ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್‌, ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ. ಇದಕ್ಕೆ ಮತದಾರರು ಮೇ 10ರಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ವಿರುದ್ಧವಾಗಿ ಮತ ನೀಡುವ ಮೂಲಕ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. 

ಬಂಗಾರಪೇಟೆ (ಏ.30): ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್‌, ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ. ಇದಕ್ಕೆ ಮತದಾರರು ಮೇ 10ರಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ವಿರುದ್ಧವಾಗಿ ಮತ ನೀಡುವ ಮೂಲಕ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶಬಾಬು ಪರ ಮತಯಾಚನೆ ಮಾಡಲು ಪಟ್ಟಣಕ್ಕೆ ಆಗಮಿಸಿದ ಕುಮಾರಸ್ವಾಮಿ ಬಸ್‌ ನಿಲ್ದಾಣದಿಂದ ಬೃಹತ್‌ ರೋಡ್‌ ಶೋ ನಡೆಸಿ, ಬಳಿಕ ಕೋಲಾರ ಮುಖ್ಯ ರಸ್ತೆಯಲ್ಲಿ ಕಾರ‍್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲ್ಲೇಶ ಬಾಬುಗೆ ಬೆಂಬಲ ನೀಡಿ: ಸ್ಥಳೀಯ ಕಾಂಗ್ರೆಸ್‌ ಶಾಸಕರ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಗಾಳಿಯಲ್ಲಿ ನಮ್ಮ ಅಭ್ಯರ್ಥಿ ಮಲ್ಲೇಶಬಾಬು ಶಾಸಕರಾಗುವ ಲಕ್ಷಣಗಳು ಕಾಣುತ್ತಿದೆ ಇದಕ್ಕೆ ನೀವು ಬೆಂಬಲ ನೀಡಬೇಕೆಂದರು. ಲೋಕಸಭೆ ಚನಾವಣೆಯಲ್ಲಿ 7ಬಾರಿ ಗೆದ್ದಿದ್ದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್‌ ನಾಯಕರು. ಬಿಜೆಪಿಯೊಂದಿಗೆ ಅನೈತಿಕ ಒಪ್ಪಂದ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಮಾಡಿದರು. ಈಗ ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಲು ಮತ್ತೆ ಕಾಂಗ್ರೆಸ್‌, ಬಿಜೆಪಿ ಒಂದಾಗಿವೆ. ಇದಕ್ಕೆ ಮತದಾರರು ಅವಕಾಶ ನೀಡದೆ ಕುತಂತ್ರಿಗಳಿಗೆ ಪ್ರತಿ ತಂತ್ರ ಮಾಡಿ ಸೋಲಿಸಿ ಎಂದರು ಕರೆ ನೀಡಿದರು.

ವರುಣದಲ್ಲಿ ಅಭಿವೃದ್ಧಿ ಇಬ್ಬರೂ ನೋಡೋಣ ಬನ್ನಿ: ಸಿದ್ದುಗೆ ಸೋಮಣ್ಣ ಸವಾಲ್‌

ಪಂಚರತ್ನ ಅನುಷ್ಠಾನಕ್ಕೆ ಬೆಂಬಲಿಸಿ: ಬಡವರ ಮಕ್ಕಳಿಗೆ ಶೈಕ್ಷಣಿಕ ವಲಯದಲ್ಲಿ ಸಮಾನ ಶಿಕ್ಷಣ ಇಲ್ಲ,ಆಸ್ಪತ್ರೆಗಳಲ್ಲಿ ಬಡವ ಶ್ರೀಮಂತ ಭೇದಭಾವದಿಂದ ಬಳಲುವಂತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಂಚರತ್ನ ಯೋಜನೆ ರೂಪಿಸಲಾಗಿದೆ ಇದನ್ನು ಅನುಷ್ಠಾನಕ್ಕಾಗಿ ಈ ಬಾರಿ ಜೆಡಿಎಸ್‌ಗೆ ಅಧಿಕಾರ ನೀಡಿ ನಂತರ ಬದಲಾವಣೆಯ ಆಡಳಿತ ನೋಡಿ ಎಂದರು.

ಜಿಲ್ಲೆಗೆ ಕುಡಿಯುವ ನೀರು: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕೋಲಾರ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಿಕೊಡುವೆ ಎಂದು ಭರವಸೆ ನೀಡಿದರು. ಎತ್ತಿನಹೊಳೆ ಯೋಜನೆಯ ಹೆಸರಲ್ಲಿ ಹಣ ತಿಂದರೆ ವಿನಃ ಯೋಜನೆ ಮಾತ್ರ ಕಾರ‍್ಯಗತವಾಗಿಲ್ಲ. ಡಿಸಿಸಿ ಬ್ಯಾಂಕನ್ನು ಕಾಂಗ್ರೆಸ್‌ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಖಚಿತ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಮೀಕ್ಷೆಗಳು ರಾಷ್ಟ್ರೀಯ ಪಕ್ಷಗಳ ಪರ ಇದೆ. ಅದು ಹಣ ಕೊಟ್ಟು ಮಾಡಿಸಲಾದ ಸಮೀಕ್ಷೆ. ಯಾರೂ ಸಮೀಕ್ಷೆಗಳನ್ನು ನಂಬಬೇಡಿ ಎಂದರು.

ಪಂಚ​ರತ್ನ ಯೋಜ​ನೆ​ಗಳ ಅನುಷ್ಠಾನಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು: ಎಚ್‌.ಡಿ.​ದೇ​ವೇ​ಗೌಡ

ಈ ವೇಳೆ ಅಭ್ಯರ್ಥಿ ಎಂ.ಮಲ್ಲೇಶಬಾಬು,ಎಂಎಲ್‌ಸಿ ಇಂಚರ ಗೋವಿಂದರಾಜು, ಮಾಜಿ ಶಾಸಕ ಸಿ.ವೆಂಕಟೇಶಪ್ಪ,ಮಾಜಿ ಜಿಪಂ ಅಧ್ಯಕ್ಷೆ ಮಂಗಮ್ಮಮುನಿಸ್ವಾಮಿ,ಪಕ್ಷದ ತಾಲೂಕು ಅಧ್ಯಕ್ಷ ಮುನಿರಾಜು, ಮುಖಂಡರಾದ ವಡಗೂರು ಹರೀಶ್‌, ರಾಮಚಂದ್ರ, ಯುವ ಘಟಕದ ಅಧ್ಯಕ್ಷ ವಿಶ್ವನಾಥಗೌಡ, ಅಮರಾವತಿ ನಾಗರಾಜ್‌, ವೈ.ವಿ.ರಮೇಶ್‌, ಹನುಮಂತು ಮತ್ತಿತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.