Asianet Suvarna News Asianet Suvarna News

ಕಾಂಗ್ರೆಸ್‌ ಹಿರಿಯ ನಾಯಕ ಬ್ರಿಜೇಶ್‌ ಕಾಳಪ್ಪ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

ಕಾಂಗ್ರೆಸ್ ನಿಂದ 'ಭಾರತ್ ಜೋಡೋ ಯಾತ್ರೆ ಆರಂಭವಾಗಿದ್ರೆ, ಇತ್ತ ಕರ್ನಟಕದಲ್ಲೂ ಸಹ ಒಬ್ಬರಿಂದೊಬ್ಬರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈಗಾಗಲೇ ಕೈ ಗೆ ಗುಡ್‌ ಬೈ ಹೇಳಿದ್ದ ಹಿರಿಯ ನಾಯಕ ಎಎಪಿಗೆ ಸೇರ್ಪಡೆಯಾಗಿದ್ದಾರೆ.

Karnataka Congress Senior Leader Brijesh Kalappa joins AAP rbj
Author
First Published Sep 5, 2022, 5:33 PM IST

ಬೆಂಗಳೂರು, (ಸೆಪ್ಟೆಂಬರ್.05): ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪರವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.

ಇಂದು(ಸೆ.05) ಬೆಂಗಳೂರಿನ ಹೊಟೇಲ್‌ ಪರಾಗ್‌ನಲ್ಲಿ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಎಎಪಿಯ ಕರ್ನಾಟಕ ಉಸ್ತುವಾರಿ ದಿಲೀಪ್‌ ಪಾಂಡೆರವರು ಬ್ರಿಜೇಶ್‌ ಕಾಳಪ್ಪ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಂಡರು.

ಭಾಸ್ಕರ್‌ ರಾವ್‌ ನಂತರ ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ: ಕೇಜ್ರಿವಾಲ್‌ ಪಕ್ಷದ ಕಡೆ ವಾಲ್ತಾರ ಕಿಮ್ಮನೆ?

AAP ಸೇರ್ಪಡೆ ಬಳಿಕ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ ದುರಾಡಳಿತ ನೀಡುತ್ತಿರುವ ಬಿಜೆಪಿಗೆ ಸಡ್ಡು ಹೊಡೆಯುವ ಸಾಮರ್ಥ್ಯವು ಆಮ್‌ ಆದ್ಮಿ ಪಾರ್ಟಿಗಿದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಎಎಪಿ ಜಯಗಳಿಸಿ ಅಧಿಕಾರ ಹಿಡಿದರೆ ಮಾತ್ರ ದೇಶದ ಭವಿಷ್ಯ ಬಲಗೊಳ್ಳಲಿದೆ ಎಂದರು.

ಇದೇ ಕರ್ನಾಟಕ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ದೇಶದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಹಂಬಲವಿರುವ ನಾಯಕರಲ್ಲಿ ಬ್ರಿಜೇಶ್‌ ಕಾಳಪ್ಪ ಒಬ್ಬರು. ರಾಜಕೀಯ ಹಾಗೂ ಆಡಳಿತದಲ್ಲಿ ಆಮ್‌ ಆದ್ಮಿ ಪಾರ್ಟಿಯು ಬದಲಾವಣೆ ತಂದಿರುವುದನ್ನು ಮನಗಂಡು ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜನಪರ ಕಾಳಜಿಯಿರುವವರಿಗೆ ಹಾಗೂ ದೇಶದ ಭವಿಷ್ಯಕ್ಕಾಗಿ ದುಡಿಯುವ ಹಂಬಲ ಇರುವವರಿಗೆ ಎಎಪಿಯು ಉತ್ತಮ ವೇದಿಕೆಯಾಗಿದ್ದು, ಇದನ್ನು ಇನ್ನಷ್ಟು ನಾಯಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಜ್ಜನ ನಾಯಕರನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಂತಹ ಪಕ್ಷಗಳು ಮೂಲೆಗುಂಪು ಮಾಡುತ್ತಿವೆ. ಅವುಗಳಿಗೆ ಕಮಿಷನ್‌ ರೂಪದಲ್ಲಿ ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆಯುವ ನಾಯಕರು ಬೇಕೇ ವಿನಹ ಪ್ರಾಮಾಣಿಕರು ಬೇಡ. ಹಣಬಲ ಹಾಗೂ ತೋಳುಬಲವಿಲ್ಲದ ಒಳ್ಳೆಯ ಜನರನ್ನು ಅಧಿಕಾರದಿಂದ ದೂರವಿಡಲು ಆ ಪಕ್ಷಗಳ ನಾಯಕರು ಸದಾ ಯೋಜನೆ ರೂಪಿಸುತ್ತಿರುತ್ತಾರೆ. ಇದರಿಂದಾಗಿ ಅನೇಕ ಸಜ್ಜನ ರಾಜಕಾರಣಿಗಳು ಆಮ್‌ ಆದ್ಮಿ ಪಾರ್ಟಿಯತ್ತ ಮುಖ ಮಾಡುತ್ತಿದ್ದಾರೆ. ಎಎಪಿಯ ಸತ್ಯ-ನಿಷ್ಠೆಯ ರಾಜಕಾರಣ ಹಾಗೂ ಕೊಟ್ಟ ಮಾತಿಗೆ ತಪ್ಪದಿರುವ ಗುಣವು ಒಳ್ಳೆಯ ಮನಸ್ಸುಗಳನ್ನು ಆಕರ್ಷಿಸುತ್ತಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಬ್ರಿಜೇಶ್‌ ಕಾಳಪ್ಪರವರು ಕಾಂಗ್ರೆಸ್‌ ನಾಯಕರಾಗಿ, ಅದರ ರಾಷ್ಟ್ರೀಯ ವಕ್ತಾರರಾಗಿ, ಸುಪ್ರೀಂಕೋರ್ಟ್‌ ವಕೀಲರಾಗಿ, ಪತ್ರಕರ್ತರಾಗಿ, ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ, ಹರಿಯಾಣ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ. ಕಾವೇರಿ, ಕೃಷ್ಣ, ಮಹದಾಯಿ ನದಿಗಳ ನೀರು ಹಂಚಿಕೆ ವಿವಾದಗಳಿಗೆ ಸಂಬಂಧಿಸಿ ಕರ್ನಾಟಕದ ಪರ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿದ್ದಾರೆ. ಯಾವುದೇ ವಿಚಾರವನ್ನು ತಕ್ಷಣ ಗ್ರಹಿಸಿ, ಸೂಕ್ಷ್ಮ ವಿವೇಚನೆಯೊಂದಿಗೆ ಸತ್ಯಾಂಶವನ್ನು ಹೊರತೆಗೆಯುವ ವಿಶೇಷ ಗುಣವನ್ನು ಬ್ರಿಜೇಶ್‌ ಕಾಳಪ್ಪ ಹೊಂದಿದ್ದಾರೆ" ಎಂದು ಪೃಥ್ವಿ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Follow Us:
Download App:
  • android
  • ios