ಅಫಜಲ್ಪುರ ಮತಕ್ಷೇತ್ರದಿಂದ 25 ಸಾವಿರ ಸದಸ್ಯತ್ವವನ್ನು ನೊಂದಣಿ ಗುರಿ ಪ್ರತಿ ಬೂತ್‌ದಿಂದ 200 ಜನರನ್ನು ಸದಸ್ಯತ್ವ ನೋಂದಣಿ  ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ 

ಅಫಜಲ್ಪುರ(ಮಾ.23): ಇಂದಿನ ದಿನಗಳಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಮುಂದುವರೆದಿದ್ದರಿಂದ ಕಾಂಗ್ರೆಸ್‌ ಪಕ್ಷವು ಡಿಜಿಟಲ್‌ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಫಜಲ್ಪುರ ಮತಕ್ಷೇತ್ರದಿಂದ 25 ಸಾವಿರ ಸದಸ್ಯತ್ವವನ್ನು ನೊಂದಣಿ ಮಾಡುವ ಗುರಿ ಹೊಂದಲಾಗಿದೆ ಇದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ್‌ ಹೇಳಿದರು.

ಅವರು, ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಡಿಜಿಟಲ್‌ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮತಕ್ಷೇತ್ರದಲ್ಲಿ ಒಟ್ಟು 250 ಬೂತ್‌ಗಳಿದ್ದು ಅದರಲ್ಲಿ ಪ್ರತಿ ಬೂತ್‌ದಿಂದ 200 ಜನರನ್ನು ಸದಸ್ಯತ್ವ ನೋಂದಣಿ ಮಾಡುವ ಗುರಿಯನ್ನು ಹೊಂದಬೇಕು.

ಕಾಂಗ್ರೆಸ್‌ ಸದಸ್ಯತ್ವದಲ್ಲಿ ಹಿನ್ನಡೆ ಮೋಟಮ್ಮ, ಪುತ್ರಿಗೆ ಡಿಕೆಶಿ ಕ್ಲಾಸ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಮಾಡಲಾಗುತ್ತಿದೆ. ಕಾಂಗ್ರೆಸ್‌ ಪಕ್ಷ ಆಂದೋಲನದ ಮೂಲಕ ಹುಟ್ಟಿರುವ ಪಕ್ಷವಾಗಿದೆ. ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ಜೀವನ ಸಾಗಿಸಲು ಕಾಂಗ್ರೆಸ್‌ ಪಕ್ಷ ಶ್ರಮಿಸಿದೆ. ಎಲ್ಲ ವರ್ಗದ ಜನರನ್ನು ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್‌. ಆದರೆ ಬಿಜೆಪಿ ಪಕ್ಷದವರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ದೇಶವನ್ನು ಒಡೆಯುವ ಹುನ್ನಾರ ನಡೆಸುತ್ತಿದೆ. ಅಭಿವೃದ್ಧಿ ಕೆಲಸ ಮಾಡದೆ ಭಾವನಾತ್ಮಕವಾಗಿ ವಿಷಯಗಳನ್ನು ಮುಗ್ಧ ಜನರ ಮನಸ್ಸಿನಲ್ಲಿ ಬಿತ್ತಿ ಮತದಾನ ಪಡೆದುಕೊಂಡು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದಕ್ಕೆ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಸರಕಾರ ಶೇ.40ರಷ್ಟುಕಮಿಷನ್‌ ತೆಗೆದುಕೊಳ್ಳುತ್ತಿದೆ ಎಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ 2009ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಅವರು ಸಾಲ ಮನ್ನಾ ಮಾಡಿದ್ದಾರೆ.

ಚಿಕ್ಕಮಗಳೂರು ಕಾಂಗ್ರೆಸ್ ಸದಸ್ಯತ್ವದಲ್ಲಿ ಕಳಪೆ ಸಾಧನೆ, ತಾಯಿ, ಮಗಳಿಗೆ ಡಿಕೆಶಿ ಕ್ಲಾಸ್

ಉದ್ಯೋಗ ಖಾತ್ರಿ ಯೋಜನೆ, ಅನ್ನಭಾಗ್ಯ ಯೋಜನೆ ಇಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ಜನರ ನೆರವಿಗೆ ಕಾಂಗ್ರೆಸ್‌ ಪಕ್ಷ ಸದಾ ಕಾಲ ಬಂದಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಅನ್ಯಾಯ ಮಾಡುತ್ತಿದೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ನೇರವಾಗಿ ಕೇಂದ್ರ ಸರ್ಕಾರ ಕಾರಣವಾಗಿದೆ.ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಆಡಳಿತದಲ್ಲಿ ಪಾರದರ್ಶಕತೆ ಇರಲು ಕಾನೂನು ಜಾರಿ ಮಾಡಿದ್ದೇವೆ ಇಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿರುವ ಕಾಂಗ್ರೆಸ್‌ ಪಕ್ಷದ ಬಹುದೊಡ್ಡ ಇತಿಹಾಸ ಇದೆ.

ಕಾಂಗ್ರೆಸ್‌ ಯಾವತ್ತೂ ಸಹ ಅಧಿಕಾರಕ್ಕೆ ಅಂಟಿಕೊಂಡಿರುವ ಪಕ್ಷವಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಎಲ್ಲ ಸಮುದಾಯದ ಜನರ ಒಳತಿಗಾಗಿ, ಅಭಿವೃದ್ಧಿಗಾಗಿ ಶ್ರಮಿಸಿ ತ್ಯಾಗ ಬಲಿದಾನ ಮಾಡಿರುವ ಪಕ್ಷವಾಗಿದೆ. ಆದರೆ, ಇತ್ತೀಚಿಗೆ ಹುಟ್ಟಿರುವ ಕೆಲ ಪಕ್ಷಗಳು ಈ ದೇಶಕ್ಕೆ ನಿಮ್ಮ ಕೊಡುಗೆ ಏನು ಎಂದು ನಮಗೆ ಪಾಠ ಮಾಡಲು ಬರುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಅಭಿವೃದ್ಧಿ ಮುಖ್ಯವಲ್ಲ ಕೇವಲ ಅಧಿಕಾರ ಮಾತ್ರ ಮುಖ್ಯವಾಗಿದೆ ಹೀಗಾಗಿ ಕಳೆದ ಮೂರು ವರ್ಷಗಳ ಹಿಂದೆ ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದು ಸದ್ಯ ಈಗ ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ರಾಜಶೇಖರ್‌ ಪಾಟೀಲ್‌, ಶರಣು ಕುಂಬಾರ, ಅಂಬರೀಶ್‌ ಬುರಲಿ, ಶ್ರೀಧರ ರಾಠೋಡ, ಮಾಜೀದ ಪಟೇಲ್‌, ಮಳೇಂದ್ರ ಡಾಂಗೆ, ನಾಗರಾಜ ರಾಂಪುರ, ಸಂಗಮೇಶ ಅಂಜುಟಗಿ, ಪ್ರೀತಂ ಚವ್ಹಾಣ, ವಿರೇಂದ್ರ ಮ್ಯಾಳೇಸಿ, ಪ್ರವೀಣ್‌ ಕಲ್ಲೂರ, ಸಿದ್ದು ಚವಡಾಪುರ ಸೇರಿದಂತೆ ಇತರರಿದ್ದರು.