ಈಗಾಗಲೇ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್‌ ನಿಲುವು ಗಮನಿಸಿದರೆ ದೇಶದಲ್ಲಿಯೇ ಕಾಂಗ್ರೆಸ್‌ ಬ್ಯಾನ್‌ ಆಗುತ್ತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. 

ಬಾಗಲಕೋಟೆ (ಮೇ.05): ಈಗಾಗಲೇ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್‌ ನಿಲುವು ಗಮನಿಸಿದರೆ ದೇಶದಲ್ಲಿಯೇ ಕಾಂಗ್ರೆಸ್‌ ಬ್ಯಾನ್‌ ಆಗುತ್ತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರ ಪ್ರಣಾಳಿಕೆ ಮೂರ್ಖತನದ ಪರಮಾವ​ಧಿ. ದೇಶಭಕ್ತ ಸಂಘಟನೆಯನ್ನು ಪಿಎಫ್‌ಐಗೆ ಕಾಂಗ್ರೆಸ್‌ ಹೋಲಿಸಿದ್ದು ಸರಿಯಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ. ಕಾಂಗ್ರೆಸ್‌ ಮನಸಿನಲ್ಲಿರುವ ವಿಷವನ್ನ ಕಕ್ಕುತ್ತಿರೋದು ಒಳ್ಳೆಯದು. ಜನತೆಗೆ ಕಾಂಗ್ರೆಸ್‌ ಬುದ್ಧಿ ಮನವರಿಕೆ ಆಗ್ತಿದೆ ಎಂದು ತಿಳಿಸಿದರು. ಕಾಂಗ್ರೆಸ್‌ ಅಧಿ​ಕಾರಕ್ಕೆ ಬಂದ್ರೆ ತಾನೇ ಇದೆಲ್ಲ ಆಗೋದು? ಕಾಂಗ್ರೆಸ್ಸಿಗರಿಗೆ ಸೋಲಿನ ಹತಾಶೆ ಮತ್ತು ಸೋಲನ್ನು ಎದುರು ಕಾಣುತ್ತಿದ್ದಾರೆ. ಗೆದ್ದೇ ಬಿಟ್ಟಿದ್ದೀವಿ ಅಂತ ಬೀಗುತ್ತಿದ್ದ ಕಾಂಗ್ರೆಸ್‌ ಪಕ್ಷಕ್ಕೆ ನರೇಂದ್ರ ಮೋದಿ ಅವರ ಬಿರುಗಾಳಿಯಿಂದ ಹತಾಶರಾಗಿದ್ದಾರೆ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಭಾರತ ದಿವಾ​ಳಿ: ಜನರಿಗೆ ಪೊಳ್ಳು ಭರವಸೆ ನೀಡುತ್ತಿರುವ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಶ್ರೀಲಂಕಾ, ಪಾಕಿಸ್ತಾನದ ನಂತರ ಭಾರತ ಆರ್ಥಿಕ ದಿವಾಳಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು. ಇಲ್ಲಿನ ಪ್ರೆಸ್‌ ಟ್ರಸ್ಟ್‌ನಲ್ಲಿ ಗುರವಾರ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್‌ ಟ್ರಸ್ಟ್‌ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ಸಂವಾದಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪೊಳ್ಳು ಭರವಸೆ ನೀಡುವ ಮೂಲಕ ಜನರಿಗೆ ಟೋಪಿ ಹಾಕಲು ಹೊರಟಿದೆ. ಈಗಾಗಲೇ ಉಚಿತ ಕೊಡುಗೆಯಿಂದ ಶ್ರೀಲಂಕಾ, ಪಾಕಿಸ್ತಾನಗಳು ಆರ್ಥಿಕವಾಗಿ ದಿವಾಳಿಯಾಗಿವೆ. ಇದೇ ಪರಿಸ್ಥಿತಿ ಭಾರತಕ್ಕೂ ಬರಬಹುದು ಎಂದು ಟೀಕಿಸಿದರು.

