ಬಿಜೆಪಿ ಶಾಸಕರೆಲ್ಲ ಬಿ.ಎಸ್‌. ಯಡಿಯೂರಪ್ಪ ಅವರ ಹಿಂದೆ ಹೋಗಿದ್ದರಿಂದ ಕುಪಿತರಾದ ಬಿ.ಎಲ್‌ ಸಂತೋಷ್‌ ನಾನೇ ಲೀಡರ್‌ ಎಂಬ ಸಂದೇಶ ರವಾನಿಸಲು ಸಭೆ ನಡೆಸಿದ್ದಾರೆ. ಅದೇನೇ ಮಾಡಿದರೂ ಬಿಜೆಪಿಗೆ ಮತ್ತೆ ಜೀವ ಬರುವುದಿಲ್ಲ ಎಂದು ಕುಟುಕಿದ ಕಾಂಗ್ರೆಸ್‌ 

ಬೆಂಗಳೂರು(ಸೆ.01): ‘ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ, ಬಿಜೆಪಿ ಶಾಸಕರ ಸಭೆ ಕರೆಯಲು ಶಾಸಕಾಂಗ ಪಕ್ಷದ ನಾಯಕನಿಲ್ಲ. ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ.ಎಲ್‌. ಸಂತೋಷ್‌ ಸಭೆ ನಡೆಸುವ ಸ್ಥಿತಿಗೆ ಬಿಜೆಪಿ ಬಂದಿದೆಯೆಂದರೆ ಅದೆಷ್ಟು ರಾಜಕೀಯ ದಿವಾಳಿಯಾಗಿರಬಹುದು’ ಎಂದು ರಾಜ್ಯ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಶಾಸಕರು ಯಡಿಯೂರಪ್ಪ ಅವರ ಸಭೆಗೆ ಹೋದ ಬೆನ್ನಲ್ಲೇ ಕುಪಿತರಾಗಿ ಬಿ.ಎಲ್‌. ಸಂತೋಷ್‌ ಸಭೆ ನಡೆಸಿದ್ದಾರೆ. ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆಯುವುದಕ್ಕೆ ಮಾತ್ರ ಈ ಸಭೆ ಸೀಮಿತ’ ಎದು ಟೀಕಿಸಿದೆ.

ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ 'ಬಾಂಬೆ ಬಾಯ್ಸ್' ಅನ್ನಬೇಡಿ: ಬಿ.ಎಲ್‌.ಸಂತೋಷ್‌

ಇತ್ತೀಚಿಗೆ ಬಿಜೆಪಿಯ ಶಾಸಕರು ಯಡಿಯೂರಪ್ಪನವರ ಮನೆಯಲ್ಲಿ ಸಭೆ ಸೇರಿ ನೀವೇ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿ ಶಾಸಕರೆಲ್ಲ ಬಿ.ಎಸ್‌. ಯಡಿಯೂರಪ್ಪ ಅವರ ಹಿಂದೆ ಹೋಗಿದ್ದರಿಂದ ಕುಪಿತರಾದ ಬಿ.ಎಲ್‌ ಸಂತೋಷ್‌ ನಾನೇ ಲೀಡರ್‌ ಎಂಬ ಸಂದೇಶ ರವಾನಿಸಲು ಸಭೆ ನಡೆಸಿದ್ದಾರೆ. ಅದೇನೇ ಮಾಡಿದರೂ ಬಿಜೆಪಿಗೆ ಮತ್ತೆ ಜೀವ ಬರುವುದಿಲ್ಲ ಎಂದು ಕಾಂಗ್ರೆಸ್‌ ಕುಟುಕಿದೆ.