ಹಾಲಿ ಶಾಸಕರ ನಿಧನದಿಂದ ತೆರವಾಗಿದ್ದ ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಮತ್ತೊಮ್ಮೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವಿನ ಜಿದ್ದಾಜಿದ್ದಿಗೆ ವೇದಿಕೆ ಸೃಷ್ಟಿಯಾಗಿದೆ.

ಬೆಂಗಳೂರು : ಹಾಲಿ ಶಾಸಕರ ನಿಧನದಿಂದ ತೆರವಾಗಿದ್ದ ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಮತ್ತೊಮ್ಮೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವಿನ ಜಿದ್ದಾಜಿದ್ದಿಗೆ ವೇದಿಕೆ ಸೃಷ್ಟಿಯಾಗಿದೆ.

ಈ ಉಪಚುನಾವಣೆಗೆ ಇದೇ ತಿಂಗಳ 16ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಮಾ.23 ಕೊನೆಯ ದಿನವಾಗಿದೆ. ಬರುವ ಏ.9ರಂದು ಮತದಾನ ನಡೆಯಲಿದ್ದು, ಫಲಿತಾಂಶಕ್ಕಾಗಿ ಹೆಚ್ಚೂ ಕಡಮೆ ಒಂದು ತಿಂಗಳ ಕಾಲ ಕಾಯಬೇಕಾಗುತ್ತದೆ. ಮೇ 4ರಂದು ಮತ ಎಣಿಕತೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಭಾನುವಾರದಿಂದಲೇ ಸಂಬಂಧಪಟ್ಟ ಎರಡು ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾಗಿದ್ದ ಎಚ್‌.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಕ್ರಮವಾಗಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳು ತೆರವಾಗಿವೆ.

ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 2,59,260 ಮತದಾರರಿದ್ದಾರೆ. ಈ ಪೈಕಿ ಪುರುಷರು 1,26,761, ಮಹಿಳೆಯರು 1,32,476, ಇತರರು 23. ಇದರಲ್ಲಿ 4,188 ಯುವ ಮತದಾರರು ಹಾಗೂ 38 ಮಂದಿ 100 ವರ್ಷ ದಾಟಿದ ಹಿರಿಯ ಮತದಾರರಿದ್ದಾರೆ.​

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,31,683. ಪುರುಷರು 1,13,654, ಮಹಿಳೆಯರು 1,17,986, ಇತರರು 43. ಈ ಪೈಕಿ 2,774 ಯುವ ಮತದಾರರು ಹಾಗೂ 44 ಮಂದಿ 100 ವರ್ಷ ದಾಟಿದ ಹಿರಿಯರಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಎರಡೂ ಕ್ಷೇತ್ರಗಳಲ್ಲಿ ಒಟ್ಟು 5,151 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ.​ ಬಾಗಲಕೋಟೆಯಲ್ಲಿ 319 ಮತ್ತು ದಾವಣಗೆರೆ ದಕ್ಷಿಣದಲ್ಲಿ 284 ಸೇರಿದಂತೆ ಒಟ್ಟು 603 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.​ ಎಲ್ಲ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿಪ್ಯಾಟ್ ಬಳಸಲಾಗುವುದು. ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯಂತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ.

ಚುನಾವಣಾ ವೇಳಾಪಟ್ಟಿ​ ಅಧಿಸೂಚನೆ ಪ್ರಕಟಣೆ- ಮಾ.16​

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಮಾ.23​

ಮತದಾನದ ದಿನಾಂಕ- ಏ.9

ಮತ ಎಣಿಕೆ ಮತ್ತು ಫಲಿತಾಂಶ- ಮೇ 4