ಬಿಜೆಪಿ ಲೋಕಸಭಾ ಚುನಾವಣಾ ಟಿಕೆಟ್ ಪಟ್ಟಿ ಹಲವರ ಎದೆಬಡಿತ ಹೆಚ್ಚಿಸಿದೆ. ಈ ಪೈಕಿ ಪ್ರಭು ಚವ್ಹಾಣ್ ಅವರ ಆರೋಗ್ಯವೇ ಏರುಪೇರಾಗಿದೆ. ಭಗವಂತ ಖೂಬಾಗೆ ಟಿಕೆಟ್ ಘೋಷಿಸಿದ ಬಳಿಕ ಪ್ರಭು ಚವ್ಹಾಣ್ ಅಸ್ವಸ್ಥಗೊಂಡಿದ್ದಾರೆ. ಇದೀಗ ಆಸ್ಪತ್ರೆ ದಾಖಲಾಗಿದ್ದಾರೆ.

ಮುಂಬೈ(ಮಾ.14) ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿದ 2ನೇ ಪಟ್ಟಿ ಕೆಲವರಿಗೆ ನಿರಾಸೆಯಾಗಿದ್ದರೆ, ಮತ್ತೆ ಕೆಲ ಬಿಜೆಪಿ ನಾಯಕರಿಗೆ ಬಂಪರ್ ಹೊಡೆದಿದೆ. ಬೀದರ್‌ ಕ್ಷೇತ್ರದಿಂದ ಭಗವಂತ್ ಖೂಬಾಗೆ ಟಿಕೆಟ್ ಘೋಷಿಸಲಾಗಿದೆ. ಖೂಬಾಗೆ ಟಿಕೆಟ್ ಕೈತಪ್ಪಿಸಲು ಜಿಲ್ಲೆಯ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಭಾರಿ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲಾ ಪ್ರಯತ್ನದ ನಡುವೆ ಖೂಬಾಗೆ ಟಿಕೆಟ್ ನೀಡಿರುವುದು ಪ್ರಭು ಚವ್ಹಾಣ್‌ಗೆ ಬಹುದೊಡ್ಡ ಆಘಾತ ನೀಡಿದೆ. ಇದರಿಂದ ಪ್ರಭು ಚವ್ಹಾಣ್ ಆರೋಗ್ಯ ಏರುಪೇರಾಗಿದೆ. ಈ ಹಿನ್ನಲೆಯಲ್ಲಿ ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Add Asianetnews Kannada as a Preferred SourcegooglePreferred

ಭಗವಂತ್ ಖೂಬಾಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಪ್ರಭು ಚವ್ಹಾಣ್ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಶಾಕ್‌ ನಡುವೆ ಮುಂಬೈ ಪ್ರವಾಸದಲ್ಲಿದ್ದ ಪ್ರಭು ಚವ್ಹಾಣ್ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ತಕ್ಷಣ ಚವ್ಹಾಣ್ ಅವರನ್ನು ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಪ್ರಭು ಚವ್ಹಾಣ್‌ಗೆ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಪ್ರಭು ಚವ್ಹಾಣ್ ಆರೋಗ್ಯ ಸ್ಛಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ. 

ಪುತ್ರನಿಗೆ ತಪ್ಪಿದ ಟಿಕೆಟ್‌: ಯಡಿಯೂರಪ್ಪರಿಂದ ಮೋಸ, ಈಶ್ವರಪ್ಪ ಆಕ್ರೋಶ

ತನ್ನನ್ನು ಸೋಲಿಸಲು ಯತ್ನಿಸಿದ್ದ ಖೂಬಾ ಎಂದು ಸಾರ್ವಜನಿಕವಾಗಿ ಪ್ರಭು ಚವ್ಹಾಣ್ ಗಳಗಳ ಅತ್ತಿದ್ದರು. ಹಲವು ವೇದಿಕೆಗಳಲ್ಲಿ ಖೂಬಾ ವಿರುದ್ದ ಹರಿಹಾಯ್ದಿದ್ದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಲಿಗೆ ಸಾರ್ವಜನಿಕ ವೇದಿಕೆಯಲ್ಲೇ ಸಾಷ್ಟಾಂಗ ನಮಸ್ಕಾರ ಹಾಕಿದ್ದ ಖೂಬಾಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದರು. ರಾಜ್ಯ ಹಾಗೂ ಕೇಂದ್ರದಲ್ಲಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡ ಹಿನ್ನಲೆಯಲ್ಲಿ ಮಾನಸಿಕವಾಗಿ ತೀವ್ರ ನೊಂದಿದ್ದರು ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.

ದಕ್ಷಿಣ ಕನ್ನಡ ಬಿಜೆಪಿ ಟಿಕೆಟ್ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ ಯಾರು? ಅವರ ಹಿನ್ನೆಲೆಯೇನು?

ಬೀದರ್‌ ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅವರನ್ನು ಸೋಲಿಸಿ ಜಯ ಸಾಧಿಸಿದ್ದ ಭಗವಂತ ಖೂಬಾ ಎರಡನೇ ಬಾರಿ ಅಂದಿನ ಹಾಲಿ ಸಚಿವರಾಗಿದ್ದ ಈಶ್ವರ್‌ ಖಂಡ್ರೆ ವಿರುದ್ಧವೂ ಭಾರಿ ಜಯ ಸಾಧಿಸಿ 2ನೇ ಬಾರಿಗೆ ಸಂಸತ್‌ ಪ್ರವೇಶಿಸುತ್ತಿದ್ದಂತೆ ಕೇಂದ್ರದಲ್ಲಿ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದ ಅವರು ಜಿಲ್ಲೆಯಲ್ಲಿ ಅವರದ್ದೇ ಪಕ್ಷದ ಜನಪ್ರತಿನಿಧಿಗಳೊಂದಿಗೆ ವಿರಸ ಎದುರಿಸಿದ್ದರು.ಖೂಬಾಗೆ ಟಿಕೆಟ್‌ ನೀಡದಂತೆ ಜಿಲ್ಲೆಯ ಬಿಜೆಪಿ ಶಾಸಕರೇ ರಾಜ್ಯ ಬಿಜೆಪಿ ಅಧ್ಯಕ್ಷರ ಬಳಿ, ಕೇಂದ್ರ ಸಚಿವರು, ಪಕ್ಷದ ಪ್ರಮುಖರು ಅಲ್ಲದೇ ಸಂಘ ಪರಿವಾರಕ್ಕೂ ದೂರು ನೀಡಿ ಪ್ರತ್ಯಕ್ಷ ಹಾಗೂ ಪರೋಕ್ಷ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಇದರೊಟ್ಟಿಗೆ ಖೂಬಾ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್‌ ಕೊಡಿ ಎಂಬ ಪಡೆಯೇ ಜಿಲ್ಲೆಯಲ್ಲಿ ರಚನೆಯಾಗಿತ್ತು.