ಸಿದ್ಧಗಂಗಾ ಶ್ರೀಗಳು ಕೊಟ್ಟ ವಾಚ್‌ ಧರಿಸಿ ಸಿಎಂ ಬೊಮ್ಮಾಯಿ ಪ್ರಚಾರ

ಲಾಟರಿ ಇಲ್ಲದೇ ಬಹುಮಾನ ಘೋಷಣೆ ಮಾಡುವ ಸಂಸ್ಕೃತಿ ಬೆಳೆಸಿಕೊಂಡು ಬಂದಿರುವ ಕಾಂಗ್ರೆಸ್‌ನವರು ಪೊಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದಾರೆ. ಅಧಿಕಾರಕ್ಕೇ ಬರುವುದಿಲ್ಲ ಎಂದಾದ ಮೇಲೆ ಘೋಷಣೆಗೆ ಯಾವ ಬೆಲೆಯಿದೆ? ಇತ್ತ ಜೆಡಿಎಸ್‌ನವರು ಈ ಬಾರಿ ಅತಂತ್ರ ಫಲಿತಾಂಶ ಬರುತ್ತದೆ. ಹೀಗಾಗಿ, ನಾವು ಅಧಿಕಾರಕ್ಕೆ ಬರುತ್ತೇವೆಂಬ ಕನಸು ಕಾಣುತ್ತಿದ್ದಾರೆ. ಆದರೆ, ರಾಜ್ಯದ ಜನತೆ ಬಿಜೆಪಿಗೆ ಸ್ಪಷ್ಟಬಹುಮತ ನೀಡುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಕಾಂಗ್ರೆಸ್‌ ಪಕ್ಷಕ್ಕೆ ದಿಕ್ಕು ತೋಚದ ರೀತಿಯಲ್ಲಿ ರಾಜ್ಯದಲ್ಲಿ ವಾತಾವರಣ ಸೃಷ್ಠಿಯಾಗಿದೆ. ಹೀಗಾಗಿ, ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್‌ ಮಾಡುವ ವಿಚಾರವನ್ನು ತೆಗೆದುಕೊಂಡಿದ್ದಾರೆ. ಈ ಸಂಘಟನೆ ದೇಶಭಕ್ತ ಸಂಘಟನೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಿಲ್ಲ, ಹಲವು ರಾಜ್ಯದಲ್ಲಿದೆ. ಇದನ್ನು ನಿಷೇಧಿಸುವ ಮಾತು ಹಾಸ್ಯಾಸ್ಪದವಾದುದು ಎಂದರು.

ಹೊಂದಾಣಿಕೆ ಮಾಡಿಕೊಳ್ಳುವಂಥ ದಾರುಣ ಸ್ಥಿತಿ ಇನ್ನೂ ಬಂದಿಲ್ಲ: ವರುಣಾ ಮತ್ತು ಶಿಕಾರಿಪುರ ಕ್ಷೇತ್ರ​ಗ​ಳಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಗೆ ಎಲ್ಲಿಯೇ ಆಗಲಿ ಹೊಂದಾಣಿಕೆ ಮಾಡಿಕೊಳ್ಳುವ ದಾರುಣ ಪರಿಸ್ಥಿತಿ ಬಂದಿಲ್ಲ. ಇನ್ನು ನನಗಾಗಲಿ, ನಮ್ಮ ತಂದೆ ಬಿ.ಎಸ್‌. ಯಡಿಯೂರಪ್ಪ ಅವರಿಗೂ ಬಂದಿಲ್ಲ. 2004ರ ಚುನಾವಣೆ ಸಂದರ್ಭದಲ್ಲಿ ಯಾರು ಅಭ್ಯರ್ಥಿ ಎಂಬುದೇ ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಸ್ವಾಭಿಮಾನಿ ಮತದಾರರು ಸುಮಾರು 46,000ಕ್ಕೂ ಅಧಿಕ ಮತಗಳ ಅಂತರದಿಂದ ಬಿ.ಎಸ್‌. ಯಡಿಯೂರಪ್ಪ ಅವರನ್ನು ವಿಜಯಿಶಾಲಿಯನ್ನಾಗಿ ಮಾಡಿದ್ದರು.

ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ: ಡಿ.ಕೆ.ಶಿವಕುಮಾರ್‌

ಉಪಚುನಾವಣೆ ನಡೆದ ಸಂದರ್ಭದಲ್ಲಿ ಬಿ.ವೈ. ರಾಘವೇಂದ್ರ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ಇಡೀ ಕ್ಯಾಬಿನೆಟ್‌ ಶಿಕಾರಿಪುರಕ್ಕೆ ಬಂದು ತಾಲೂಕಿನಾದ್ಯಂತ ಪ್ರಚಾರ ಮಾಡಿತ್ತು. ಶಿಕಾರಿಪುರದಲ್ಲಿ ಹಣ, ಹೆಂಡದ ಹೊಳೆ ಹರಿಸಿದ್ದರೂ ಅದ್ಯಾವುದಕ್ಕೂ ಬೆಲೆ ಕೊಡದೇ ಕ್ಷೇತ್ರದ ಮತದಾರರು ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದರು. ಹೀಗಾಗಿ ಹೊಂದಾಣಿಕೆ ರಾಜಕೀಯದ ಪ್ರಶ್ನೆಯೇ ಉದ್ಭವಿಸದು. ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ, ಅಭಿವೃದ್ಧಿ ಕೆಲಸವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.