ರಾಜ್ಯದ 37,777 ಸ್ಥಳಗಳಲ್ಲಿ ಸ್ಥಾಪನೆಯಾಗಿರುವ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಕಳೆದೊಂದು ತಿಂಗಳಿನಿಂದ ನಡೆದ ವಾಕ್ಸಮರ, ಟೀಕೆ, ಪ್ರತ್ಯುತ್ತರ ಸೇರಿದಂತೆ ಜಿದ್ದಾಜಿದ್ದಿ ಪೈಪೋಟಿಗೆ ಬುಧವಾರ ತೆರೆಬಿದ್ದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಇನ್ನೆರಡು ದಿನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಲಿದ್ದಾರೆ. ಇದಕ್ಕೆಲ್ಲಾ ಶನಿವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶವೇ ಉತ್ತರ ಹೇಳಲಿದೆ.

ಬೆಂಗಳೂರು(ಮೇ.11): ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಶಾಂತಿಯುತ ಮತದಾನ ನಡೆದಿದ್ದು, ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಚುನಾವಣಾ ಅಖಾಡಕ್ಕಿಳಿದಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಪ್ರಕಟವಾಗಲಿದೆ.

ರಾಜ್ಯದ 37,777 ಸ್ಥಳಗಳಲ್ಲಿ ಸ್ಥಾಪನೆಯಾಗಿರುವ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಕಳೆದೊಂದು ತಿಂಗಳಿನಿಂದ ನಡೆದ ವಾಕ್ಸಮರ, ಟೀಕೆ, ಪ್ರತ್ಯುತ್ತರ ಸೇರಿದಂತೆ ಜಿದ್ದಾಜಿದ್ದಿ ಪೈಪೋಟಿಗೆ ಬುಧವಾರ ತೆರೆಬಿದ್ದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಇನ್ನೆರಡು ದಿನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಲಿದ್ದಾರೆ. ಇದಕ್ಕೆಲ್ಲಾ ಶನಿವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶವೇ ಉತ್ತರ ಹೇಳಲಿದೆ.

Karnataka Election 2023: ಬಂಗಾರಪೇಟೆ ಬಿಜೆಪಿ ಅಭ್ಯರ್ಥಿ ಮತದಾನಕ್ಕೂ ಮೊದಲೇ ನಾಪತ್ತೆ..!

ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕಾಂಗ್ರೆಸ್‌ನಿಂದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ನಿಂದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೊದಲಾದವರು ಭರ್ಜರಿ ಪ್ರಚಾರ ನಡೆಸಿದ್ದರು. ಅವರ ಪ್ರಯತ್ನದ ಫಲ ಶನಿವಾರ ಫಲಿತಾಂಶದ ಮೂಲಕ ಹೊರಬೀಳಲಿದೆ.

ಅಖಾಡದಲ್ಲಿರುವ 2615 ಅಭ್ಯರ್ಥಿಗಳಲ್ಲಿ 2430 ಅಭ್ಯರ್ಥಿಗಳು ಪುರುಷರು, 184 ಅಭ್ಯರ್ಥಿಗಳು ಮಹಿಳೆಯರು ಮತ್ತು ಒಬ್ಬರು ತೃತೀಯ ಲಿಂಗಿಯಾಗಿದ್ದಾರೆ. ಬಿಜೆಪಿಯಿಂದ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ 223 ಕ್ಷೇತ್ರದಲ್ಲಿ ಹುರಿಯಾಳುಗಳಿದ್ದಾರೆ. ಜೆಡಿಎಸ್‌ನಿಂದ 209 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಎಪಿಯಿಂದ 209, ಸಿಪಿಐಎಂನಿಂದ 4, ಬಿಎಸ್‌ಪಿಯಿಂದ 133, ಎನ್‌ಪಿಪಿ 2 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ಪಕ್ಷದಿಂದ 254 ಮತ್ತು ಪಕ್ಷೇತರ 918 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರೆಲ್ಲರ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ಮತ ಎಣಿಕೆಯು ಆಯಾ ಜಿಲ್ಲಾ ಕೇಂದ್ರದಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಮತಯಂತ್ರಗಳನ್ನು ಸಂಬಂಧಪಟ್ಟಜಿಲ್ಲೆಯ ಭದ್ರತಾ ಕೊಠಡಿಯಲ್ಲಿ ಭದ್ರವಾಗಿಡಲಾಗಿದೆ. ಶನಿವಾರ ಬೆಳಗ್ಗೆ ಭದ್ರತಾ ಕೊಠಡಿಯಿಂದ ಮತಯಂತ್ರಗಳನ್ನು ತಂದು ಎಣಿಕೆ ಮಾಡಲಾಗುತ್ತದೆ. ಮತಯಂತ್ರ ಇಟ್ಟಿರುವ ಭದ್ರತಾ ಕೊಠಡಿಗೆ ಎರಡು ದಿನಗಳ ಪೊಲೀಸ್‌ ಕಣ್ಗಾವಲು ಇಡಲಾಗಿದೆ.