ಕ್ಯಾಪಿಟಲ್ ಸಭೆಯ ಕ್ಯಾಪ್ಟನ್ ಯಾರು? ಅವರನ್ ಬಿಟ್ ಇವರನ್ನ ಬಿಟ್ ಇನ್ಯಾರು?
* ಕರ್ನಾಟಕ ಮುಂದಿನ ಮುಖ್ಯಮಂತ್ರಿ ಆಯ್ಕೆ
* ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ
* ಕ್ಯಾಪಿಟಲ್ ಸಭೆಯ ಕ್ಯಾಪ್ಟನ್ ಯಾರು ಆಗ್ತಾರೆ?
ಬೆಂಗಳೂರು, (ಜು.27): ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಕ್ಯಾಪ್ಟನ್ ಯಾರು ಆಗುತ್ತಾರೆ ಉತ್ತರ ಸಿಗಲಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಜೋರಾಗಿದ್ದು, ಇಂದು (ಜು.27) ಸಂಜೆ 7 ಗಂಟೆಗೆ ರಾಜಭವನ ಹತ್ತಿರ ಇರುವ ಕ್ಯಾಪಿಟಲ್ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಹೋಟೆಲ್ನಲ್ಲಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ.
ನೂತನ ಸಿಎಂ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್: ಹೊಸ ಮುಖ್ಯಮಂತ್ರಿ ಯಾರು?
ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ವೀಕ್ಷಕರಾಗಿ ನೇಮಕವಾಗಿರುವ ಸಚಿವರಾದ ಧರ್ಮೇಂದ್ರ ಪ್ರದಾನ್ ಮತ್ತು ಕಿಶನ್ ರೆಡ್ಡಿ ಸಭೆಯಲ್ಲಿ ಭಾಗಿಯಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
ರಾಜಭವನದ ಪಕ್ಕದಲ್ಲೇ ಇರುವ ಹೋಟೆಲಿನಲ್ಲಿ ಸಭೆ ನಡೆಯಲಿರುವ ಕಾರಣ ಇಂದೇ ಪ್ರಕ್ರಿಯೆ ಮುಗಿದು ನೂತನ ಸಿಎಂ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅನುಮತಿ ಕೇಳುವ ಸಾಧ್ಯತೆಯಿದೆ.
ಇನ್ನು ಇದೇ ಕ್ಯಾಪಿಟಲ್ ಹೋಟೆಲ್ ನಲ್ಲೇ ಈ ಹಿಂದೆ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.
ಒಟ್ಟಿನಲ್ಲಿ ಇಂದಿನ ಕ್ಯಾಪಿಟಲ್ ಸಭೆಯ ಕ್ಯಾಪ್ಟನ್ ಯಾರು ಆಗುತ್ತಾರೆ ಎನ್ನವುದು ಕುತೂಹಲ ಮೂಡಿಸಿದೆ.