌ ಎಂಜಿನ್‌ ಕಿತ್ತುಹೋಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಕಣ್ಣುಗಳಿದ್ದಂತೆ ಯಾವುದೇ ಕಾರಣಕ್ಕೂ ಈ ಎರಡೂ ಪಕ್ಷಗಳನ್ನು ಬೆಂಬಲಿಸದೇ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿ ಶಾಸಕರನ್ನಾಗಿ ಮಾಡಿ ವಿಧಾನಸೌಧಗೆ ಕಳುಹಿಸುವಂತೆ ಮನವಿ ಮಾಡಿದರು.

ಬಿಜೆಪಿದು ಡಬಲ್‌ ಎಂಜಿನ್‌, ಕಾಂಗ್ರೆಸ್‌ದು ಟ್ರಬಲ್‌ ಎಂಜಿನ್‌: ಸಚಿವ ಸುಧಾಕರ್‌

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಆದಿನಾರಾಯಣ, ಆವಣಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠೇಗೌಡ, ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಆಲಂಗೂರು ಶಿವಣ್ಣ, ಡಾ.ವಜಾಹತುಲ್ಲಾಖಾನ್‌, ರಾಜೇಂದ್ರಗೌಡ, ಮುಳಬಾಗಿಲು ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಅಮಾನುಲ್ಲ, ಕಾರ್‌ ಶ್ರೀನಿವಾಸ್‌, ಕಗ್ಗಿನಹಳ್ಳಿ ಶ್ರೀನಿವಾಸ್‌, ಸುಹಾಸ್‌ ಶೆಟ್ಟಿ, ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios