Asianet Suvarna News Asianet Suvarna News

ಬೆಲ್ಲದ್‌ ಮನೆಯಲ್ಲಿ ಉಪಾಹಾರ ಸವಿದ ಬೊಮ್ಮಾಯಿ, ಭಾರೀ ಕುತೂಹಲ

* ಬಿಎಸ್‌ವೈ ಪದತ್ಯಾಗ ಬಳಿಕ ಸಿಎಂ ರೇಸ್‌ನಲ್ಲಿದ್ದ ಶಾಸಕ ಬೆಲ್ಲದ್

* ಬೆಲ್ಲದ್‌ ಮನೆಯಲ್ಲಿ ಉಪಾಹಾರ ಸವಿದ ಬೊಮ್ಮಾಯಿ: ಕುತೂಹಲ

* ರಾಜಕೀಯ ಚರ್ಚೆಯಾಗಿಲ್ಲ: ಸಿಎಂ, ಬೆಲ್ಲದ್‌ ಸ್ಪಷ್ಟನೆ

Karnataka CM Basavaraj Bommai Takes Breakfast at BJP MLA Arvind Belladd House at Hubli pod
Author
Bangalore, First Published Apr 25, 2022, 4:55 AM IST

ಹುಬ್ಬಳ್ಳಿ(ಏ.25): ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ಚರ್ಚೆ ಜೋರಾಗಿರುವಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ ಮನೆಗೆ ಭೇಟಿ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಭಾನುವಾರ ಗೋಕುಲ ರಸ್ತೆಯ ಇಂದ್ರಪ್ರಸ್ಥ ನಗರದಲ್ಲಿರುವ ಬೆಲ್ಲದ ಮನೆಗೆ ಆಗಮಿಸಿದ ಮುಖ್ಯಮಂತ್ರಿ ಉಪಾಹಾರ ಸೇವಿಸಿದ ಆನಂತರ ಮುಕ್ಕಾಲು ಗಂಟೆಗೂ ಹೆಚ್ಚಿನ ಕಾಲ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಹೊರಬಂದ ಬೊಮ್ಮಾಯಿ, ‘ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಬಹಳ ದಿನಗಳಿಂದ ಬೆಲ್ಲದ ಅವರ ಮನೆಗೆ ಬಂದಿರಲಿಲ್ಲ. ಹೀಗಾಗಿ ಭೇಟಿ ನೀಡಿ ವ್ಯವಹಾರ ಸೇರಿ ಕೌಟುಂಬಿಕ ಚರ್ಚೆ ನಡೆಸಿದ್ದೇವೆ’ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರವಿಂದ ಬೆಲ್ಲದ, ‘ಲೋಕಾಭಿರಾಮವಾಗಿ ಮಾತನಾಡಿದ್ದೇವೆ. ಮುಖ್ಯಮಂತ್ರಿ ಅವರ ಪತ್ನಿ ಕೂಡ ಆಗಮಿಸುವರಿದ್ದರು. ಕೊನೆ ಕ್ಷಣದಲ್ಲಿ ಭೇಟಿ ಸಾಧ್ಯವಾಗಿಲ್ಲ ಅಷ್ಟೇ. ಈ ಭೇಟಿಗೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ನಾನು, ನನ್ನ ಪತ್ನಿ ಹಾಗೂ ಮುಖ್ಯಮಂತ್ರಿಗಳು ಸೇರಿ ಮೂವರು ಕೆಲ ಹೊತ್ತು ಹರಟಿದ್ದೇವೆ’ ಎಂದರು.

ಯಡಿಯೂರಪ್ಪ ಪದತ್ಯಾಗದ ಬಳಿಕ ಮುಖ್ಯಮಂತ್ರಿ ಪಟ್ಟದ ರೇಸ್‌ನಲ್ಲಿ ಬೆಲ್ಲದ್‌ ಹೆಸರು ಕೂಡ ಮುಂಚೂಣಿಯಲ್ಲಿತ್ತು. ಲಿಂಗಾಯತ ಸಮುದಾಯದ ಮುಖಂಡ ಎಂಬ ವಿಚಾರÜವೂ ಇದಕ್ಕೆ ಪುಷ್ಟಿನೀಡಿತ್ತು.

ಮುಂದಿನ ವಿಧಾನಸಭಾ ಚುನಾವಣೆ ಸಿದ್ಧತೆಗಾಗಿ ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಹಿರಿಯ ಸಚಿವರಿಂದ ರಾಜೀನಾಮೆ ಪಡೆದು, ಕಿರಿಯರಿಗೆ ಮಂತ್ರಿ ಸ್ಥಾನ ನೀಡಿ ಹೊಸ ತಂಡದೊಂದಿಗೆ ಹೆಜ್ಜೆ ಹಾಕಲು ಪಕ್ಷವು ಮುಂದಾಗಲಿದೆ ಎಂಬ ಚರ್ಚೆ ತೀವ್ರವಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೇಟಿ ಆಗಿರುವುದು ಸಂಪುಟದಲ್ಲಿ ಸಚಿವ ಸ್ಥಾನ ಅಥವಾ ಡಿಸಿಎಂ ಪಟ್ಟಬೆಲ್ಲದಗೆ ಒಲಿಯಬಹುದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.

Follow Us:
Download App:
  • android
  • ios