ಬೆಂಗಳೂರು ನಗರ ಅಭಿವೃದ್ಧಿ ಚರ್ಚೆಯ ವೇಳೆ ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು  ಮುನಿರತ್ನ ನಡುವೆ ತೀವ್ರ ವಾಗ್ವಾದ ನಡೆಯಿತು. 'ತಾಕತ್ ಇಲ್ಲ' ಎಂಬ ಮುನಿರತ್ನರ ಸವಾಲಿಗೆ ಕೆರಳಿದ ಡಿಕೆಶಿ, ಅವರನ್ನು 'ಪುಡಿ ರೌಡಿ, ರೇ ಪಿಸ್ಟ್‌' ಎಂದು ನಿಂದಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. 

ವಿಧಾನಸಭೆ (ಮಾ.27): ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಬಿಜೆಪಿ ಸದಸ್ಯ ಮುನಿರತ್ನ ನಡುವೆ ವಾಗ್ವಾದ, ವೈಯಕ್ತಿಕ ನಿಂದನೆ, ಸವಾಲು-ಪ್ರತಿ ಸವಾಲು ದೊಡ್ಡ ಜಟಾಪಟಿ ನಡೆದು ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ಮುನಿರತ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರು ಸದನ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗವೂ ಜರುಗಿತು.

ಬೆಂಗಳೂರು ನಗರದ ಅಭಿವೃದ್ಧಿ ಕುರಿತು ನಡೆದ ಚರ್ಚೆಗೆ ಗುರುವಾರ ಡಿ.ಕೆ.ಶಿವಕುಮಾರ್‌ ಸುದೀರ್ಘವಾಗಿ ಉತ್ತರಿಸಿದರು. ಕೊನೆಯಲ್ಲಿ ಎದ್ದು ನಿಂತ ಮುನಿರತ್ನ, ‘ಬೆಂಗಳೂರು ಬಗ್ಗೆ ಮಾತನಾಡಲು ಅವಕಾಶ ಕೊಡಿ’ ಎಂದು ಕೇಳಿದರು. ಇದಕ್ಕೆ ಸ್ಪೀಕರ್‌ ಖಾದರ್‌ ಅವಕಾಶ ನೀಡಲಿಲ್ಲ. ಇದರಿಂದ ಕೆರಳಿದ ಮುನಿರತ್ನ, ‘ಉತ್ತರ ಕೊಡಲು ಡಿಸಿಎಂಗೆ ತಾಕತ್‌ ಇಲ್ಲ’ ಎಂದು ಹರಿಹಾಯ್ದರು. ಆಗ ಶಿವಕುಮಾರ್‌ ಮಾತನಾಡಿ, ‘ನಿನ್ನಂತಹ ಪುಡಿ ರೌಡಿಗೆ ನಾನು ಹೆದರಲ್ಲ. ನೀನು ರೇ ಪಿಸ್ಟ್‌, ಸೈಕೋ’ ಎಂದು ಕಿಡಿಕಾರಿದರು. ಆಗ ಸ್ಪೀಕರ್‌ ಖಾದರ್‌, ‘ಇಂಧ ಘಟನೆ ಸದನಕ್ಕೆ ಕಪ್ಪು ಚುಕ್ಕೆ. ಸದನದಲ್ಲಿ ಈ ರೀತಿ ವರ್ತನೆ ಮತ್ತು ಮಾತು ಖಂಡನೀಯ’ ಎಂದರು. ಅಲ್ಲಿಗೆ ಡಿ.ಕೆ.ಶಿವಕುಮಾರ್‌-ಮುನಿರತ್ನ ಕಾಳಗ ಅಂತ್ಯಗೊಂಡಿತು.

ಮುಂದುವರೆದು, ‘ಉತ್ತರ ನೀಡಲು ತಾಕತ್‌ ಇಲ್ಲ. ತಾಕತ್ ಇದ್ದರೆ ಉತ್ತರ ಕೊಡಿ. ಶಕ್ತಿ ಇರುವುದಕ್ಕೆ ನಾನು ಕುಳಿತಿದ್ದೇನೆ. ನಾನು ಹೆದರಲ್ಲ. ಉತ್ತರ ಕೊಡಿ’ ಎಂದು ಆಗ್ರಹಿಸಿದರು.

ಆಡಳಿತ ಪಕ್ಷದ ಸದಸ್ಯರ ಧರಣಿ:

ಇದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದು ಸಭ್ಯತೆನಾ? ರೌಡಿಸಂ ಮಾಡುತ್ತಿದ್ದಾರಾ? ಅತ್ಯಾ ಚಾರ, ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಮುನಿರತ್ನ ಅವರನ್ನು ಸದನದಿಂದ ಹೊರ ಹೋಗಬೇಕೆಂದು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಈ ವೇಳೆ ಡಿ.ಕೆ.ಶಿವಕುಮಾರ್‌, ನಾನು ಯೋಗ್ಯತೆ, ತಾಕತ್‌, ಧಮ್‌ ತೋರಿಸಬೇಕಾ ಎಂದು ಪ್ರಶ್ನಿಸಿದರು.

ಸದನಕ್ಕೆ ಕಪ್ಪು ಚುಕ್ಕೆ, ಇದು ಖಂಡನೀಯ:

ಈ ಹೈಡ್ರಾಮಾದ ಬಳಿಕ ಸ್ಪೀಕರ್‌ ಖಾದರ್‌, ‘ ಬಿಬಿಎಂಪಿ ಚರ್ಚೆ ಬಿಟ್ಟು ಉಳಿದೆಲ್ಲ ಕಡಿತದಿಂದ ತೆಗೆದು ಹಾಕಬೇಕು. ಇಂತಹ ಘಟನೆಗಳು ಸದನದಲ್ಲಿ ನಡೆಯಬಾರದು. ತಾಕತ್‌ ಇದ್ದವರೇ ಈ ಸದನಕ್ಕೆ ಬರುವುದು. ತಾಕತ್‌ ತೋರಿಸಲು ಇದು ಸ್ಥಳವಲ್ಲ. ಈ ರೀತಿಯ ಘಟನೆಗಳಿಂದ ಸದನಕ್ಕೆ ತಪ್ಪು ಸಂದೇಶ ಹೋಗಲಿದೆ. ಕರ್ನಾಟಕದಲ್ಲಿ ದ್ವೇಷ ರಾಜಕಾರಣ ನಡೆದಿಲ್ಲ.