ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ನಾಳೆ ರಾಹುಲ್ ಗಾಂಧಿ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಬಳಿಕ ಖರ್ಗೆ ಕರ್ನಾಟಕದ ನೂತನ ಸಿಎಂ ಘೋಷಣೆ ಮಾಡುವ ಸಾಧ್ಯತೆ ಇದೆ.
ನವದೆಹಲಿ(ಮೇ.16): ಕರ್ನಾಟಕ ಸಿಎಂ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ಗೆ ಇನ್ನಿಲ್ಲದ ತಲೆನೋವು ತಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯ ಜೊತೆ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಆದರೆ ಒಮ್ಮತ ಮೂಡದ ಕಾರಣ ನಾಳೆ ರಾಹುಲ್ ಗಾಂಧಿ ಜೊತೆ ಮಲ್ಲಿಕಾರ್ಜುನ ಖರ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಈ ಸಭೆ ಬಳಿಕ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೂತನ ಸಿಎಂ ಹೆಸರು ಘೋಷಣೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕದಲ್ಲಿರುವ ಸದ್ಯದ ಪರಿಸ್ಥಿತಿಗೆ ನಾನೇ ಸೂಕ್ತ. ಹೀಗಾಗಿ ಸಿಎಂ ಸ್ಥಾನವನ್ನು ತನಗೆ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಬಿಗಿಗೊಳಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಜೊತೆಗಿನ ಸಭೆಯಲ್ಲಿ ತಮಗೆ ಸಿಎಂ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಹಿಂದ ಮತಗಳಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅಹಿಂದ ಮತಗಳು ತನ್ನಿಂದಲೇ ಬಂದಿದೆ. ಹಲವು ಸಮುದಾಯಗಳು ಸಿದ್ದರಾಮಯ್ಯ ಸಿಎಂ ಎಂದೇ ಮತ ಹಾಕಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಮೇಲೆ ಸಿಬಿಐ ಕೇಸ್ಗಳು ಪ್ರಗತಿಯಲ್ಲಿದೆ. ಇದೀಗ ಸಿಎಂ ಹುದ್ದೆ ಡಿಕೆ ಶಿವಕುಮಾರ್ಗೆ ನೀಡಿದರೆ, ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಗಲಿದೆ ಎಂದು ಸಿದ್ದರಾಮಯ್ಯ ತಮ್ಮ ವಾದ ಮಂಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ನನ್ನ ಮುಖ್ಯಮಂತ್ರಿ ಮಾಡಿ, ಇಲ್ಲಾ ನೀವೇ ಸಿಎಂ ಸ್ಥಾನ ಅಲಂಕರಿಸಿ; ಖರ್ಗೆಗೆ ಎರಡು ಆಯ್ಕೆ ನೀಡಿದ ಡಿಕೆಶಿ!
5 ವರ್ಷ ಸಂಪೂರ್ಣ ಅಧಿಕಾರ ನೀಡಿ. ತನಗೆ ಹೆಚ್ಚಿನ ಶಾಸಕರ ಬೆಂಬಲ ಇದೆ. ಸಿಎಂ ಸ್ಥಾನ ನೀಡಿದರೆ 5 ವರ್ಷ ಕೊಡಬೇಕು. ಇಲ್ಲದಿದ್ದರೆ ಸಿಎಂ ಸ್ಥಾನವೇ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಡಿಕೆ ಶಿವಕುಮಾರ್, ತನಗೆ ಸಿಎಂ ಪಟ್ಟ ಕೊಡುವುದಾದರೆ ಕೊಡಿ, ಇಲ್ಲದಿದ್ದರೆ ತಾನು ಶಾಸಕನಾಗಿಯೇ ಇರುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ. ನಾನೂ ಮೂಲ ಕಾಂಗ್ರೆಸ್ಸಿಗ. ಹೊರಗಿನಿಂದ ಬಂದವರು ಅಧಿಕಾರ ಅನುಭವಿಸಿದ್ದಾರೆ. ಆದರೆ ಪಕ್ಷ ಸಂಘಟನೆ ಮಾಡಿಲ್ಲ. ನಾನು ಇದುವರೆಗೂ ಯಾವುದೇ ಅಧಿಕಾರಕ್ಕಾಗಿ ಪಟ್ಟು ಹಿಡಿದಿಲ್ಲ. ಈ ಬಾರಿ ಪಕ್ಷವನ್ನು ಸಂಘಟಿಸಿ ಗೆಲ್ಲಿಸಿದ್ದೇನೆ. ಹೀಗಾಗಿ ಸಿಎಂ ಪಟ್ಟ ತನಗೆ ನೀಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದರು.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ರಾಹುಲ್ ಗಾಂಧಿ, ಕರ್ನಾಟಕ ಚುನಾವಣಾ ಉಸ್ತುವಾರಿ, ವೀಕ್ಷಕರು ಸೇರಿದಂತೆ ಹಲವು ಪ್ರಮುಖ ನಾಯಕರ ಜೊತೆ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ್ದರು. ಬಳಿಕ ಡಿಕೆ ಶಿವಕುಮಾರ್ ಜೊತೆ 50 ನಿಮಿಷ ಕಾಲ ಸಭೆ ನಡೆಸಿದ್ದರು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.
ಇಂದು ಕೂಡ ಸಿಎಂ ಯಾರು ಅನ್ನೋದು ಅಂತಿಮವಾಗಿಲ್ಲ. ಸಿದ್ದು ಹಾಗೂ ಡಿಕೆಶಿ ಅಭಿಪ್ರಾಯವನ್ನು ನಾಳ ರಾಹುಲ್ ಗಾಂಧಿ ಜೊತೆ ಹಂಚಿಕೊಳ್ಳಲಿದ್ದಾರೆ. ಬಳಿಕ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಸಿಎಂ ನಿರ್ಧಾರ ಮಾಡಲಿದೆ. ಈ ನಿರ್ಧಾರ ಬಳಿಕ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಘೋಷಣೆ ಮಾಡುವ ಸಾಧ್ಯತೆ ಇದೆ.
